ವಿಜಯನಗರವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ :ನಮ್ಮ ತೋಟ, ನಮ್ಮ ಭೂಮಿ ಯೋಜನೆಯ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಬನ್ನಿಗೋಳ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಕಾಲ ಧರಣಿ ನಡೆಸಲಾಗುತ್ತಿದೆ ಎಂದು ಮುಖಂಡ ಆನಂದ ರೆಡ್ಡಿ ಹೇಳಿದರು.ತಾಲೂಕಿನ ಬನ್ನಿಗೋಳ ಗ್ರಾಮ ಪಂಚಾಯಿತಿಯ ಕಚೇರಿಯ ಮುಂದೆ ಬನ್ನಿಗೋಳ, ಶೀಗೆನಹಳ್ಳಿ ಗ್ರಾಮದ ಫಲಾನುಭವಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಬನ್ನಿಗೋಳ ಮತ್ತು ಸಿಗೇನಹಳ್ಳಿ ಗ್ರಾಮದಲ್ಲಿ ಕೆಲವು ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳೆದ ಏಳೆಂಟು ವರ್ಷಗಳ ಹಿಂದೆಯೇ ನಮ್ಮ ತೊಟ, ನಮ್ಮ ಭೂಮಿ ಯೋಜನೆಯಡಿಯಲ್ಲಿ ಭೂಮಿಗಳನ್ನು ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಪಟ್ಟಾಗಳನ್ನು ವಿತರಿಸುವಲ್ಲಿ ಗ್ರಾಪಂ ಆಡಳಿತ ನಿರ್ಲಕ್ಷ್ಯ ಧೋರಣೆ ಪಾಲಿಸುತ್ತಿದೆ. ಹಲವು ಬಾರಿ ಫಲಾನುಭವಿಗಳು ಪಟ್ಟಾ ವಿತರಿಸುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಶೀಘ್ರವೇ ಫಲಾನುಭವಿಗಳಿಗೆ ಪಟ್ಟಾಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಮನವಿ ಸ್ವೀಕರಿಸಿ ಮಾತನಾಡಿ, ನಮ್ಮ ತೋಟ, ನಮ್ಮ ಭೂಮಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಭೂಮಿಗಳನ್ನು ವಿತರಿಸಲಾಗಿತ್ತು. ಕಾರಣಾಂತರಗಳಿಂದ ಪಟ್ಟಾ ವಿತರಿಸುವುದು ವಿಳಂಬವಾಗಿದೆ. ಕೂಡಲೇ ಜಿಲ್ಲಾಪಂಚಾಯಿತಿ ಸಿಇಒರಿಗೆ ವರದಿ ಕಳುಹಿಸಿ ಪಟ್ಟಾ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ವೇಳೆ ಮುಖಂಡ ಟಿ.ಮಾರುತೇಶ, ಮಲ್ಲೇಶ್ ಪೂಜಾರ, ವೀರಯ್ಯ, ಸಿ.ಮುದಿಯಪ್ಪ, ಪೂಜಾರ ಫಕ್ಕಿರಪ್ಪ, ಬಸರಕೋಡು ರಾಮಣ್ಣ, ಮೈಲಪ್ಪ, ಫಕ್ಕಿರಮ್ಮ, ಹಡಪದ ಸಿದ್ಲಿಂಗಮ್ಮ, ಬಲ್ಲಾಹುಣ್ಸಿ ಕಾಳಮ್ಮ, ಗೌಡ್ರು ಗಂಗಮ್ಮ, ತಳವಾರ ಹನುಮವ್ವ, ಗದ್ದಿಕೇರಿ ಚಂದ್ರಮ್ಮ, ಸಾವಿತ್ರಮ್ಮ, ತಳವಾರ ದುಗ್ಗಮ್ಮ ಇತರರಿದ್ದರು.