ವಿಜಯನಗರವಾಣಿ ಸುದ್ದಿ :
ರಾಯಚೂರು ಜಿಲ್ಲೆ:
ಲಿಂಗಸೂಗೂರು ರಾಧಾಕೃಷ್ಣನ್ ರಾಷ್ಟ್ರ ಕಂಡ ದಾರ್ಶನಿಕ: ಬಸವರಾಜ ವೈ
ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಹುದ್ದೆಯವರೆಗೂ ಸಾಗಿ ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ ಮಹಾನ್ ದಾರ್ಶನಿಕ ಎಂದು ಪ್ರಾಚಾರ್ಯ ಬಸವರಾಜ ವೈ ಹೇಳಿದರು.
ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ – ರಾಧಾಕೃಷ್ಣನರು ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ‘ಧರ್ಮ ಮತ್ತು ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಅಪ್ರತಿಮ ವ್ಯಕ್ತಿ ಎಂದು ಗುಣಗಾನ ಮಾಡಿದರು.
ಈ ವೇಳೆ ಪ್ರಾಧ್ಯಾಪಕರಾದ ಮಂಜುನಾಥ ಕಾಮಿನ್, ಡಾ. ಶಶಿಕಾಂತ, ಭೀಮಸಿಂಗ್ ನಾಯ್ಕ್, ಬಸವರಾಜ ಖೈರವಾಡಗಿ, ಅಕ್ಷತಾ, ಅನಿಲಕುಮಾರ ಮಿಶ್ರಾ, ಸರಸ್ವತಿ ಕಂದಕೂರ ಇದ್ದರು.