ಲಿಂಗಸುಗೂರು : ಅನುದಾನ ದುರ್ಬಳಕೆ ಮಾಡಿಕೊಂಡಿಲ್ಲ ಆದರೆ ಸತತ ಐದು ವರ್ಷಗಳ ಕಾಲ ನಮಗೆ ಅಧ್ಯಕ್ಷರಾಗಿ ಮುಂದುವರೆಯಲು ಸಹಕರಿಸಿದ 22 ಜನ ಸದಸ್ಯರಿಗೆ ಅಭಿಮಾನಪೂರ್ವಕವಾಗಿ ತಲಾ 10 ಗ್ರಾಂ ಚಿನ್ನ ಹಾಗೂ ಬಟ್ಟೆಯನ್ನು ಉಡುಗೊರೆಯಾಗಿ ನೀಡಲಾಗಿದೆ ಅಷ್ಟೇ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ್ ಹೇಳಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯತ್ ಗೆ ಬಂದ ಅನುದಾನವನ್ನು ಅಧ್ಯಕ್ಷರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ಹೇಳಿದರಾದರೂ ಸುಮಾರು ಹನ್ನೊಂದರಿಂದ ಹನ್ನೆರಡು ಲಕ್ಷ ರೂಪಾಯಿ ಬೆಲೆಬಾಳುವ ಉಡುಗೊರೆ ಕೊಡುವಷ್ಟು ಧಾರಾಳ ಮನಸ್ಸು ಮಾಡಿರುವುದು ಯಾಕೆ ಎನ್ನುವ ಪ್ರಶ್ನೆಗಳು ಕೇಳಿ ಬಂದವು.
ಅಧ್ಯಕ್ಷರ ಮಾತಿಗೆ ಬೆಂಬಲಿಸಿದ ಕೆಲ ಸದಸ್ಯರು ನಮಗೆ ಬಂದ ಅನುದಾನವನ್ನು ನಮ್ಮ ಕ್ಷೇತ್ರಗಳ ಅಭಿೃದ್ಧಿಗೆ ಬಳಸಿಕೊಂಡಿದ್ದೇವೆ. ಯಾರಿಗೂ ಅನುದಾನವನ್ನು ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದರು.
ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷರು ಅಭಿವೃದ್ಧಿಗೆ ಬಂದ ಅನುದಾನವನ್ನು ಸದಸ್ಯರ ಮನವೊಲಿಸಿ ತಾವುಗಳೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ತಳ್ಳಿಹಾಕುವ ಭರದಲ್ಲಿ ಮಾತನಾಡುತ್ತಿದ್ದ ಅಧ್ಯಕ್ಷೆ ಶ್ವೇತಾ ಪಾಟೀಲರು ಗದ್ಗದಿತರಾಗಿದ್ದರು.
ತಾಲೂಕು ಪಂಚಾಯತ್ ಸದಸ್ಯರಾದ ತಿಮ್ಮನಗೌಡ, ವಾಹಿದ್ ಖಾದ್ರಿ, ಬಸವರಾಜ ದೊಡ್ಡಹೋಲ, ಶರಣಗೌಡ, ರುದ್ರಗೌಡ ಪಾಟೀಲ್, ಶರಣಮ್ಮ, ಶಂಕರ್ ಚೌಹಾನ್, ಸೇತುರಾಮ ನಾಯಕ ಸೇರಿ ಇತರರು ಇದ್ದರು.