ಕೋವಿಡ್ ಸವಾಲಾಗಿ ಸ್ವೀಕರಿಸಿ;ಗ್ರಾಮೀಣ ಜನರನ್ನ ರಕ್ಷಿಸಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Share and Enjoy !

Shares
Listen to this article

4 ಜಿಲ್ಲೆಗಳ 47 ಗ್ರಾಪಂಗಳ ಅಧ್ಯಕ್ಷರು,ಪಿಡಿಒಗಳೊಂದಿಗೆ ವಿಡಿಯೋ ಸಂವಾದ,ಆರ್‍ಡಿಪಿಆರ್ ಇಲಾಖೆ ಸಿಬ್ಬಂದಿಗಳು ಇನ್ಮುಂದೆ ಕೋವಿಡ್ ವಾರಿಯರ್ಸ್‍ಗ

 

ಬಳ್ಳಾರಿ,ಮೇ 26 : ನಗರ ಪ್ರದೇಶದಲ್ಲಿ ಕೊರೊನಾ ಸೊಂಕು ಕ್ರಮೇಣ ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಕೊರೊನಾ ನಿಯಂತ್ರಣಕ್ಕೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಿ ಮತ್ತು ಕೋವಿಡ್ ಸೊಂಕಿನ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ ಗ್ರಾಮೀಣ ಜನರನ್ನು ರಕ್ಷಿಸುವ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಪಂ ಅಧ್ಯಕ್ಷರುಗಳು ಹಾಗೂ ಪಿಡಿಒಗಳಿಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್ ಮೂಲಕ ಬಳ್ಳಾರಿ,ಬೆಳಗಾವಿ,ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ 47 ಗ್ರಾಪಂಗಳ ಅಧ್ಯಕ್ಷರುಗಳು ಹಾಗೂ ಪಿಡಿಒಗಳು ಮತ್ತು ಜಿಪಂ ಸಿಇಒ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೊಂಕು ನಿಯಂತ್ರಣಕ್ಕೆ ಪರಿಶ್ರಮಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಗಳ ಸಿಬ್ಬಂದಿಗಳನ್ನು ಕೋವಿಡ್ ವಾರಿಯರ್ಸ್‍ಗಳೆಂದು ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಮಗಳಲ್ಲಿ ಸೊಂಕಿತರು ಕಂಡುಬಂದ ಪ್ರದೇಶಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಮಾಡಿ ಮತ್ತು ಅಲ್ಲಿನ ಜನರಿಗೆ ಆಹಾರ ತೊಂದರೆಯಾಗದಂತೆ ನೋಡಿಕೊಳ್ಳಿ ಮತ್ತು ಅವರ ಸಂಪರ್ಕಿತರಿಗೆ ತಪಾಸಣೆ ಮಾಡಿಸಿ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಿ ಎಂದು ಗ್ರಾಪಂ ಪಿಡಿಒಗಳು ಮತ್ತು ಅಧ್ಯಕ್ಷರುಗಳಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಜನರ ಅನವಶ್ಯಕ ಓಡಾಟಕ್ಕೆ ಕ್ರಮ,ಜನಸಂದಣಿ ಸೇರುವ ಸ್ಥಳಗಳಾದ ಸಂತೆ,ಜಾತ್ರೆ,ಮದುವೆ-ಮುಂಜಿ ಸೇರಿದಂತೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ತಮ್ಮ ವ್ಯಾಪ್ತಿಯಲ್ಲಿ ನಿಷೇಧಿಸುವಂತೆ ಅವರು ಸಲಹೆ ನೀಡಿದರು.

ನಗರ ಪ್ರದೇಶಗಳಲ್ಲಿ ಕೊರೊನಾ ಸೊಂಕು ಕಡಿಮೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿದ್ದು,ಯಾವ ರೀತಿಯ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಗ್ರಾಮೀಣ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳನ್ನು ತಮ್ಮಿಂದ ಪಡೆಯುವ ದೃಷ್ಟಿಯಿಂದ ಮುಖ್ಯಮಂತ್ರಿಯಾಗಿ ನಾನು ಇಂದು ತಮ್ಮೊಂದಿಗೆ ಮಾತನಾಡುತ್ತಿರುವೆ ಎಂದು ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ತಿಳಿಸಿದ ಸಿಎಂ ಬಿಎಸ್‍ವೈ ಅವರು  ಎಲ್ಲರೂ ಸೇರಿ ಈ ಕೊರೊನಾ ಮಹಾಮಾರಿಯನ್ನು ತಡೆಯಲು ಶ್ರಮಿಸೋಣ ಎಂದರು.

ಪ್ರತಿ ಗ್ರಾಪಂಗಳಿಗೆ ಎನ್‍ಡಿಆರ್‍ಎಫ್ ನಿಧಿ ಅಡಿ ತಲಾ 50 ಸಾವಿರ ಹಣ ಒದಗಿಸಲಾಗಿದೆ. 14ನೇ ಹಣಕಾಸು ಯೋಜನೆಯ ಉಳಿದ ಅನುದಾನ ಮತ್ತು 15ನೇ ಹಣಕಾಸು ಯೋಜನೆಯಲ್ಲಿನ ಹಣವನ್ನು ಕೊರೊನಾ ಕಾರ್ಯಕ್ಕೆ ಬಳಸಿಕೊಳ್ಳಿ ಎಂದರು.

*ಆಲಬೂರು ಗ್ರಾಪಂ ವಿಶೇಷ ಕ್ರಮದಿಂದ 36ರಿಂದ 1ಕ್ಕಿಳಿದ ಸೊಂಕಿತರ ಪ್ರಮಾಣ: ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಕೊಟ್ಟೂರು ತಾಲೂಕಿನ ಆಲಬೂರು ಗ್ರಾಪಂ ಅಧ್ಯಕ್ಷ ಶಿವಾನಂದಪ್ಪ ಅವರು ಮಾತನಾಡಿ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸೊಂಕು ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗಳ ಎದುರು ಎಳೆಎಳೆಯಾಗಿ ಬಿಡಿಸಿಟ್ಟರು.

ಮೊದಲಿಗೆ ಆಲಬೂರು ಗ್ರಾಪಂ ವ್ಯಾಪ್ತಿಯಲ್ಲಿ 36 ಸೊಂಕಿತರಿದ್ದರೂ ಈಗ ಓರ್ವರು ಮಾತ್ರ ಸೊಂಕಿತರಿದ್ದಾರೆ. ಗ್ರಾಮದ ಪ್ರತಿ ಮನೆ-ಮನೆಗೆ ಸರ್ವೇ ನಡೆಸಲಾಗಿದೆ. ಜ್ವರ-ಶೀತ-ಕೆಮ್ಮಿನಂತ ಲಕ್ಷಣಗಳಿರುವವರಿಗೆ ಜನರಲ್ ಕಿಟ್ ಹಾಗೂ ಮೆಡಿಕಲ್ ಕಿಟ್‍ಗಳನ್ನು ವಿತರಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ  ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮತ್ತು ಚರಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಟೆಸ್ಟ್ ಕೂಡ ಮಾಡಲಾಗಿದೆ. ಜನರು ಅನಗತ್ಯ ಓಡಾಡದಂತೆ ತಿಳಿಸಲಾಗಿದ್ದು,ಜನರು ಕೂಡ ಗ್ರಾಪಂನೊಂದಿಗೆ ಸಹಕರಿಸುತ್ತಿದ್ದಾರೆ ಎಂದರು.

ಜಿಲ್ಲಾಡಳಿತದ ಆದೇಶದಂತೆ ಮದುವೆ-ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಗ್ರಾಪಂ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ತಹಸೀಲ್ದಾರ್ ಅವರು ಕೂಡ ಗ್ರಾಪಂಗೆ ಆಗಮಿಸಿ ಜನರೊಂದಿಗೆ ಸಭೆ ನಡೆಸಿ ಅರಿವು ಮೂಡಿಸಿದ್ದಾರೆ ಎಂದು ಹೇಳಿದ ಗ್ರಾಪಂ ಅಧ್ಯಕ್ಷ ಶಿವಾನಂದಪ್ಪ ಅವರು ಹಿಂದಿನ ತಿಂಗಳು ನನಗೂ ಕೋವಿಡ್ ಸೊಂಕು ಬಂದಿತ್ತು;ಹೋಂ ಐಸೋಲೇಶನ್‍ನಲ್ಲಿದ್ದುಕೊಂಡು ಅಗತ್ಯ ಚಿಕಿತ್ಸೆ ಪಡೆದು ಗುಣಮುಖರಾಗಿರುವೆ ಎಂದು ಅವರು ಸಿಎಂ ಅವರಿಗೆ ತಿಳಿಸಿದರು.

ಇಡೀ ಗ್ರಾಪಂ ಕೊರೊನಾ ಸೊಂಕು ಮುಕ್ತವನ್ನಾಗಿ ಶೀಘ್ರವಾಗಿ ಮಾಡಲಾಗುವುದು ಮತ್ತು ಕೊರೊನಾ ಹರಡದಂತೆ ಬಿಗಿಯಾದ ಕ್ರಮಗಳನ್ನು ಪಿಡಿಒ ಮಾಧವಿ ಅವರೊಡಗೂಡಿ ಕೈಗೊಳ್ಳುತ್ತೇವೆ ಎಂದು ಅವರು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

*ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 5010 ಸಕ್ರಿಯ ಪ್ರಕರಣಗಳು: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯ ಮೂಲಕ ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಒಟ್ಟು 12042 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 7032 ಜನರು ಸೊಂಕಿನಿಂದ ಗುಣಮುಖರಾಗಿದ್ದು,ಇನ್ನೂ 5010 ಸಕ್ರಿಯ ಪ್ರಕರಣಗಳಿವೆ. 147 ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಮತ್ತು 561 ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿರುವ 11 ತಾಲೂಕುಗಳ ಒಟ್ಟು 237 ಗ್ರಾಮ ಪಂಚಾಯತಿ ವ್ಯಾಪ್ತಿಯ 1038 ಗ್ರಾಮಗಳ ಪೈಕಿ 330 ಗ್ರಾಮಗಳಲ್ಲಿ ಇದುವರೆಗೂ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಎಂದು ವಿವರಿಸಿದ ಅವರು ಬಳ್ಳಾರಿ ತಾಲೂಕಿನಲ್ಲಿ 22,ಹಡಗಲಿ ತಾಲೂಕಿನಲ್ಲಿ 30,ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 21,ಹರಪನಳ್ಳಿ ತಾಲೂಕಿನಲ್ಲಿ 91,ಹೊಸಪೇಟೆ ತಾಲೂಕಿನಲ್ಲಿ 11,ಕಂಪ್ಲಿ ತಾಲೂಕಿನಲ್ಲಿ 10,ಕೊಟ್ಟೂರು ತಾಲೂಕಿನಲ್ಲಿ 20,ಕೂಡ್ಲಿಗಿ ತಾಲೂಕಿನಲ್ಲಿ 61,ಸಂಡೂರು ತಾಲೂಕಿನಲ್ಲಿ 38 ಮತ್ತು ಸಿರಗುಪ್ಪ ತಾಲೂಕಿನಲ್ಲಿ 26 ಹಳ್ಳಿಗಳು ಕೊರೊನಾ ಸೊಂಕಿನಿಂದ ಸುರಕ್ಷಿತವಾಗಿವೆ ಎಂದರು.

*6574 ಕುಟುಂಬ ಆರೋಗ್ಯ ಸಂರಕ್ಷಣಾ ತಂಡಗಳ ರಚನೆ: ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಲ್ಲಿ ಗ್ರಾಪಂ ಟಾಸ್ಕ್‍ಫೋರ್ಸ್‍ಗಳನ್ನು ಕ್ರಿಯಾಶೀಲಗೊಳಿಸಲಾಗಿದೆ. ಇದರ ಜೊತೆಗೆ 6574 ಕುಟುಂಬ ಆರೋಗ್ಯ ಸಂರಕ್ಷಣಾ ತಂಡಗಳನ್ನು ರಚಿಸಲಾಗಿದ್ದು, ಪ್ರತಿ 50 ಮನೆಗಳಿಗೆ ಒಂದರಂತೆ ತಂಡಗಳನ್ನು ರಚಿಸಲಾಗಿದ್ದು, ಈ ತಂಡದ ಸದಸ್ಯರು ಮನೆ-ಮನೆಗೆ ಭೇಟಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯ ಸಂದರ್ಭದಲ್ಲಿ ಜ್ವರ,ಶೀತ,ಕೆಮ್ಮುವಿನಂತ ಲಕ್ಷಣಗಳು ಕಂಡುಬಂದಲ್ಲಿ ಜನರಲ್ ಮೆಡಿಕಲ್ ಕಿಟ್ ನೀಡಲಾಗುತ್ತದೆ.;ಮೂರು ದಿನಗಳಲ್ಲಿ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಆರೋಗ್ಯ ಸಿಬ್ಬಂದಿ ರ್ಯಾಪಿಡ್ ಆಂಟಿಜೆನ್ ಕಿಟ್ ಮುಖಾಂತರ ತಪಾಸಣೆ ನಡೆಸಿ ಪಾಸಿಟಿವ್ ಬಂದಲ್ಲಿ ಕೋವಿಡ್ ಕಿಟ್ ನೀಡಲಿದ್ದಾರೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿವರಿಸಿದರು.

ಪ್ರತಿ ಹಳ್ಳಿಗೆ ಒಂದು ಗ್ರಾಮ ಕಾರ್ಯಪಡೆಯಂತೆ 1038 ಗ್ರಾಮ ಕಾರ್ಯಪಡೆಗಳು ಹಾಗೂ 237 ಗ್ರಾಪಂ ಕಾರ್ಯಪಡೆಗಳನ್ನು ರಚಿಸಲಾಗಿದ್ದು,ಕಾರ್ಯಪ್ರವೃತ್ತರಾಗಿವೆ ಎಂದು ತಿಳಿಸಿದ ಜಿಪಂ ಸಿಇಒ ನಂದಿನಿ ಅವರು ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಪಂ ಕೈಗೊಂಡಿರುವ ವಿಶಿಷ್ಟ ಪ್ರಯತ್ನಗಳನ್ನು ಸಿಎಂ ಅವರ ಮುಂದಿಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್,ಎಸಿ ರಮೇಶ ಕೋನರೆಡ್ಡಿ ಮತ್ತಿತರರು ಇದ್ದರು.

ವರ್ಚುವಲ್ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಆರ್‍ಡಿಪಿಆರ್ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು,ಆಯುಕ್ತರು ಇದ್ದರು.

Share and Enjoy !

Shares