ಬೆಂಗಳೂರು, ನವೆಂಬರ್ 12,2022: ಅನಂತ ಕುಮಾರ್ ಪ್ರತಿಷ್ಠಾನ, ಅದಮ್ಯ ಚೇತನ, ಅನಂತ ಪ್ರೇರಣಾ ಕೇಂದ್ರವು ಅನಂತಕುಮಾರ್ ಅವರ 4 ನೇ ಪುಣ್ಯ ಸ್ಮರಣೆಯ ಅಂಗವಾಗಿ ನವೆಂಬರ್ 12 ರಂದು ಅನಂತ ಸ್ಮೃತಿ ನಡಿಗೆ ಪಂಜಿನ ಮೆರವಣಿಗೆಯನ್ನು ಆಯೋಜಿಸಿತ್ತು. ಕುವೆಂಪು, ಡಿ.ವಿ.ಜಿ., ಎಚ್.ಎನ್, ಸರ್ ಎಂ. ವಿಶ್ವೇಶ್ವರಾಯ, ಶ್ರೀ ಬಿ.ಎಂ. ಶ್ರೀ, ಡಾ. ರಾಜ್ ಕುಮಾರ್ ಮತ್ತೀತರ ದಿಗ್ಗಜರ ಪ್ರತಿಮೆಗೆ ವಂದಿಸಿ 4 ಕಿಲೋ ಮೀಟರ್ ಪಂಜಿನ ಮೆರವಣಿಗೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಹಾಗೇ ಪ್ರೋ.ಎಚ್.ಎಸ್. ನಾಗರಾಜ್, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ರಾಜ್ಯ ಬಿಜೆಪಿ ಖಜಾಂಚಿ ಸುಬ್ಬ ನರಸಿಂಹ, ಆರ್ ಎಸ್ ಎಸ್ ಪ್ರಮುಖ್ ವಿ. ಮಂಜುನಾಥ್ , ಮಮತಾ ಆರ್ .ವಿ. ದೇವರಾಜ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇನ್ನು ಈ ಕಾರ್ಯಕ್ರಮದ ಕುರಿತು ಮಾತನಾಡಿದ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ “ಅನಂತ ಕುಮಾರ್ ಅವರ 4ನೇ ಪುಣ್ಯತಿಥಿ ಅಂಗವಾಗಿ ನಾವು ಅನಂತ್ ಕುಮಾರ್ ಅವರ ಜೊತೆಗೆ ಈ ಭಾಗದಲ್ಲಿ ದೇಶ ಹಾಗೂ ರಾಜ್ಯಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ ಮಹನೀಯರನ್ನು ನೆನಪಿಸಿಕೊಂಡು ಅವರು ತೋರಿಸಿದ ದಾರಿಯಲ್ಲಿ ನಡೆಯುವ ಉದ್ದೇಶದಿಂದ ಹಿರಿಯರು, ಯುವಕರು, ಯುವತಿಯರು ಸೇರಿ ಪಂಜಿನ ಮೆರವಣಿಗೆಯನ್ನು ಮಾಡಿದ್ದೇವೆ.ಸುಮಾರು 750ಕ್ಕೂ ಹೆಚ್ಚು ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದೇ ಸಂತಸದ ವಿಷಯವೆಂದು” ಅವರು ತಿಳಿಸಿದ್ದಾರೆ.ಜಯನಗರದಲ್ಲಿರುವ ಅನಂತ ಪ್ರೇರಣಾ ಕೇಂದ್ರದಿಂದ ಆರಂಭವಾದ ಈ ಮೆರವಣಿಗೆ ರಾ.ವಿ.ರಸ್ತೆ, ಅನಂತ ಸ್ಮೃತಿ ವನ, ವಾಣಿವಿಲಾಸ್ ರಸ್ತೆ, ಡಿ.ವಿ.ಗುಂಡಪ್ಪ ರಸ್ತೆ, ನಾಗಸಂದ್ರ ವೃತ್ತ, ಸೌತ್ ಎಂಡ್ ರಸ್ತೆ, ಜಯನಗರದಲ್ಲಿರುವ ಅನಂತ ಪ್ರೇರಣಾ ಕೇಂದ್ರದಲ್ಲಿ ಮುಕ್ತಾಯಗೊಂಡಿದೆ.