ವಿಜಯನಗರ ವಾಣಿ
ಇಂದು (ಆಗಸ್ಟ್ 21) ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ ವಿನಯ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು. ಸುಮಾರು 9 ತಿಂಗಳ ಬಳಿಕ ಜೈಲಿನಿಂದ ಹೊರಬಂದ ವಿನಯ್ಗೆ ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಬಿಡುಗಡೆಯಾಗುತ್ತಿದ್ದಂತೆ ಹಿಂಡಲಗಾ ಜೈಲು ಮುಂಭಾಗದಿಂದ ದೇಗುಲದವರೆಗೆ ವಿನಯ್ ಕುಲಕರ್ಣಿ ಮೆರವಣಿಗೆ ಮಾಡುತ್ತಿದ್ದಾರೆ.
ಮೆರವಣಿಗೆ ವೇಳೆ ಕೊವಿಡ್ ನಿಯಮ ಉಲ್ಲಂಘನೆಯಾಗಿದ್ದು, ದೈಹಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಜನರು ನಿರ್ಲಕ್ಷ್ಯ ತೋರಿದ್ದಾರೆ. ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ವಿನಯ್ ಕುಲಕರ್ಣಿ ಮೀಸೆ ತಿರುವುತ್ತಾ ಅಭಿಮಾನಿಗಳಿಗೆ ಕೈ ಬೀಸಿದ್ದಾರೆ. ಸಾವಿರಾರು ಜನರು ಭಾಗಿಯಾದ್ರೂ ಭದ್ರತೆಗೆ ಕೇವಲ ಐವತ್ತು ಜನರನ್ನ ಮಾತ್ರ ಬೆಳಗಾವಿ ನಗರ ಪೊಲೀಸ್ ಆಯುಕ್ತ ನೇಮಕ ಮಾಡಿದ್ದಾರೆ.
ಇನ್ನು ಜೈಲಿನಿಂದ ಹೊರಬಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಿನಯ್ ಕುಲಕರ್ಣಿ, ನಾನು ನಿರ್ದೋಷಿಯಾಗಿ ಹೊರಬರುವ ವಿಶ್ವಾಸವಿತ್ತು. ಹಾಗಾಗಿ ನನಗೆ ಸುಪ್ರೀಂಕೋರ್ಟ್ನಿಂದ ಜಾಮೀನು ಸಿಕ್ಕಿದೆ. ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಸಂಕಷ್ಟದಲ್ಲಿದ್ದ ನನಗೆ, ನನ್ನ ಕುಟುಂಬಕ್ಕೆ ಜನ ಸ್ಪಂದಿಸಿದ್ದಾರೆ. ಮಠಾಧೀಶರು, ಅಭಿಮಾನಿಗಳು, ಕ್ಷೇತ್ರದ ಜನರ ಬೆಂಬಲಿಸಿದ್ದಾರೆ. ನನ್ನನ್ನು ಬೆಂಬಲಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. 9 ತಿಂಗಳ ಬಳಿಕ ಸುಪ್ರೀಂಕೋರ್ಟ್ನಿಂದ ಜಾಮೀನು ಸಿಕ್ಕಿದೆ. ಉಳಿದ ರಾಜಕಾರಣಿಗಳೇ ಬೇರೆ, ನಾನೇ ಬೇರೆ. ಕಟ್ಟಕಡೆಯ ವ್ಯಕ್ತಿಯಿಂದ ಶ್ರೀಮಂತರವರೆಗೆ ನನ್ನೊಂದಿಗಿದ್ದಾರೆ ಎಂದು ಅಭಿಪ್ರಾಯಪಟ್ಟರು.