ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು: ಸಾಹಿತಿಗಳು ಶ್ರಮಿಕ ವರ್ಗಕ್ಕೆ ದಕ್ಕಬೇಕಾದ ಹಕ್ಕುಗಳನ್ನು ಹೆಕ್ಕಿ ತೆಗೆದು ಸರಕಾರದ ಗಮನಕ್ಕೆ ತರುವ ಗಟ್ಟಿ ಧ್ವನಿಯಾಗಬೇಕು ಎಂದು ಸಂಶೋಧಕ ಡಾ. ಮಹಾದೇವಪ್ಪ ನಾಗರಹಾಳ ಹೇಳಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾ ಘಟಕ ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ರಾಜ್ಯಮಟ್ಟದ ಅಂತರ್ಜಾಲ ಕವಿಗೋಷ್ಟಿ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಕೃಷಿ, ಕೈಗಾರಿಕೆ, ಕಟ್ಟಡ ನಿರ್ಮಾಣ ವಲಯದಲ್ಲಿ ದುಡಿಯುವ ಕಾರ್ಮಿಕರ ಪರಿಶ್ರಮದಿಂದಲೇ ದೇಶ ಪ್ರಗತಿಪಥದತ್ತ ಮುನ್ನೆಡೆದಿದೆ. ಕಾರ್ಮಿಕರು ರಾಷ್ಟ್ರದ ಸಂಪತ್ತು, ಅವರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಬಾರಾವಲಿ ಬಾವಿಹಳ್ಳಿ ಮಾತನಾಡಿ, ಎಲ್ಲಾ ವಲಯಗಳಲ್ಲಿ ದುಡಿಯುವ ಕಾರ್ಮಿಕರ ದುಡಿಮೆಗೆ ತಕ್ಕ ವೇತನ, ಪಿಂಚಣಿ, ವಿಮೆ, ಆರೋಗ್ಯ ಸೇರಿದಂತೆ ಅಗತ್ಯ ಸೌಲಭ್ಯಗಳು ಒದಗಿಸುವಲ್ಲಿ ಸರಕಾರಗಳು ಚಿಂತನೆ ಮಾಡಬೇಕೆಂದು ಆಗ್ರಹಿಸಿದರು.
ಮುಖ್ಯ ಅತಿಥಿಯಾಗಿ ಗದಗ ಜಿಲ್ಲಾಧ್ಯಕ್ಷೆ ಶ್ರೀಮತಿ ಕಲಾಶ್ರೀ ಹಾದಿಮನಿ, ಪತ್ರಕರ್ತ ಶರಣು ಹಿರೇಮಠ, ಶ್ರೀಮತಿ ಶಿವಲೀಲಾ ಹಿರೇಮಠ ಭಾಗವಹಿಸಿದ್ದರು. ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಯಚೂರು ಜಿಲ್ಲಾಧ್ಯಕ್ಷ ವೀರೇಶ ಎಸ್. ಎಂ ಪ್ರಾಸ್ತಾವಿಕ ಮಾತನಾಡಿದರು. ಕೆ.ಬಿ ಹಿರೇಮಠ ಸ್ವಾಗತಿಸಿದರು, ಮಂಜುನಾಥ ಮಾಡ್ಲಗೇರಿ ನಿರೂಪಿಸಿದರು, ದುರ್ಗಾಸಿಂಗ್ ವಂದಿಸಿದರು.
ಗೋಷ್ಟಿಯಲ್ಲಿ 35ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು.