ವಿಜಯನಗರ ವಾಣಿ ಸುದ್ದಿ ಬಳ್ಳಾರಿ
ಬಳ್ಳಾರಿ: ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿನಿಯಮಗಳ ಪ್ರಕಾರ ತ್ಯಾಜ್ಯವನ್ನು ಸಂಗ್ರಹಣೆ, ವಿಂಗಡಣೆ ಹಾಗೂ ವಿಲೇವಾರಿ ಮಾಡುವ ಕುರಿತು ತರಬೇತಿ ಕಾರ್ಯಕ್ರಮಕ್ಕೆ ವಿಮ್ಸ್ನ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ ಅವರು ವಿಮ್ಸ್ನ ಬಿ.ಸಿ.ರಾಯ್ ಭೋದನಾ ಕೊಠಡಿಯಲ್ಲಿ ಸೋಮವಾರ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಆಸ್ಪತ್ರೆಯ ಅವಿಭಾಜ್ಯ ಪ್ರಕ್ರಿಯೆಯಾಗಿದ್ದು, ಜೈವಿಕ–ವೈದ್ಯಕೀಯ ತ್ಯಾಜ್ಯ ಬಹಳ ಅಪಾಯಕಾರಿ. ಯಾವುದೇ ಸಂದರ್ಭದಲ್ಲಿಯೂ ಅದು ಸಾಮಾನ್ಯ ತ್ಯಾಜ್ಯದೊಂದಿಗೆ ಸೇರದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದರು.
ಈ ನಿಟ್ಟಿನಲ್ಲಿ ವಿಮ್ಸ್ ಆಸ್ಪತ್ರೆಯ ಶುಚಿತ್ವ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಶುಶ್ರೂಷಕರು ಹಾಗೂ ‘ಡಿ’ ಗ್ರೂಪ್ ನೌಕರರಿಗೆ ಇಂದಿನಿಂದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ತರಬೇತಿ ಕಾರ್ಯಕ್ರಮ ಸೆಪ್ಟೆಂಬರ್ 7ರ ವರೆಗೆ ನಡೆಯಲಿದ್ದು ಆಸ್ಪತ್ರೆಯ ಎಲ್ಲಾ ಶುಶ್ರೂಷಕರು ಹಾಗೂ ಡಿ ಗ್ರೂಪ್ ನೌಕರರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಮ್ಸ್ನ ಮುಖ್ಯ ಆಡಳಿತಾಧಿಕಾರಿಗಳಾದ ಚೆನ್ನಪ್ಪ, ವಿಮ್ಸ್ ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕರಾದ ಡಾ.ಅರುಣ್ ಕುಮಾರ್, ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಲ್.ರವಿಯವರು, ಮಿಣಿ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಎಸ್, ಶುಶ್ರೂಷಕ ಅಧೀಕ್ಷಕರಾದ ಸಂಪತ್ ಕುಮಾರ್, ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ.ರಮೇಶ್, ಡಾ.ಪುಷ್ಪಲತಾ, ಡಾ.ಸುರೇಶ್ ಹಾಗೂ ಡಾ.ಅನಂತಾಚಾರಿ, 50ಕ್ಕೂ ಹೆಚ್ಚು ಶುಶ್ರೂಷಕರು ಹಾಗೂ ಡಿ ಗ್ರೂಪ್ ನೌಕರರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.