ಬಳ್ಳಾರಿ ಜಿಲ್ಲೆ
ಸಿರುಗುಪ್ಪ:ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ನಮ್ಮ ಸರ್ಕಾರ ಮಾಡಿರುವ ಸಾಧನೆಗಳೇ ಶ್ರೀರಕ್ಷೆಯಾಗಿವೆ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವುದು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯವಾಗಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.
ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದ ಜಿ.ಪಂ, ತಾ.ಪಂ. ಚುನಾವಣೆಯ ಬಿ.ಜೆ.ಪಿ. ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿರುತ್ತವೆ, ಅಂತಹ ಯೋಜನೆಗಳಲ್ಲಿ ಕುಡಿಯುವ ನೀರಿನ ಕೆರೆಗಳು, ರಸ್ತೆ, ಕಾಂಕ್ರೀಟ್ ರಸ್ತೆ, ಚರಂಡಿ, ರೈತರ ಜಮೀನುಗಳಿಗೆ ಏತನೀರಾವರಿ, ವಸತಿಸಹಿತ ಶಾಲೆ, ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳು ಮುಖ್ಯವಾಗಿರುತ್ತವೆ, ನಮ್ಮ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬ ಮತದಾರರಿಗೂ ತಿಳಿಸಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ನಿರ್ವಹಿಸಬೇಕು.
ಎಲ್ಲಾ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸಿ ಈ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಬೇಕಾದ ವೇದಿಕೆಯನ್ನು ಈಗಿನಿಂದಲೇ ಸಿದ್ದಪಡಿಸಬೇಕೆಂದು ಕರೆ ನೀಡಿದರು.
ಮುಖಂಡರಾದ ಡಿ.ಮಂಜುನಾಥ, ವಿಕ್ರಂಜೈನ್, ನಟರಾಜ, ಚಿದಾನಂದ, ಬಸವರಾಜ, ಚನ್ನನಗೌಡ, ನಾಗೇಶಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಎಮ್.ಆರ್.ಗೌಡ, ಸಿದ್ದರಾಮನಗೌಡ, ಆರ್.ಜೆ.ಪಂಪನಗೌಡ, ಈರಣ್ಣ, ಸೋಮಯ್ಯ, ಮತ್ತು ಕಾರ್ಯಕರ್ತರು ಇದ್ದರು.