ರಾಯಚೂರು, ಫೆ.6: ಸಮೂಹ ಸಂವಹನ ಒಂದು ಕಲೆ. ಡಿಜಿಟಲ್ ಮಾಧ್ಯಮಗಳ ಸಹಾಯದಿಂದ ಮಾಹಿತಿಯನ್ನು ಪರಿಣಾಮಕಾರಿಯಾಗಿ ಹಾಗೂ ಹೆಚ್ಚು-ಹೆಚ್ಚು ಜನರಿಗೆ ತಲುಪುವಂತೆ ಪ್ರಚಾರ ಮಾಡುವ ಕಲೆಯನ್ನು ಅರಿತುಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಬಹುದು ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಹಿರಿಯ ಉಪನ್ಯಾಸಕ ತಾಯಪ್ಪ ಮರ್ಚೇಡ್ ಹೇಳಿದರು.ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲಾಗಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಫೋನ್ಗಳ ಬಳಕೆ ಹೆಚ್ಚಾದಾಗಿನಿಂದ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮ ತಲ್ಲಣಿಸಿವೆ. ಸಂವಹನ, ಮಾಹಿತಿ, ಮನರಂಜನೆ, ಇ-ಕಾಮರ್ಸ್ ಸೇರಿದಂತೆ ಬಹುತೇಕ ಎಲ್ಲಾ ಉದ್ದೇಶಗಳಿಗೂ ಮೊಬೈಲ್ ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಲ್ಲಿ ಸಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆ ಅಥವಾ ವೈಯಕ್ತಿಕ ಫೋಟೋ-ವಿಡಿಯೋ ಹಾಕುವಂತಗ ಕಾಲಹರಣ ಉದ್ದೇಶಗ ಬಳಸಿಕೊಳ್ಳದೇ, ನಮ್ಮ-ನಮ್ಮ ವ್ಯವಹಾರ, ಕಸಬುಗಳನ್ನು ಪ್ರಚಾರ ಮಾಡಲು ಮತ್ತು ಹೆಚ್ಚು-ಹೆಚ್ಚು ಜನರಿಗೆ ಸಂಬಂಧಿಸಿದ ಮಾಹಿತಿ ಮುಟ್ಟಿಸಲು ವಿದ್ಯಾರ್ಥಿಗಳು ಬಳಸಬೇಕು ಎಂದು ಸಲಹೆ ನೀಡಿದರು.ಈಹೊತ್ತಿನ ಮೊಬೈಲ್ ಆಧಾರಿತ ಡಿಜಿಟಲ್ ಜಗತ್ತಿನಲ್ಲಿ ಸಮೂಹ ಸಂವಹನ ವಿಷಯವನ್ನು ಕಲಿಯುವ ಆಯಾಮ ಬದಲಾಗಿದೆ. ಅದನ್ನು ಅರಿತು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹೊಸ ದೃಷ್ಟಿಕೋನ ಇಟ್ಟುಕೊಂಡು ಎದುರಾಗುತ್ತಿರುವ ಸವಾಲುಗಳಿಗಳಿಗ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಹಾಗೂ ವೈಚಾರಿಕತೆಯನ್ನು ವಿಸ್ತರಿಸಿಕೊಳ್ಳಬೇಕು, ತಂತ್ರಜ್ಞಾನದ ಜೊತೆಜೊತೆಗೇ ನಾವೂ ಬೆಳೆಯಬೇಕು. ಆಗಲೇ ಹೊಸದನ್ನು ಸಾಧಿಸಲು ಹಾಗೂ ಔದ್ಯೋಗಿಕವಾಗಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥ ವಿಜಯ್ ಸರೋದೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.