ವಿಜಯನಗರ ವಾಣಿ
ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದ್ದ ಸ್ಥಳದಲ್ಲಿ ಮಣ್ಣಿನ ದಿಬ್ಬ ಕುಸಿದು ಮಗು ಸೇರಿ ಒಟ್ಟು ಐವರು ಮೃತಪಟ್ಟ ಘಟನೆ ರಾಜಸ್ಥಾನದ ಜಾಲೋರ್ನಲ್ಲಿ ನಡೆದಿದೆ. ಪ್ರಸ್ತುತ ನಿರ್ಮಾಣ ತಾಣದಲ್ಲಿ ಕೆಲಸಗಾರರು ನೀರಿನ ಟ್ಯಾಂಕ್ನ್ನು ಅಗೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಲ್ಲಿಗೆ ವಿಪತ್ತು ಪ್ರತಿಕ್ರಿಯಾ ತಂಡವೊಂದು ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ. ಹಾಗೇ, ಈ ಮಣ್ಣಿನ ದಿಬ್ಬ ಕುಸಿತದ ವಿಷಯವನ್ನು ಸುಮ್ಮನೆ ಬಿಡಲಾಗುವುದಿಲ್ಲ. ತನಿಖೆ ನಡೆಸಲಾಗುವುದು ಎಂದು ಜಾಲೋರ್ನ ಡಿಎಸ್ಪಿ ಹಿಮ್ಮತ್ ಚರಣ್ ತಿಳಿಸಿದ್ದಾರೆ.
ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣಿನ ದಿಬ್ಬ ಕುಸಿದು, ಜನರ ಮೈಮೇಲೆ ಬಿದ್ದಿದೆ. ಮಣ್ಣಿನಡಿ ಸಿಲುಕಿದ್ದ ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಹೋಗುವುದರೊಳಗೆ ಜೀವ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಾಲೋರ್ ಅವಘಡದಲ್ಲಿ ಮೃತಪಟ್ಟವರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮಾಡಿರುವ ಗೆಹ್ಲೋಟ್, ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದ್ದ ಜಾಲೋರ್ನಲ್ಲಿ ಮಣ್ಣಿನ ದಿಬ್ಬ ಕುಸಿದು ಹೆಣ್ಣು ಮಗು ಸೇರಿ ಐವರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.