ವಿಜಯನಗರ ವಾಣಿ
ಸಿರುಗುಪ್ಪ: ತಾಲ್ಲೂಕಿನ ಹೆಚ್. ಹೊಸಳ್ಳಿ ಮತ್ತು ಹಾಗಲೂರು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಮುಖಂಡರುಗಳಿಂದ ಸಿರಗುಪ್ಪ ಕ್ಷೇತ್ರದ ಶಾಸಕ ಎಂ ಎಸ್ ಸೋಮಲಿಂಗಪ್ಪ ಇವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲು ಮಂಗಳವಾರ ಸಭೆ ನಡೆಸಿ ಆಗ್ರಹ ವ್ಯಕ್ತ ಪಡಿಸಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಮೂರುಬಾರಿ ಶಾಸಕರಾಗಿ ಪಕ್ಷನಿಷ್ಠೆ ಹೊಂದಿರುವ ಶಾಸಕ ಎಮ್ ಎಸ್ ಸೋಮಲಿಂಗಪ್ಪರಿಗೆ ಈ ಬಾರಿ ಮಂತ್ರಿ ಸ್ಥಾನ ನೀಡದಿದ್ದರೆ ಅನಿವಾರ್ಯವಾಗಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದರು.
ಎಚ್. ಹೊಸಳ್ಳಿ ಗ್ರಾಮ ಪಂಚಾಯಿತಿ ಪಕ್ಕದ ಆವರಣದಲ್ಲಿ ಸಭೆ ಸೇರಿದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ಹಾಗೂ ಸರ್ವ ಸದಸ್ಯರು ಮತ್ತು ಉಭಯ ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು ಮಾತನಾಡಿ ಈ ವೇಳೆ ಮಾತನಾಡಿ ಎಂತಹ ಸಂದರ್ಭದಲ್ಲಿಯೂ ಪಕ್ಷ ಬದಲಾವಣೆ ಮಾಡದೆ ಪಕ್ಷಕ್ಕೆ ನಿಷ್ಠೆಯಿಂದ ಇರುವ ಅತ್ಯಂತ ಸರಳ ಸಜ್ಜನಿಕೆಯ ಶಾಸಕ ಎಂ ಎಸ್ ಸೋಮಲಿಂಗಪ್ಪನವರು ತಾವಾಗಿಯೇ ಸ್ವತಃ ಯಾವುದೇ ಸ್ಥಾನಕ್ಕೂ ಇದುವರೆಗೂ ಬೇಡಿಕೆ ಇಟ್ಟಿರುವುದಿಲ್ಲ. ಎಸ್.ಟಿ. ಮೀಸಲು ಕ್ಷೇತ್ರ ಪ್ರತಿನಿಧಿಸುತ್ತಾ ವಿವಾದತೀತ ನಾಯಕರಾಗಿರುವ ಇವರು ಮೂರು ಬಾರಿ ಶಾಸಕರಾಗಿದ್ದಾರೆ. ಅಲ್ಲದೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಕೆಲ ದಶಕಗಳಿಂದಲೂ ಯಾವುದೇ ಮಂತ್ರಿ ಸ್ಥಾನ ನೀಡಿರುವುದಿಲ್ಲ. ಇದರಿಂದ ರಾಜ್ಯವನ್ನಾಳಿದ ಸರ್ಕಾರಗಳು ಸಿರುಗುಪ್ಪ ವಿಧಾನ ಸಭಾ ಕ್ಷೇತ್ರವನ್ನು ಕಡೆಗಣಿಸಿದೆ. ಈಗಲಾದರೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಯಾವುದಾದರೊಂದು ಸಚಿವ ಸ್ಥಾನ ನೀಡಲೇಬೇಕೆಂದು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ತಮ್ಮ ಆಗ್ರಹ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆಯ ಪತಿ ಪರಶುರಾಮ ಉಪಾಧ್ಯಕ್ಷ ಕಲ್ಲಪ್ಪ, ಕರೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್.ರಾಘವೇಂದ್ರ ರೆಡ್ಡಿ. ಈ ಭಾಗದ ಮುಖಂಡರಾದ ಪಿ.ಪ್ರಕಾಶ ರೆಡ್ಡಿ, ಕೆ.ಶ್ರೀಶೈಲಪ್ಪ, ಬಿ.ಪರಶುರಾಮಪ್ಪ ಆರ್.ಮಾಳಪ್ಪ, ಹೆಚ್.ಪೋತಿಲಿಂಗನ ಗೌಡ, ವಿ.ಶೇಕಣ್ಣ, ದಿವಾಕರ ಗೌಡ, ಮಲ್ಲಿಕಾರ್ಜುನ ರೆಡ್ಡಿ, ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಶೇಖಣ್ಣ, ಬಿ. ವೆಂಕಟೇಶ, ವಸಂತರೆಡ್ಡಿ, ಎಸ್ ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯ ನೆಣಕಿ ಮಲ್ಲಯ್ಯ ಶೆಕ್ಷಾವಲಿಸಾಬ್, ಗುರುನಾಥರೆಡ್ಡಿ, ವಿ.ಸುರೇಶ ಸೇರಿದಂತೆ ಅನೇಕರು ಇದ್ದರು.