ರಾಯಚೂರು,ಜ.04- ಹೊಸ ಶಿಕ್ಷಣ ನೀತಿಯಂತೆ ತ್ವರಿತ ಹಾಗೂ ಗುಣಮಟ್ಟದ ಪರೀಕ್ಷೆ ಕಾರ್ಯಗಳಿಗೆ ಮೊದಲ ಪ್ರಾಶಸ್ತ್ಯ ನೀಡಲು ಶ್ರಮಿಸುವುದಾಗಿ ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಸಚಿವ (ಮೌಲ್ಯಮಾಪನ) ಪೆÇ್ರ.ವಿಶ್ವನಾಥ ಎಂ. ಹೇಳಿದರು.
ನಗರದ ಹೊರವಲಯದಲ್ಲಿನ ಯರಗೇರಾ ಸ್ನಾತಕೋತ್ತರ ಕೇಂದ್ರದಲ್ಲಿನ ವಿವಿ ಕಚೇರಿಯಲ್ಲಿ ಸೋಮವಾರ ಕಡತಕ್ಕೆ ಸಹಿ ಹಾಕುವ ಮೂಲಕ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ನೂತನವಾಗಿ ಆರಂಭವಾದ ರಾಯಚೂರು ವಿಶ್ವವಿದ್ಯಾಲಯದಲ್ಲಿ ಆರಂಭದಿಂದಲೆ ತ್ವರಿತ ಹಾಗೂ ಗುಣಮಟ್ಟದ ಪರೀಕ್ಷೆ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಈ ಭಾಗದ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಿ ಎರಡೂ ಜಿಲ್ಲೆಗಳ ಎಲ್ಲಾ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಪೆÇ್ರೀತ್ಸಾಹಿಸಲಾಗುವುದು. ವಿಶ್ವವಿದ್ಯಾಲಯ ಕುಲಪತಿಯವರೊಂದಿಗೆ ಸೇರಿಕೊಂಡು ಮಾದರಿ ರಾಯಚೂರು ವಿಶ್ವವಿದ್ಯಾಲಯಕ್ಕಾಗಿ ಶ್ರಮಿಸುವ ಭರವಸೆ ನೀಡಿದರು. ಹೊಸ ಶಿಕ್ಷಣ ನೀತಿಯಂತೆ ಪ್ರವೇಶ, ಆಡಳಿತ, ಪರೀಕ್ಷಾ ವಿಭಾಗದಲ್ಲಿ ಸಮಗ್ರ ಸುಧಾರಣೆ ತರಲು ಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಪತಿ ಡಾ.ಹರೀಶ ರಾಮಸ್ವಾಮಿ ಅವರು ನೂತನ ಕುಲಸಚಿವರನ್ನು ಸ್ವಾಗತಿಸಿ, ಅಭಿನಂದಿಸಿದರು. ಗುವಿವಿಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ.ಪಾರ್ವತಿ ಸಿ.ಎಸ್., ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ನುಸ್ರತ್ ಫಾತಿಮಾ, ಉಪಕರಣಾತ್ಮಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಪಿ.ಭಾಸ್ಕರ್, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ವಾಸುದೇವ ಜೇವರ್ಗಿ, ಉಪ ಗ್ರಂಥಪಾಲಕರು ಹಾಗೂ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಜಿ.ಎಸ್.ಬಿರಾದಾರ್ ಅವರು ನೂತನ ಪ್ರಥಮ ಕುಲಸಚಿವ (ಮೌಲ್ಯಮಾಪನ) ಅವರಿಗೆ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೆಟ್ ಸದ್ಯರಾದ ಡಾ.ರವಿಕುಮಾರ ಮಾಳಿಗೇರ, ಖ್ಯಾತ ತಳಿ ವಿಜ್ಞಾನಿ ಡಾ.ಸುಮಿಂದ್ರ ಕುಲಕರ್ಣಿ, ಸುವರ್ಣ ಕರ್ನಾಟಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಬಾಬುರಾವ್ ಎಂ. ಶೇಗುಣಸಿ ಇತರರಿದ್ದರು