ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಹಗರಿಬೊಮ್ಮನಹಳ್ಳಿ :ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ನ ಸದಸ್ಯೆ ಕವಿತಾ ಹಾಲ್ದಾಳ್ 12 ಮತಗಳಿಂದ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿಜೆಪಿ ಸದಸ್ಯ ಹುಳ್ಳಿ ಮಂಜುನಾಥ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪುರಸಭೆ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಕವಿತಾ ಹಾಲ್ದಾಳ್, ಪಕ್ಷೇತರ ಸದಸ್ಯ ಸಂಜೋತಾ ನವೀನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ ಹುಳ್ಳಿ ಮಂಜುನಾಥ, ಕಾಂಗ್ರೆಸ್ ಸದಸ್ಯ ಹನುಮಂತ ಜೋಗಿ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಾಂಗ್ರೆಸ್ನ ಕವಿತಾ ಹಾಲ್ದಾಳ್ 12 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಸಂಜೋತಾ ನವೀನ್ 10 ಮತಗಳನ್ನು ಪಡೆದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ 2 ಮತಗಳ ಅಂತರದಲ್ಲಿ ಜಯ ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋಗಿ ಹನುಮಂತ 10 ಮತಗಳನ್ನು ಪಡೆದ ಕಾರಣ 12 ಮತ ಪಡೆದ ಬಿಜೆಪಿಯ ಹುಳ್ಳಿ ಮಂಜುನಾಥ್ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣೆಗೂ ಮುನ್ನಾ ನಾಮಪತ್ರ ಸಲ್ಲಿಕೆಯ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿ ನೂಕಾಟ ನಡೆದು ನಂತರ ಶಾಸಕ ಮತ್ತು ಮಾಜಿ ಶಾಸಕರ ನಡುವೆಯೂ ವಾಗ್ವಾದ ನಡೆಯಿತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡುವಂತಾಗಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ರಘುಕುಮಾರ್ ಮತಕೇಂದ್ರದ ಮುಂದೆ ಯಾವುದೇ ಕಾರ್ಯಕರ್ತರು ನಿಲ್ಲದಂತೆ ಆದೇಶಿಸಿದರು.