ಬಳ್ಳಾರಿ : ಜಿಲ್ಲೆಯ ವಿಭಜನೆಯನ್ನು ವಿರೋಧಿಸಿರುವ ಅಖಂಡ ಬಳ್ಳಾರಿ ಹೋರಾಟ ಸಮಿತಿ, ಕರ್ನಾಟಕ ಜನಸೈನ್ಯ ಸಂಘಟನೆ ವಿಭಜನೆ ಕುರಿತು ಸರ್ಕಾರ ಆಕ್ಷೇಪಣೆಗಳನ್ನು ಆಹ್ವಾನಿಸುವ ಮುನ್ನವೇ, ಆಕ್ಷೇಪಣೆ ವ್ಯಕ್ತಪಡಿಸಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಪತ್ರ ಚಳವಳಿಯನ್ನು ಆರಂಭಿಸಿದೆ. ನಗರದ ಗಡಿಗಿ ಚೆನ್ನಪ್ಪ ವೃತ್ತದಬಳಿ ಕರ್ನಾಟಕ ಜನಸೈನ್ಯ ಸಂಘಟನೆಯ ವೇದಿಕೆಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಜನ ಬಂದು ಪತ್ರ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿಭಜನೆ ವಿರುದ್ಧ ಕಾನೂನು ಹೋರಾಟ ಹಮ್ಮಿಕೊಳ್ಳುವುದಕ್ಕೂ ಮೊದಲು ಮುಖ್ಯನ್ಯಾಯಾಧೀಶರ ಗಮನ ಸೆಳಯುವ ಪ್ರಯತ್ನದ ಭಾಗವಾಗಿ ಪತ್ರ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ಪತ್ರ ಚಳವಳಿಯ ಪರಿಣಾಮ ಮತ್ತು ಪ್ರಭಾವವನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಸಮಿತಿಯು ನಿರ್ಧರಿಸಿದೆ.
ವಿಭಜನೆಯ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡುವ ಮೂಲಕ ಬಳ್ಳಾರಿ ಮತ್ತು ಕರ್ನಾಟಕದಾದ್ಯಂತ ಗೊಂದಲವನ್ನು ಸೃಷ್ಟಿಸಿ, ಅಶಾಂತಿಗೆ ದಾರಿ ಮಾಡಲಾಗಿದೆ. ರಾಜಕೀಯ ದುರುದ್ದೇಶವಲ್ಲದೆ ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯೂ ಈ ನಿರ್ಧಾರದ ಹಿಂದೆ ಇಲ್ಲವೆಂದು. ಹೊಸಪೇಟೆಯಲ್ಲಿ ತುಂಗಭದ್ರ ಜಲಾಶಯ, ಮತ್ತು ನದಿ ದಂಡೆ, ಕಾಲುವೆಗಳು, ವಿಶ್ವ ಪಾರಂಪರಿಕ ಐತಿಹಾಸಿಕ ಹಂಪಿ ಸ್ಮಾರಕಗಳು ಇರುವುದರಿಂದ ಜಿಲ್ಲಾಕೇಂದ್ರದ ಕಟ್ಟಡಗಳನ್ನು ನಿರ್ಮಿಸಲು ಸ್ಥಳವೂ ಇಲ್ಲ. ಹೊಸಪೇಟೆ ತಾಲ್ಲೂಕಿನಲ್ಲಿ ಕಂದಾಯ ಭೂಮಿಗಳ ಲಭ್ಯತೆಯೂ ಇಲ್ಲ. ಅಲ್ಲದೆ ಹೊಸಪೇಟೆಯು ವಿಜಯನಗರ ಜಿಲ್ಲಾ ಕೇಂದ್ರವಾಗುವುದರ ಕುರಿತು ಪಶ್ಚಿಮ ತಾಲ್ಲೂಕುಗಳಲ್ಲಿ ಒಮ್ಮತವಿಲ್ಲ. ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸಾರ್ವಜನಿಕರು ತಮ್ಮ ತಾಲ್ಲೂಕು ಕೇಂದ್ರವನ್ನೇ ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದು ಆಗ್ರಹಿಸಿ ಧರಣಿ, ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಚರ್ಚೆಗಳನ್ನು ಸರ್ಕಾರ ನಡೆಸದೆಯೇ ಜಿಲ್ಲಾ ಕೇಂದ್ರವನ್ನಾಗಿ ಹೊಸಪೇಟೆಯನ್ನು ರೂಪಿಸಲು ನಿರ್ಧರಿಸಿರುವ ಬಗ್ಗೆ ಸಹ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಪತ್ರದಲ್ಲೇ ಉಲ್ಲೇಖಿಸಿರುವುದು:
ಕರ್ನಾಟಕ ಸರ್ಕಾರವು ಬಳ್ಳಾರಿಯನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಿ `ವಿಜಯನಗರ’ ಎಂಬ ಹೊಸ ಜಿಲ್ಲೆಯನ್ನು ಮಾಡಲು ಪ್ರಸ್ತಾಪ ಮಾಡಿದೆ. ಈ ಪ್ರಸ್ತಾಪಕ್ಕೆ ಯಾವುದೆ ಕಾರಣಗಳನ್ನು ಕೊಡದೆ, ರಾಜಕೀಯ ದುರುದ್ದೇಶದಿಂದ ಪ್ರೇರಿತವಾದ ಈ ಪ್ರಸ್ತಾವನೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಆದ್ದರಿಂದ ತಾವು, ಪ್ರಸ್ತಾವನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರುತ್ತೇವೆಂದು ಪತ್ರದಲ್ಲಿದೆ.
ವೇದಿಕೆಯ ಮುಖಂಡರಾದ ಬಿ.ಹೊನ್ನೂರಪ್ಪ, ಲಕ್ಷ್ಮಿನಾರಾಯಣಶೆಟ್ಟಿ, ಚೆಂಚಯ್ಯ, ಫಯಾಜ್ ಭಾಷ, ನಾಸೀರ್, ರಾಧಾಕೃಷ್ಣ, ಮುರಳಿ, ಗುರುರಾಜ್, ಚಿಟ್ಟಿ, ಆನಂದ್, ಶ್ರೀನಿವಾಸ್ಹೋರಾಟ ಸಮಿತಿಯ ಮುಖಂಡರಾದ ದರೂರು ಪುರುಷೋತ್ತಮಗೌಡ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕುಡುತಿನಿ ಶ್ರೀನಿವಾಸ, ವೀರೇಶ್ ಮೊದಲಾದವರು ಪಾಲ್ಗೊಂಡಿದ್ದರು