ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ದೌರ್ಜನ್ಯ ಪ್ರಕರಣವನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆ ತನಿಖೆಗೆ ಒಪ್ಪಿಸಬೇಕು ಎಂದು ಸಿಐಟಿಯು ತಾಲೂಕು ಪ್ರದಾನ ಕಾರ್ಯದರ್ಶಿ ಎಸ್.ಜಗನ್ನಾಥ ಒತ್ತಾಯಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಉತ್ತರ ಪ್ರದೇಶದ ಹತ್ರಾಸ್ನ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣವು ಕ್ರೂರ ಕೃತ್ಯವಾಗಿದೆ. ಪ್ರಕರಣದ ವಿರುದ್ಧ ದೇಶದ ಜನರು ಬೀದಿಗಿಳಿದಿದ್ದಾರೆ. ಆದರೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಅಪರಾಧಿಗಳಿಗೆ ರಕ್ಷಣೆ ನೀಡುವ ಮೂಲಕ ದಲಿತರನ್ನು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವವರನ್ನು ಭಯಭಿತರನ್ನಾಗಿಸುತ್ತಿದೆ. ಪ್ರಕರಣವನ್ನು ಕೂಡಲೇ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ, ನಿಗದಿತ ಅವಧಿಯಲ್ಲಿ ಪರಿಣಾಮಕಾರಿ ತನಿಕೆ ಮಾಡಬೇಕು.ಕರ್ತವ್ಯವನ್ನು ಉಲ್ಲಂಘಿಸಿರುವ ಪೊಲೀಸ್ ಮತ್ತು ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಮೃತ ಯುವತಿಯ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದರು.ಸಿಐಟಿಯು, ಕರ್ನಾಟಕ ಪ್ರಾಂತ ರೈತಸಂಘ, ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ, ದಲಿತ ಮಹಿಳಾ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ ಸಂಘಟನೆಯ ಪದಾಧಿಕಾರಿಗಳು ರಾಮನಗರ ಈಶ್ವರ ದೇಗುಲದಿಂದ ಬಸವೇಶ್ವರ ವೃತ್ತದವರೆಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಲ್ನಡಿಗೆ ಜಾಥಾ ನಡೆಸಿ ಉಪತಹಶೀಲ್ದಾರ ಮಂಜುನಾಥರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಜಿಲ್ಲಾಧ್ಯಕ್ಷ ಬಿ.ಗೋಣಿಬಸಪ್ಪ, ಮುಖಂಡರಾದ ಬಿ.ಸಿದ್ದನಗೌಡ, ಎಚ್.ಮಂಜುನಾಥ, ದೊಡ್ಡಬಸವರಾಜ, ಬಿ.ಮೈಲಮ್ಮ, ಪಿ.ಚಾಂದಬಿ, ರಂಗಪ್ಪ ದಾಸರ್, ಬಿ.ಮಾಳಮ್ಮ, ಕೆ.ಗೌರಮ್ಮ, ರಾಜು, ಕೆ.ಗಾಳೆಪ್ಪ, ಬಿ.ಜ್ಯೋತಿ, ಜಿ.ಸರೋಜಮ್ಮ, ಜಿ.ರತ್ನಮ್ಮ ಇತರರಿದ್ದರು.