ಶಾಸಕ ಗಣೇಶ್ ಕಮಿಷನ್ ಪಡೆಯಲು 100 ಹಾಸಿಗೆ ಆಸ್ಪತ್ರೆಗೆ ಭೂಮಿ ಪೂಜೆ : ಸಿ.ಆರ್ ಹನುಮಂತ ‌ಆರೋಪ

Share and Enjoy !

Shares

ವಿಜಯನಗರವಾಣಿ ಸುದ್ದಿ
ಕುರುಗೋಡು.

ಜನವರಿ 4 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ ವರ್ಚುವಲ್ ಮೂಲಕ ಉದ್ಘಾಟನೆಗೊಂಡಿರುವ ಕುರುಗೋಡಿನ 100 ಹಾಸಿಗೆ ಆಸ್ಪತ್ರೆಯನ್ನು ಪುನಃ ಕಮಿಷನ್ ಪಡೆಯುವ ದುರುದ್ದೇಶದಿಂದ
ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಜನವರಿ 27 ರಂದು ಉದ್ಘಾಟನೆ ಮಾಡುತ್ತಿರುವುದು ಹಾಸ್ಯಾಸ್ಪದ.
ಶಾಸಕರು ಯಾವ ಶಿಷ್ಟಾಚಾರವನ್ನು ಪಾಲಿಸದೇ ರಾಜಕೀಯ ಲಾಭ ಪಡೆಯಲು ಉದ್ಘಾಟನೆಗೆ ಮುಂದಾಗಿರುವುದು ದುರಂತವೇ ಸರಿ.
ಮಾತೆತ್ತಿದರೆ ಶಿಷ್ಟಾಚಾರ ಎನ್ನುತ್ತಾರೆ ತಾವು ಯಾವ ಶಿಷ್ಟಾಚಾರ ಪಾಲಿಸಿ ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ ?
ಮೊದಲು ನಿಮಗೆ ನೈತಿಕತೆ ಇದೆಯಾ ? ಎಂದು ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಶಾಸಕ ಗಣೇಶ್ ಬಗ್ಗೆ ಗಂಭೀರ ಆರೋಪ ಮಾಡಿದರು.

ಅವರು ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ನಿಲಯದಲ್ಲಿ ಗುರುವಾರ ಬಿಜೆಪಿ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಗಣೇಶ್ ಮುದ್ರಿಸಿರುವ ಆಹ್ವಾನ ಪತ್ರಿಕೆಯಲ್ಲಿ ಉಸ್ತುವಾರಿ ಸಚಿವರ ಹೆಸರು ಏಕಿಲ್ಲ ?
ಅಧಿಕಾರಿಗಳ ಹೆಸರೂ ಇಲ್ಲ ? ಸಿದ್ದರಾಮಯ್ಯ ಪೋಟೋ ಆಗಲಿ,ಹೆಸರಾಗಲಿ ಏಕಿಲ್ಲ ?
ಡಿಕೆ ಶಿವಕುಮಾರ್ ಟಿಕೆಟ್ ಕೊಡ್ತಾರೆ ಅಂತ ಅವರ ಹೆಸರು ಹಾಕಿದ್ದೀರಿ.

ಸಿದ್ದರಾಮಯ್ಯ ಬಂದು ನಿನ್ನ ಪರ ಪ್ರಚಾರ ಮಾಡದಿದ್ದರೆ ನೀನು ಗೆಲ್ಲುತ್ತಿದ್ದೇಯಾ ? ಕುರುಬರ ಮತ ನಿನಗೆ ಬೀಳುತಿತ್ತಾ ? ಶಾಸಕ ಗಣೇಶ್ ತಾವು ಈಗ ಮಾಡುತ್ತಿರುವ 100 ಹಾಸಿಗೆ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮ ವರ್ಚುವಲ್ ಮೂಲಕ ಉದ್ಘಾಟನೆಯಾದಾಗ ತಾವು ಕಾರ್ಯಕ್ರಮಕ್ಕೆ ಹಾಜರಿದ್ದೀರಿ ಅಲ್ಲವೇ ? ಈಗ ನೀವು ಮಾಡುತ್ತಿರುವುದು ಇದು
ಸರ್ಕಾರಿ ಕಾರ್ಯಕ್ರಮವೇ ? ಅಥವಾ ಖಾಸಗೀ ಕಾರ್ಯಕ್ರಮವೇ ? ಸರ್ಕಾರಿ ಕಾರ್ಯಕ್ರಮ ಆಗಿದ್ದರೆ, ಮುಖ್ಯಮಂತ್ರಿ ,ಉಸ್ತುವಾರಿ ಸಚಿವರು,ಪೋಟೋ,ಹೆಸರು ಏಕಿಲ್ಲ ? ಖಾಸಗಿ ಕಾರ್ಯಕ್ರಮ ಆಗಿದ್ದರೆ ಇದೇನು ನಿನ್ನ ಮನೆಯ ಕಾರ್ಯಕ್ರಮವೇ ?
ಜನರ ತೆರಿಗೆಯಲ್ಲಿ ಸರ್ಕಾರ ಕೊಟ್ಟ ಅನುದಾನದಲ್ಲಿ ನೀವು ಹೇಗೆ ಸ್ವಂತ ಕಾರ್ಯಕ್ರಮ ಮಾಡ್ತಿರಿ ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕರೋನಾ ಸಂದರ್ಭದಲ್ಲಿ ಸುರೇಶ್ ಬಾಬು ಜನರಿಗೆ ನೆರವು ನೀಡಲು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಕೋವಿಡ್ ಕೇರ್ ತೆಗೆದು ಆಕ್ಸಿಜನ್, ಮಿಷನ್ ಗಳನ್ನು ತಂದಾಗ ಅದು ಜನರಿಗೆ ಮುಟ್ಟಬಾರದು ಎಂದು ಕುತಂತ್ರ ಮಾಡಿ ಬೀಗ ಹಾಕಿಸಿ ನೀನು ಏನು ಸಾಧಿಸಿದ್ದೀಯಾ ?,ಇಟಗಿಯಲ್ಲಿ 110 ಕೆ.ವಿ ವಿದ್ಯುತ್ ಘಟಕಕ್ಕೆ ಶ್ರೀ ರಾಮುಲು ,ಸುರೇಶ್ ಬಾಬು ಉದ್ಘಾಟನೆ ಮಾಡಿದ್ದರೂ ಎರಡನೇ ಬಾರಿ ಉದ್ಘಾಟನೆ ಮಾಡಿದ್ದೇಕೆ ? ಎಂದರು.

ನಂತರ ಎಸ್.ಸಿ ಮೋರ್ಚಾ ಮಂಡಲ ಅಧ್ಯಕ್ಷ ಸಿ.ಆರ್ ಹನುಮಂತ ಮಾತನಾಡಿ
ಶಾಸಕ ಗಣೇಶ್ ಉದ್ಘಾಟನೆಗೊಂಡಿರುವ 100 ಹಾಸಿಗೆ ಆಸ್ಪತ್ರೆಯನ್ನು ಮತ್ತೆ ತುರಾತುರಿಯಲ್ಲಿ ಉದ್ಘಾಟನೆ ಮಾಡಲು ಪ್ರಮುಖ ಕಾರಣ ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಗಳು
ಉದ್ಘಾಟನೆ ಮಾಡಿದಾಗ ಗಣೇಶ್ ಗೆ ಕಮಿಷನ್ ಬಂದಿಲ್ಲ ಅದಕ್ಕೆ ಭೂಮಿ ಪೂಜೆಗೆ 15 ಸಾವಿರ
ಹಾಗೂ 10 ರಿಂದ 15 % ಕಮಿಷನ್ ಸಿಗುತ್ತದೆ ಎಂಬ ಕಾರಣದಿಂದ ಭೂಮಿ ಪೂಜೆ ಮಾಡುತ್ತಿದ್ದಾರೆ.
ಆಹ್ವಾನ ಪತ್ರಿಕೆ ಮದುವೆ ಕಾರ್ಡ್ ರೀತಿಯಲ್ಲಿ ತಯಾರಿಸಿದ್ದಾರೆ.ಯಾವ ಸಚಿವರ,ಅಧಿಕಾರಿಗಳ ಹೆಸರಿಲ್ಲ,ಪಕ್ಷದ ಯಾವುದೇ ಚಿಹ್ನೆ ಇಲ್ಲ ? ಅವರ ನೆಚ್ಚಿನ ಗುರು ಸಿದ್ದರಾಮಯ್ಯರ ಹೆಸರಿಲ್ಲ,ಡಿಕೆ ಶಿವಕುಮಾರ್ ಹೆಸರಿದೆ. ಕಟ್ಟಡ ನಿರ್ಮಾಣ ಹೊಣೆ ಹೊತ್ತ ಗುತ್ತಿಗೆದಾರ ಯಾರು ? ಅವರ ಹೆಸರೇಕಿಲ್ಲ ?
ಡಿಎಂಎಫ್ ಹಣದ ಅಧ್ಯಕ್ಷತೆ ಉಸ್ತುವಾರಿ ಸಚಿವ ಶ್ರೀ ರಾಮುಲು ಅವರದ್ದು , ಅವರ ಹೆಸರೇಕಿಲ್ಲ ?
ತಾಲ್ಲೂಕು ಆಡಳಿತ
ಅಧಿಕಾರಿಗಳು ಹೇಗೆ ಭಾಗವಹಿಸುತ್ತಾರೆ ನೋಡುತ್ತೇನೆ.
ಅಭಿವೃದ್ಧಿ ಮಾಡಲು ಸುರೇಶ್ ಬಾಬು, ಶ್ರೀ ರಾಮುಲು ಅಡ್ಡಬರುತ್ತಾರೆ ಎನ್ನುವ ಗಣೇಶ್ ಗೆ ಅನುದಾನ ಹೇಗೆ ಸಿಕ್ಕಿದೆ.?
ಸುರೇಶ್ ಬಾಬು,ಶ್ರೀ ರಾಮುಲು ಮನಸ್ಸು ಮಾಡಿದ್ದರೆ ಅನುದಾನ ತಡೆಯಬಹುದಲ್ಲವೇ ? ಗಣೇಶ್ ಮಾಡುತ್ತಿರುವ ಉದ್ಘಾಟನೆ ಕಾನೂನು ಬಾಹಿರ.
ಗಣೇಶ್ ಗೆಲ್ಲಿಸಿದ ಜನರನ್ನೇ ತುಳಿದಿದ್ದಾನೆ.
ಪಕ್ಕದಲ್ಲಿ ಯಾರೂ ಇಲ್ಲ,
ಚುನಾವಣೆಯಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ನಂತರ ಮಾತನಾಡಿದ ಮುಖಂಡ ಸುನೀಲ್ ಸ್ವಾಮಿ
2022ರಲ್ಲಿ ಬಿಜೆಪಿ ಸರ್ಕಾರ ಅನುಮೋದನೆ ಕೊಟ್ಟಿದೆ.ಈ ಹಿಂದೆ ಆನಂದ್ ಸಿಂಗ್ ಪ್ರಸ್ತಾವನೆ ಸಲ್ಲಿಸಿದ್ದರು.ಶ್ರೀ ರಾಮುಲು ಅನುಮೋದನೆ ಕೊಡಿಸಿದ್ದರು.ಇದು ನಿಮ್ಮ ಸಾಧನೆ ಎನ್ನುವ ಹಾಗೆ ಕಾರ್ಯಕ್ರಮ ಮಾಡುವುದು ಏನಿದೆ ? ಕಂಪ್ಲಿ,ಕುರುಗೋಡು ತಾಲ್ಲೂಕು ಘೋಷಣೆಗೆ ಹೋರಾಟಗಾರರ ಪಾತ್ರ ಅನನ್ಯವಾದದ್ದು ಜೊತೆಗೆ ಸುರೇಶ್ ಬಾಬು ಎರಡು ತಾಲ್ಲೂಕು ಘೋಷಣೆ ಮಾಡಿಸಿದ್ದರು.
ಈಗ ಹೊಸ ತಾಲ್ಲೂಕು ಘೋಷಣೆ ಆಗಿರುವುದರಿಂದ ಅನುದಾನ ಬಂದಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಬಸ್ ಡಿಪೋ ಉದ್ಘಾಟನೆಗೆ ಬಂದಿದ್ದರು.ಶಿಷ್ಟಾಚಾರ ಅಂದ್ರೆ ಇದು ನೀವು ಮಾಡುವ ರಾಜಕೀಯವಲ್ಲ ಎಂದರು.

ನಂತರ ಮುಖಂಡ ವಿರೂಪಾಕ್ಷ ಗೌಡ ಮಾತನಾಡಿ
ಗಣೇಶ್ ವೈಯಕ್ತಿಕವಾಗಿ ಚುನಾವಣೆ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದಂತೆ ಕಾಣುತ್ತಿದೆ ಆದರೆ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ,ಖಾಸಗಿ ಕಾರ್ಯಕ್ರಮವೂ ಅಲ್ಲ. ಆಶ್ಚರ್ಯ ಸಂಗತಿ ಎಂದರೆ ಇದೆಲ್ಲವನ್ನೂ ಕಂಡರೂ ಕಾಣದಂತೆ ತಾಲ್ಲೂಕು ಆಡಳಿತ ಸುಮ್ಮನಿರುವುದೇಕೆ ?ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರೇಮ್ ,ಸುಧಾಕರ್,ಬ್ರಹ್ಮಯ್ಯ,ಪುರುಷೋತ್ತಮ, ಸಿದ್ದಪ್ಪ,ಡಿಶ್ ರಾಜಣ್ಣ,ಜೆಡೆಪ್ಪ ಸ್ವಾಮಿ,ಕೆ.ನೀಲಪ್ಪ,ನರಸಪ್ಪ ಯಾದವ್,ನಾಗರಾಜ್. ಕೆ,ಲಲಿತಮ್ಮ ತಿಪ್ಪನಗೌಡ,ಬುಟ್ಟ ಮಲ್ಲಿಕಾರ್ಜುನ, ಎಸ್.ಟಿ ಮೋರ್ಚಾ ಅಧ್ಯಕ್ಷ ಕುಮಾರೆಪ್ಪ,ಯುವ ಮೋರ್ಚಾ ಅಧ್ಯಕ್ಷ ನಟರಾಜ ಗೌಡ,ಪ್ರಧಾನ ಕಾರ್ಯದರ್ಶಿ ಮೇಲುಗಿರಿ ಬಸವರಾಜ್, ಬಸವನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share and Enjoy !

Shares