ವಿಜಯನಗರ ವಾಣಿ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಸಿಎಂ ಡಾಲರ್ಸ್ ಕಾಲೋನಿ ನಿವಾಸದ ಎರಡು ಕಡೆಯ ರಸ್ತೆಗೆ ಮೂವತ್ತಕ್ಕೂ ಹೆಚ್ಚು ಬ್ಯಾರೀಕೆಡ್ ಹಾಕಲಾಗಿದೆ. ಆದರೆ ಕಳೆದೊಂದು ವಾರದಿಂದ ಸಿಎಂ ಡಾಲರ್ಸ್ ಕಾಲೋನಿ ನಿವಾಸ ಖಾಲಿಯೇ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬಸ್ಥರು ಯಾರು ಡಾಲರ್ಸ್ ಕಾಲೋನಿ ನಿವಾಸದಲ್ಲಿಲ್ಲ. ಸದ್ಯ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಅಡುಗೆ ಭಟ್ಟರು ಡ್ರೈವರ್ಗಳು ಹಾಗೂ ಮನೆಕೆಲಸದವರು ಮಾತ್ರ ಇದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿ ಸೂತಕದ ಛಾಯೆ:
ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ, ಅವರ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದಂತಾಗಿದೆ. ರಾಜೀನಾಮೆ ನಂತರ ಗ್ರಾಮ ದೇವತೆ ಗೋಗೊಲಮ್ಮ ದೇವಿ ದೇವಾಲಯದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯಿಂದ ಪಕ್ಷ ಸರ್ವನಾಶವಾಗಲಿದೆ. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷ ನೆಲಕಚ್ಚಲಿದೆ. ಗ್ರಾಮದ ಹಿರಿಯರು ತೀರಿ ಹೋದರೆ ಯಾವ ರೀತಿಯ ಸೂತಕ ಆಚರಿಸಲಾಗುತ್ತದೊ ಅದೇ ರೀತಿಯ ಸೂತಕ ಆಚರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಮೌನ ಮುರಿದಿದ್ದಾರೆ. ಅಲ್ಲದೆ ಯಡಿಯೂರಪ್ಪರನ್ನು ನೆನೆದು ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಶಿವಮೊಗ್ಗ: ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಬೇಸರ
ಯಡಿಯೂರಪ್ಪನವರ ರಾಜೀನಾಮೆ ನಿರೀಕ್ಷೆ ಮಾಡಿರಲಿಲ್ಲ. ಈ ನಡೆಯಿಂದ ನಮಗೆ ಸಹಜವಾಗಿಯೇ ಬೇಸರವಾಗಿದೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ತಲೆ ಬಾಗಬೇಕು. ಪಕ್ಷ ಅವರನ್ನು ಮುಂದೆ ಕೂಡಾ ಬಳಸಿಕೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.