ರಾಯಚೂರು:ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಇದೇ ಜನವರಿ 26ರಂದು ನಗರದ ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ್ ಸೂಚನೆ ನೀಡಿದರು.
ಅವರು ಜ.15ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಸಿಕೆ ಲಭ್ಯವಾದರೂ ಕೋವಿಡ್-19 ಸೋಂಕನ್ನು ಹತ್ತಿಕ್ಕಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಕಾರಣ ಈ ಬಾರಿಯ ಗಣರಾಜ್ಯೋತ್ಸವವನ್ನು ಸರಳ ಹಾಗೂ ಸಡಗರವಾಗಿ ಆಚರಿಸೋಣ, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ಜ.26ರ ಬೆಳಿಗ್ಗೆ 8 ಗಂಟೆಗೆ ತಮ್ಮ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, 8.45ಕ್ಕೆ ಡಿ.ಎ.ಆರ್. ಪೊಲೀಸ್ ಮೈದಾನಕ್ಕೆ ಆಗಮಿಸಬೇಕು, ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡುವರು ಎಂದರು.
ಡಿ.ಎ.ಆರ್. ಪೊಲೀಸ್ ಮೈದಾನವನ್ನು ಮರಂ ಹಾಕಿ ಸಮತಟ್ಟು ಮಾಡಬೇಕು, ಅಲ್ಲಿ ಆಸನಗಳು ಹಾಗೂ ಶಾಮಿಯಾನವನ್ನು ಲೊಕೋಪಯೋಗಿ ಇಲಾಖೆಯವರು ನಿರ್ವಹಿಸಬೇಕು, ತೋಟಗಾರಿಕೆ ಇಲಾಖೆಯವರು ಹೂವಿನ ಗಿಡಗಳ ಅಲಂಕಾರ, ಪೊಲೀಸ್ ಇಲಾಖೆಯಿಂದ ಪರೇಡ್ ಹಾಗೂ ಭದ್ರತೆ ನಿಯೋಜನೆ ಮಾಡಬೇಕು, ನಗರಸಭೆಯಿಂದ ದೀಪಾಲಂಕಾರದ ವ್ಯವಸ್ಥೆ ಆಗಬೇಕು ಎಂದರು.
ಸರ್ಕಾರದ ಆದೇಶದಂತೆ ಈ ಬಾರಿ ಮಹಾತ್ಮಾಗಾಂಧಿಯವರ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಬೇಕು, ಪಥಸಂಚಲನ ನಡೆಸುವ ಪೊಲೀಸರಿಗೆ ಕಡ್ಡಾಯಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಿಬೇಕು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಆಗಮಿಸಬೇಕು ಎಂದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕ ದಂಡಪ್ಪ ಬೀರಾದರ ಸ್ವಾಗತಿಸಿದರು.