ವಿಜಯನಗರ ವಾಣಿ
ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಮಂಡ್ಯ ಪ್ರವಾಸದಲ್ಲಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆದಿದ್ದು ಸಭೆಯಲ್ಲಿ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಮೇಲುಕೋಟೆ ಜೆಡಿಎಸ್ ಶಾಸಕ ಸಿ ಎಸ್ ಪುಟ್ಟರಾಜು ಭಾಗಿಯಾಗಿದ್ದಾರೆ. ಆದರೆ ದಿಶಾ ಸಭೆ ಆರಂಭದಲ್ಲೇ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ಕೊಟ್ಟಿದ್ದಾರೆ. ಸಭೆಯಲ್ಲಿ ಅನಧಿಕೃತವಾಗಿ ಭಾಗಿಯಾದವರನ್ನ ಹೊರಗೆ ಕಳುಹಿಸಿ ಎಂದು ತಾಕೀತು ಮಾಡುವ ಮೂಲಕ ಸುಮಲತಾ ಕಡೆಯವರನ್ನು ಹೊರ ಕಳುಹಿಸಲು ಪಟ್ಟುಹಿಡಿದಿದ್ದಾರೆ.
ಪರೋಕ್ಷವಾಗಿ ಸುಮಲತಾ ಬೆಂಬಲಿಗರನ್ನ ಹೊರಗೆ ಕಳುಹಿಸಿ ಎಂದ ರವೀಂದ್ರ ಶ್ರೀಕಂಠಯ್ಯ ವೇದಿಕೆಯ ಹಿಂದೆ ಮುಂದೆ ಇರುವವರನ್ನ ಹೊರಗೆ ಕಳುಹಿಸಿ ಎಂದು ಸೂಚಿಸಿದರು. ಮುಂದುವರಿದು, ಎಂಪಿ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಪತ್ರ ವ್ಯವಹಾರ ಮಾಡಿದ್ದಾರೆ. ಅವರು ಅಧಿಕೃತವಾ, ಅನಧಿಕೃತವಾ, ಯಾರು ಅವರು? ಎಂದು ಸಿಇಓಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಹಾಕಿದ್ದಾರೆ.
ಅದಕ್ಕೆ ದಿಶಾ ಸಭೆಯಲ್ಲಿ (District Development Coordination and Monitoring Committee -DISHA) ಚರ್ಚಿಸಲು ತುಂಬಾ ವಿಚಾರಗಳಿವೆ, ಅದನ್ನ ಚರ್ಚಿಸೋಣ ಎಂದು ಸುಮಲತಾ ತಿರುಗೇಟು ನೀಡಲು ಮುಂದಾದರು. ಆದರೂ ಟ್ಟು ಬಿಡದ ರವೀಂದ್ರ ಮೊದಲು ಅವರು ಯಾರು ಅನ್ನೋದನ್ನ ಕನ್ಫರ್ಮ್ ಮಾಡಿ ಎಂದು ಪಟ್ಟು ಹಿಡಿದರು. ಇಲ್ಲಿ ಕೆಆರ್ಎಸ್ ವಿಚಾರ ಚರ್ಚೆಯಾಗಲಿದೆ. ಅದು ಕಾನ್ಫಿಡೆನ್ಸಿಯಲ್ ವಿಚಾರ. ಕೆಲವು ಅನಧಿಕೃತ ವ್ಯಕ್ತಿಗಳು ಇಲ್ಲಿದ್ದಾರೆ. ಅವರನ್ನ ಹೊರಗೆ ಕಳುಹಿಸಿ ಎಂದು ರವೀಂದ್ರ ತಮ್ಮ ವಾದ ಮುಂದುವರಿಸಿದರು.
ಹಾಗಾದರೆ ಎಂಎಲ್ಸಿಗಳಿಗೆ ದಿಶಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದೆಯಾ? ಅವರಿಗೂ ಅವಕಾಶ ಇಲ್ಲಾಂದ್ರೆ ಎಲ್ರೂ ಹೊರಗೆ ಹೋಗಲಿ ಎಂದು ಸಂಸದೆ ಸುಮಲತಾ ಹೇಳಿದರು. ಈ ವೇಳೆ ನಾನು ಕೆಲವೇ ಜನರನ್ನ ಸಭೆಗೆ ಆಹ್ವಾನಿಸಿದ್ದೀನಿ ಎಂದು ಜಿ ಪಂ ಸಿಇಒ ದಿವ್ಯಪ್ರಭು ಸಮಜಾಯಿಷಿ ನೀಡಿದರು.
ಕೆಆರ್ಎಸ್ ಅಧಿಕಾರಿಗಳ ಸಭೆ ಕರೆಯುವ ಅಧಿಕಾರ ಸಂಸದೆಗೆ ಇದೆಯಾ?
ಮಂಡ್ಯದ ದಿಶಾ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಂಸದೆ ಸುಮಲತಾ ಅವರ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಕರೆ ಮಾಡಿ ಕ್ರಷರ್ ಮಾಲೀಕರುಗಳಿಗೆ ನಿರಂತರ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಕೆಆರ್ಎಸ್ ಅಧಿಕಾರಿಗಳ ಸಭೆ ಕರೆಯುವ ಅಧಿಕಾರ ಇದೆಯಾ? ಎಂದೂ ಸಂಸದೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇದೇ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ನೀರು ನಿರ್ವಹಣೆ ಸಭೆ ಕರೆಯುವ ಅಧಿಕಾರ ಇದೆಯಾ? ನಿಮ್ಮ ಲೆಟರ್ ಹೆಡ್ ನಲ್ಲಿ ಬೇರೊಬ್ಬರು ಸಹಿ ಮಾಡಿದ್ದಾರೆ. ಇಂದಿನ 3 ಗಂಟೆ ಸಭೆ ಮಾಡುವ ಅಧಿಕಾರ ನಿಮಗಿಲ್ಲ. ನಿಮಗೆ ಅಧಿಕಾರ ಇದ್ದರೆ ಸಭೆ ನಡೆಸಿ ಎಂದು ಸಂಸದೆಗೆ ಶಾಸಕ ರವೀಂದ್ರ ಹೇಳಿದರು.
ಇದಕ್ಕೆ ಉತ್ತರಿಸಿದ ಸಂಸದೆ ಸುಮಲತಾ, ಕೆಆರ್ಎಸ್ ನ್ಯಾಷನಲ್ ಪ್ರಾಪರ್ಟಿ. ಸಭೆ ಮಾಡಿದರೆ ತಪ್ಪೇನಿಲ್ಲ ಎಂದರು. ಈ ಬಗ್ಗೆ ಲಿಖಿತ ಉತ್ತರ ಕೊಡುವಂತೆ ಶಾಸಕ ರವೀಂದ್ರ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದರು. ನೀರಾವರಿ ನಿಗಮದ ಎಸ್ ಇ ವಿಜಯ್ ಕುಮಾರ್ ಗೆ ಸಭೆ ನಡೆಸೊ ಅಧಿಕಾರ ನಿಮಗಿಲ್ಲ ಎಂದು ಅರ್ಜಿ ಸಲ್ಲಿಸುವ ಮೂಲಕ ಶಾಸಕ ರವೀಂದ್ರ ತಮ್ಮ ಅಸಮಾಧಾನ ಹೊರಹಾಕಿದರು.
ಮೈಸೂರು ಸಂಸದರು ಮಂಡ್ಯಕ್ಕೆ ಬಂದು ಕೆಲಸ ಮಾಡುತ್ತಾರೆ, ನೀವೇನು ಕೆಲಸ ಮಾಡುತ್ತೀರಿ? ಸುಮಲತಾಗೆ ಪ್ರಶ್ನೆ
ಮೈಸೂರು ಸಂಸದರು ಮಂಡ್ಯಕ್ಕೆ ಬಂದು ಕೆಲಸ ಮಾಡುತ್ತಾರೆ. ಆದರೆ ನೀವೇನು ಕೆಲಸ ಮಾಡುತ್ತೀರಿ? ಎಂದು ಮಂಡ್ಯ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಮಾಡಿದರು. ನಿಮ್ಮ ಸುತ್ತಲೂ ಅಕ್ರಮ ಮಾಡುವವರನ್ನೇ ಇಟ್ಟುಕೊಂಡಿದ್ದೀರಿ. ಅಕ್ರಮ ಗಣಿಗಾರಿಕೆ ಬಗ್ಗೆ ಒಂದು ಪತ್ರವನ್ನು ಬರೆದಿದ್ದೀರಿ. ಅದನ್ನು ಬಿಟ್ಟು ಮತ್ಯಾವ ಅರ್ಜಿ ಹಾಕಿದ್ದೀರಿ ತೋರಿಸಿ ಸಭೆಗೆ ಎಂದು ಸಂಸದೆ ಸುಮಲತಾರನ್ನು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
ಸಭೆ ನಡೆಯಬಾರದು ಅನ್ನೋ ಸ್ಟ್ರಾಟಜಿ ಇಟ್ಕೊಂಡ್ ಬಂದಿದ್ದೀರಿ: ಸುಮಲತಾ ಟಾಂಗ್
ಸಭೆಗೆ ಅಡ್ಡಿಪಡಿಸುವುದು ಮುಂದುವರಿದಾಗ ಸಭೆ ನಡೆಯಬಾರದು ಅನ್ನೋ ಸ್ಟ್ರಾಟಜಿ ಇಟ್ಕೊಂಡ್ ಬಂದಿದ್ದೀರಿ ಎಂದು ದಳಪತಿಗಳಿಗೆ ಸಂಸದೆ ಸುಮಲತಾ ಟಾಂಗ್ ಕೊಟ್ಟರು. ಸಂಸದೆಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ದಳಪತಿಗಳು ಈ ಮಾತು ವಾಪಸ್ ಪಡೆಯಿರಿ ಎಂದು ಪಟ್ಟು ಹಿಡಿದರು. ಅದಕ್ಕೆ, ನನ್ನ ವಿರುದ್ಧ ಆರೋಪ ಇದ್ದರೆ ದೂರು ಕೊಡಿ ಎಂದು ಸುಮಲತಾ ಹೆಳಿದರು.
ಕೊನೆಗೂ ಸಭೆಯಿಂದ ಹೊರ ನಡೆದ ಸಂಸದೆಯ ಆಪ್ತರು
ದಳಪತಿಗಳ ಪಟ್ಟು ಹಿನ್ನೆಲೆ ಸಂಸದೆ ಸುಮಲತಾ ಅವರ ಆಪ್ತರಾದ ಶ್ರೀನಿವಾಸ್ ಭಟ್, ಮಧುಕುಮಾರ್ ದಿಶಾ ಸಭೆಯಿಂದ ಹೊರ ನಡೆದರು. ಅನಧಿಕೃತ ವ್ಯಕ್ತಿಗಳು ಹೊರ ಹೋಗಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆ ಜೆಡಿಎಸ್ ಶಾಸಕರ ವರ್ತನೆಗೆ ಆಪ್ತರು ಬೇಸತ್ತು ಸಭೆಯಿಂದ ಹೊರ ನಡೆದರು.