ಕ್ಷೇತ್ರದ ಜನತೆಯ ಬಗ್ಗೆ ಹರುಷ ವ್ಯಕ್ತ ಪಡಿಸಿದ ಸಿಎಂ ಬಸವರಾಜ್​ ಬೊಮ್ಮಾಯಿ

Share and Enjoy !

Shares
Listen to this article

ವಿಜಯನಗರ ವಾಣಿ

ರಾಜ್ಯದ ನೂತನ ಸಿಎಂ ಬಸವರಾಜ್​ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿರುವುದು ಅವರ ಕ್ಷೇತ್ರದ ಜನರಲ್ಲಿ ಸಂಭ್ರಮ ಹೆಚ್ಚಿಸಿದೆ. ಮಂಗಳವಾರ ಸಂಜೆ ಬಸವರಾಜ್​ ಬೊಮ್ಮಾಯಿ ನೂತನ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದ ಜನರಲ್ಲಿ ಹರ್ಷ ಇಮ್ಮಡಿಸಿತು. ಅವರಿಗೆ ಖುದ್ದು ಅಭಿನಂದನೆ ತಿಳಿಸಿ, ಸನ್ಮಾನ ಮಾಡಲು ಶಿಗ್ಗಾಂವಿ ಮತ್ತು ಹಾವೇರಿ ಕ್ಷೇತ್ರದ ಜನರು ಮುಂದಾಗಿದ್ದಾರೆ. ಅರಮನೆ ಮೈದಾನದಲ್ಲಿ ತಮ್ಮ ಕ್ಷೇತ್ರದ ಜನನಾಯಕನಿಗೆ ಅಭಿಮಾನಿಗಳು ಸನ್ಮಾನಿಸಿದರು. ಈ ವೇಳೆ ಹೆಬ್ಬುಲಿ ಎಂಬ ಘೋಷ ವಾಕ್ಯ ಅಭಿಮಾನಿಗಳಿಂದ ಮೊಳಗಿತ್ತು. ಈ ವೇಳೆ ಕೊಂಚ ಮುಜುಗರಕ್ಕೆ ಒಳಗಾದ ಅವರು, ಏ ಸುಮ್ಮನಿರಪ್ಪ ಹಾಗೆಲ್ಲಾ ಎನ್ನಬೇಡಿ ಎಂದರು.

ಬಳಿಕ ಕ್ಷೇತ್ರದ ಜನರನ್ನ ಉದ್ದೇಶಿಸಿ ಮಾತನಾಡಿದ ಸಿಎಂ, ನೀವೆಲ್ಲಾ ನನಗೆ ಶಕ್ತಿ ತುಂಬಲು ಬಂದಿದ್ದೀರಾ. ನಾನು ನಿಮ್ಮ ಬಸವರಾಜ್ ಬೊಮ್ಮಾಯಿ. ನನಗೆ ಈ ಭಾರ ಹೊರಲು ಶಕ್ತಿ ತುಂಬಿದವರು ನೀವು. ನಿಮ್ಮ ಬೆಂಬಲದಲ್ಲಿ ಎಷ್ಟು ಶಕ್ತಿ ಇದೆ ಎಂಬುದು ಗೊತ್ತಿದೆ. ತಾವೆಲ್ಲಾ ನನ್ನನ್ನ ಹತ್ತಿರದಿಂದ ನೋಡಿದ್ದೀರಾ. ನನಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೀರಾ. ಹೆಜ್ಜೆಗೆ ಹೆಜ್ಜೆ ಇಟ್ಟು ಜೊತೆಯಲ್ಲಿ ನಡೆದಿದ್ದೀರ. ಇಂಥ ಅನುಭವ ಅದೃಷ್ಟವಂತ‌ ನಾಯಕನಿಗೆ ಮಾತ್ರ ‌ಸಿಗಲು ಸಾಧ್ಯ. ನಿಮ್ಮಂತ ಅಣ್ಣ ತಮ್ಮಂದಿರನ್ನ ಪಡೆದಿರುವುದು ಪೂರ್ವ ಜನ್ಮದ‌ ಪುಣ್ಯ. ನಿಮ್ಮನ್ನ ನೋಡಿದಾಗ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಸದಾಕಾಲ ನಾವೆಲ್ಲಾ ಒಟ್ಟಿಗೆ ಇದ್ದೇವೆ. ಅಧಿಕಾರ ಇರಲಿ ಇಲ್ಲದೇ ಇರಲಿ ನಾವು ಧೃತಿಗೆಟ್ಟಿಲ್ಲ ಎಂದು ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಿದರು.

ರಾಜ್ಯದ ಸರ್ವತೋಮುಕ ಅಭಿವೃದ್ಧಿ ಮಾಡುವುದು ನನ್ನ ಉದ್ದೇಶ. ಕ್ಷೇತ್ರದ ಜೊತೆಗೆ ರಾಜ್ಯವನ್ನೂ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಸಿಎಂ ಆಗಿದ್ದಾರೆ ನಮ್ಮನ್ನ ಮಾತನಾಡಿಸುತ್ತಾರೋ ಇಲ್ವೋ ಅನ್ನೋ ಭಾವನೆ ಬೇಡ. ನಮ್ಮ ಕ್ಷೇತ್ರದ ಜನಕ್ಕೆ ವಿಶೇಷವಾದ ಸಮಯ ಹಾಗೂ ವ್ಯವಸ್ಥೆ ಮಾಡುತ್ತೇನೆ ಎಂಬ ಭರವಸೆ ನೀಡಿದರು.ಇದೇ ವೇಳೆ ಜನಮೆಚ್ಚಿದ ನಾಯಕ ಬಿಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮಾರ್ಗದರ್ಶನದಲ್ಲಿ ಜನ ಮೆಚ್ಚಿದ ಆಡಳಿತ ಕೊಡುತ್ತೇನೆ. ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದರು.

ಇದೇ ವೇಳೆ ಅಭಿಮಾನಿಗಳ ಅಭಿಮಾನ ಕಂಡ ಸಿಎಂ ಜನರ ಮಧ್ಯೆ ಹೋಗಿ ಹೂ ಗುಚ್ಛವನ್ನು ಪಡೆದು ಅವರ ಸಂಭ್ರಮದಲ್ಲಿ ಭಾಗಿಯಾದರು. ಇದರಿಂದ ಸ್ಥಳದಲ್ಲಿ ನೂಗು ನುಗ್ಗಲು ಉಂಟಾಯಿತು

ನೂತನ ಸಿಎಂ ಆಗಿ ಇಂದು ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹಾವೇರಿ ಜಿಲ್ಲೆಯಲ್ಲಿ ಅಭಿಮಾನಿಗಳು ಪಟಾಕಿ ಹೊಡೆದು , ಸಿಹಿ ಸಂಚಿ ಸಂಭ್ರಮಿಸಿದರು.

 

Share and Enjoy !

Shares