ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಕಂಪ್ಲಿ: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಿಪಿಐ ಸುರೇಶ್ ಹೆಚ್.ತಳವಾರ ಖಡಕ್ ಸೂಚನೆ ನೀಡಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪೊಲೀಸ್ ಇಲಾಖೆವತಿಯಿಂದ ಇಂದು ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿಯ ಬೈಕ್ ಜಾಥಕ್ಕೆ ಚಾಲನೆ ನೀಡುವ ಜತೆಗೆ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಹೂ ನೀಡುವ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದ ನಂತರ ಮಾತನಾಡಿ, ‘ವಾಹನ ಸವಾರರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸದಾ ಕಡ್ಡಾಯವಾಗಿ ಜತೆಯಲ್ಲಿಟ್ಟುಕೊಂಡಿರಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಸ್ಥಳದಲ್ಲಿಯೇ ದಂಡ ತೆರಬೇಕಾಗುತ್ತದೆ. 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಅಪರಾಧ. ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿ ಎಂದರು.
ನಂತರ ಪಿಎಸ್ಐ ಮೌನೇಶ್ ಉ.ರಾಥೋಡ್ ಮಾತನಾಡಿ, ‘ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದರಿಂದ ಸಂಭವನೀಯ ಅಪಘಾತಗಳಿಂದ ತಲೆಗೆ ಪೆಟ್ಟಾಗುವುದು ತಪ್ಪುತ್ತದೆ. ಹೆಲ್ಮೆಟ್ ಧರಿಸುವ ಮೂಲಕ ಜೀವ ರಕ್ಷಿಸಿಕೊಳ್ಳಿ. ಪೊಲೀಸರು ನೀಡುವ ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದರೆ, 500 ರೂ. ದಂಡ ಕಟ್ಟಬೇಕಾಗುತ್ತೆ. ಮಾಸ್ಕ್ ಇಲ್ಲವಾದಲ್ಲಿ ಒಂದು ನೂರು ದಂಡ ವಿಧಿಸಲಾಗುವುದು ಎಂದರು.ಇಲ್ಲಿನ ಪೊಲೀಸ್ ಠಾಣೆಯಿಂದ ಆರಂಭಗೊಂಡ ಹೆಲ್ಮೆಟ್ ಜಾಗೃತಿಯ ಬೈಕ್ ಜಾಥವು ನಡುವಲ ಮಸೀದಿ, ಡಾ.ರಾಜಕುಮಾರ್ ಮುಖ್ಯ ರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಕೊಟ್ಟಾಲ್ ರಸ್ತೆ, ತಹಶೀಲ್ದಾರ್ ಕಛೇರಿ ಬಳಿ ತೆರಳಿ, ಹಿಂದುರಿಗಿ, ಹೊಸ ಬಸ್ ನಿಲ್ದಾಣ, ಮುದ್ದಾಪುರ ಅಗಸಿ, ಉದ್ಭವ ಗಣೇಶ್ ದೇವಸ್ಥಾನ ಮುಖಾಂತರ ಪೊಲೀಸ್ ಠಾಣೆ ಆವರಣದಲ್ಲಿ ಮುಕ್ತಾಯಗೊಂಡಿತು.ಇದೇ ಸಂದರ್ಭದಲ್ಲಿ ವರದಿಗಾರರಿಗೆ ಹೆಲ್ಮೆಟ್ ವಿತರಿಸಿದರು.ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಬಸಪ್ಪ ಲಮಾಣಿ, ಎಎಸ್ಐ ಹಗರಪ್ಪ, ಸಿ.ಪರಶುರಾಮ, ಪೇದೆ(ಎಸ್.ಬಿ) ಸಂತೋಷ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.