ಹೊಸಪೇಟೆ(ವಿಜಯನಗರ): ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರದಿಂದ ವಿತರಣೆಯಾಗುವ ಆಹಾರ ಸಾಮಾಗ್ರಿಗಳಿಂದ ಪೌಷ್ಠಿಕತೆಯುಕ್ತ ಆಹಾರ ತಯಾರಿಸಿ ಸೇವಿಸುವುದರ ಮೂಲಕ ಪೌಷ್ಠಿಕತೆ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್ ಅವರು ತಿಳಿಸಿದರು.
ರಾಷ್ಟ್ರೀಯ ಪೋಷಣ ಮಾಸಾಚರಣೆಯ ಅಂಗವಾಗಿ ಶಿಶು ಅಭಿವೃದ್ಧಿ ಯೋಜನೆಯಡಿ ಹೊಸಪೇಟೆ ವ್ಯಾಪ್ತಿಯ ಕಮಲಾಪುರ-ಬಿ ವಲಯದ ಹೊಸ ಚಿನ್ನಾಪುರ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದ ಪೌಷ್ಠಿಕ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ್ ಮಾಸಾಚರಣೆ ಜನಾಂದೋಲನ ಕಾರ್ಯಕ್ರಮದ ಮೂಲಕ ಕಿಶೋರಿ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದ ಸಿಂಧು ಯಲಿಗಾರ್ ಅವರು ಅಂಗನವಾಡಿ ಕೇಂದ್ರಗಳಿಂದ ವಿತರಿಸುವ ಆಹಾರ ಸಾಮಗ್ರಿಗಳಿಂದ ಪೌಷ್ಠಿಕ ಆಹಾರ ಸಿದ್ದಪಡಿಸಿ ಸೇವಿಸುವುದರ ಮೂಲಕ ಪೌಷ್ಠಿಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಎಲ್ಲಾ ಗರ್ಭಿಣಿ ಮಹಿಳೆಯರು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಪೌಷ್ಠಿಕ ಮೇಳದಲ್ಲಿ ಆಹಾರ ಸಾಮಾಗ್ರಿಗಳಿಂದ ತಯಾರಿಸಬಹುದಾದ ವಿವಿಧ ಬಗೆಯ ತಿನಿಸುಗಳನ್ನು ಕಾರ್ಯಕರ್ತೆಯರು ತಯಾರಿಸಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ, ಸೀತಾರಾಮತಾಂಡ ಗ್ರಾಮ ಪಂಚಾಯತಿ ಸದಸ್ಯರಾದ ಹುಲುಗಪ್ಪ, ಮೇಲ್ವಿಚಾರಕಿ ಎಲ್.ಡಿ ನದಾಫ್, ಕಲಿಕಾ ಟ್ರಸ್ಟ್ನ ಕೊಟ್ರೇಶ, ಜಗನ್ನಾಥ, ಸ್ಥಳೀಯ ಜನಪ್ರತಿನಿಧಿಗಳು, ಕಮಲಾಪುರ-ಬಿ ವಲಯದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಗರ್ಭಿಣಿ ಮತ್ತು ಬಾಣಂತಿಯರು ಮತ್ತು ಸಾರ್ವಜನಿಕರು ಹಾಜರಿದ್ದರು.