ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸರ್ಕಾರ ವಿತರಿಸಿದ ಕಿಟ್ನಲ್ಲಿ ಭ್ರಷ್ಟಾಚಾರ ನಡೆದಿರುವುದು ಶೀಘ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡೆರೇಷನ್ ಪದಾಧಿಕಾರಿಗಳು ತಾಲೂಕಿನ ತಂಬ್ರಹಳ್ಳಿ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಿಬ್ಬಂದಿ ಕಿರಣ್ಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಜಗನ್ನಾಥ ಮಾತನಾಡಿ, ಕೋವಿಡ್ನಿಂದಾಗಿ ಕಾರ್ಮಿಕರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದು, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೀಡಿರುವ ಕಾರ್ಮಿಕರ ಆಹಾರ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಲಾಗಿದೆ. ಶೀಘ್ರವೇ ರಾಜ್ಯ ಸರ್ಕಾರ ಗಮನಹರಿಸಿ ತನಿಖೆಗೊಳಪಡಿಸಿ ಆರೋಪ ಸಾಬಿತಾದರೇ ಅಪರಾಧಿಗಳಿಗೆ ಶಿಕ್ಷೆಗೊಳಪಡಿಸಬೇಕು. ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಮುಂದಾಗಬೇಕು. ಪುನಃ ಆಹಾರ ಕಿಟ್ ಪ್ರಸ್ತಾಪ ಬಿಟ್ಟು ಪ್ರತಿ ಕಾರ್ಮಿಕರಿಗೆ 10ಸಾವಿರ ರೂಪಾಯಿ ಹಣವನ್ನು ಖಾತೆಗೆ ಜಮಾ ಮಾಡಬೇಕು. ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಕಾರ್ಮಿಕರ ಅಭಿವೃದ್ಧಿಗೆ ಬಳಸಬೇಕು. ಸೇವಾಸಿಂಧು, ಸೈಬರ್ ಕೇಂದ್ರಗಳಲ್ಲಿ ಹಂಚಿಕೆಯಾಗಿರುವ ನಕಲಿ ನೋಂದಾಯಿತ ಗುರುತಿನ ಚೀಟಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯು.ತೋಟೇಶ್, ಕೆ.ಕೊಟ್ರೇಶ್, ಎಂ.ಮರಿಯಪ್ಪ, ಕೆ.ಬಸವರಾಜ, ಕೊಟ್ರೇಶ್, ಜಹಾಂಗೀರ್, ಬಿ.ಸೋಮಶೇಖರ, ಕೃಷ್ಣಮೂರ್ತಿ, ಜಿಲಾನ್ಸಾಬ್, ಸಿ.ವಲೀಸಾಬ್ ಇತರರಿದ್ದರು.