ವಿಜಯನಗರ ವಾಣಿ
ಸಂಸದೆ ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್ಗಳಿದ್ದಾರೆ. ಸುಮಲತಾ ಅಟೆಂಡರ್ ಒಬ್ಬ ಫ್ರಾಡ್, ನಯ ವಂಚಕ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ. ಸುಮಲತಾ ಸುತ್ತ ಇರುವವರಿಂದ ಅಧಿಕಾರಿಗಳಿಗೆ ಧಮ್ಕಿ, ಹಣಕ್ಕಾಗಿ ಪೀಡಿಸಿದ್ದಾರೆ. ಸುಮಲತಾಗೆ ಆಪ್ತ ಕಾರ್ಯದರ್ಶಿ ಎಂಬ ಹುದ್ದೆಯೆ ಇಲ್ಲ. ಶ್ರೀನಿವಾಸ್ ಭಟ್ ಎಂಬುವವನನ್ನ ಅನಧಿಕೃತವಾಗಿ ಪಿಎಸ್ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮಾನಸಿಕವಾಗಿ ಜರ್ಜರಿತವಾಗಿದ್ದಾರೆಂದು ತಿಳಿಸಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ , ಸುಮಲತಾ ಅಂಬರೀಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ತಿಂಗಳಿನಿಂದ ಸ್ವಲ್ಪ ಮಟ್ಟಿಗೆ ತಣ್ಣಗಿದ್ದ ಸಂಸದೆ ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರ ನಡುವಿನ ಮುಸುಕಿನ ಗುದ್ದಾಟ ಏಕಾಏಕಿ ಸ್ಪೋಟವಾಗಿದೆ. ನಿನ್ನೆ (ಆಗಸ್ಟ್ 19) ನಡೆದ ದಿಶಾ ಸಭೆಯಲ್ಲಿ ಪರಸ್ಪರ ವಾಕ್ಸಮರ ನಡೆದಿದೆ. ಎರಡು ವರ್ಷದಲ್ಲಿ ಸಂಸದೆ ಸುಮಲತಾ ಅಂಬರೀಶ್ ಎಂಟು ದಿಶಾ ಸಭೆಗಳನ್ನ ನಡೆಸಿದ್ದಾರೆ. ಎಂಟು ಸಭೆಗಳಲ್ಲಿ ಇದೇ ಮೊದಲ ಬಾರಿಗೆ ದಿಶಾ ಸಭೆಗೆ ಜೆಡಿಎಸ್ ನಾಯಕರು ಆಗಮಿಸಿದ್ದರು. ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ನಾಗಮಂಗಲ ಶಾಸಕ ಸುರೇಶ್ ಗೌಡ, ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಎಮ್ಎಲ್ಸಿಗಳಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡರು ಭಾಗಿಯಾಗಿದ್ದರು. ಆರು ಜನರ ಪೈಕಿ ಶಾಸಕ ಸುರೇಶ್ ಗೌಡ ಮಾತ್ರ ಈ ಹಿಂದೆ ಒಂದು ದಿಶಾ ಸಭೆಯಲ್ಲಿ ಭಾಗಿಯಾಗಿದ್ದರು.
ಇಂದು ಸಂಸದೆ ಸುಮಲತಾ, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್.ನಗರ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಮಧ್ಯಾಹ್ನ 12 ಗಂಟೆಗೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ವೀಕ್ಷಣೆ ಮಾಡುತ್ತಾರೆ. ಬಳಿಕ ಪಿಎಂಜಿಎಸ್ವೈ (PMGSY) ಯೋಜನೆಯ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ನಡೆಸುತ್ತಾರೆ. ಮಧ್ಯಾಹ್ನ 3.30ಕ್ಕೆ ಕೆ.ಆರ್.ನಗರ ತಾಲೂಕು ಆಸ್ಪತ್ರೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.