ಜೆಎಸ್‌ಡಬ್ಲ್ಯುನಿಂದ 1287 ಪೌಷ್ಟಿಕ ಆಹಾರ ಕಿಟ್ ವಿತರಣೆ ಕ್ಷಯರೋಗಕ್ಕೆ ಭಯ ಬೇಡ, ಉಚಿತ ಚಿಕಿತ್ಸೆ ಲಭ್ಯ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರ

Vijayanagara Vani
ಜೆಎಸ್‌ಡಬ್ಲ್ಯುನಿಂದ 1287 ಪೌಷ್ಟಿಕ ಆಹಾರ ಕಿಟ್ ವಿತರಣೆ ಕ್ಷಯರೋಗಕ್ಕೆ ಭಯ ಬೇಡ, ಉಚಿತ ಚಿಕಿತ್ಸೆ ಲಭ್ಯ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರ
ಬಳ್ಳಾರಿ,ಆ.26
ಸಾವಿರಾರು ವರ್ಷಗಳಿಂದ ಸಮುದಾಯದಲ್ಲಿ ಬೇರುರಿರುವ ಕ್ಷಯರೋಗ (ಟಿಬಿ) ಕೊನೆಗಾಣಿಸಲು ಉಚಿತ ಚಿಕಿತ್ಸೆ ಲಭ್ಯವಿದ್ದು, ಜೊತೆಗೆ ರೋಗವನ್ನು ಸಕಾಲದಲ್ಲಿ ಗುಣಪಡಿಸಲು ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆಯಿರಿ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಆಶ್ರಯದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜೆಎಸ್‌ಡಬ್ಲ್ಯು ಫೌಂಡೇಷನ್ ಸಂಸ್ಥೆಯು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 1287 ರೋಗಿಗಳನ್ನು ಪ್ರಧಾನಮಂತ್ರಿ ಕ್ಷಯಮುಕ್ತ ಅಭಿಯಾದನದಡಿ ದತ್ತು ತೆಗೆದುಕೊಂಡು ಅವರಿಗೆ ಮುಂದಿನ ಆರು ತಿಂಗಳು ವಿವಿಧ ದವಸ-ಧಾನ್ಯ ಒಳಗೊಂಡ ಕಿಟ್ ಒದಗಿಸುವ ಒಪ್ಪಂದದoತೆ ಒದಗಿಸಿದ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.
ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎಂಬ ರೋಗಾಣುನಿಂದ ಹರಡುವ ಈ ಕಾಯಿಲೆ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳಾಗಿದ್ದು, ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಪಣತೊಡಬೇಕಿದೆ ಎಂದು ಹೇಳಿದರು.
ಕ್ಷಯವೆಂದು ಖಚಿತಪಟ್ಟಲ್ಲಿ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ದೇಶನದಂತೆ, 6 ತಿಂಗಳು ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗಿ ಕ್ಷಯಮುಕ್ತ ಬಳ್ಳಾರಿಗಾಗಿ ಕೈಜೋಡಿಸಬೇಕು ಎಂದು ತಿಳಿಸಿದರು.
ಜೆಎಸ್‌ಡಬ್ಲ್ಯು ಫೌಂಡೇಷನ್ ವಿಜಯನಗರ, ಸೇಲಂನ ಅಧ್ಯಕ್ಷ ಪಿ.ಕೆ.ಮುರುಗನ್ ಮಾತನಾಡಿ, ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರ ಆರೋಗ್ಯ ಸುಧಾರಣೆಗೆ ಕಟಿಬದ್ದರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ 45 ಲಕ್ಷ ರೂ. ವೆಚ್ಚದಲ್ಲಿ ಕೀಟ್‌ಗಳನ್ನು ವಿತರಿಸಲಾಗಿದೆ. ಜೊತೆಗೆ ಆರೋಗ್ಯದ ಕ್ಷೇತ್ರದ ಇತರ ಯಾವುದೇ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜೆಎಸ್‌ಡಬ್ಲ್ಯು ಅಧಿಕಾರಿಗಳಾದ ರಾಜೇಂದ್ರ, ಮುತ್ತುಕೃಷ್ಣ, ಪೆದ್ದಣ, ಪಂಪಾಪತಿ, ಅರ್ಚನಾ ಹಾಗೂ ಸಿಬ್ಬಂದಿಯವರು ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!