ಧಾರವಾಡ; ಫೆ.28: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಇಂದು (ಫೆ.28) ಬೆಳಿಗ್ಗೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವಿದ್ಯುತ್ ದರ ಪರಿಷ್ಕರಣೆಯ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಲಾಯಿತು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಮಾತನಾಡಿ, ಆಯೋಗವು ಮುಂದಿನ ದಿನಗಳಲ್ಲಿ ಗ್ರಾಹಕರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಿದೆ. ವಿದ್ಯುತ್ ದರ ಹೆಚ್ಚಳ ಕುರಿತು ಆಯೋಗ ಪರಿಶೀಲಿಸುತ್ತದೆ. ವಿದ್ಯುತ್ ಬಳಕೆದಾರರ ಹಾಗೂ ಹೆಸ್ಕಾಂ ಸೇರಿ ಇಬ್ಬರ ಹಿತರಕ್ಷಣೆ ಮುಖ್ಯವಾಗಿದೆ. ಆದರೂ ಗ್ರಾಹಕರಿಗೆ ತೃಪ್ತಿಕರವಾದ ಸೇವೆ ನೀಡುವುದು ಹೆಸ್ಕಾಂ ಕಂಪನಿಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಆಯೋಗದ ಅಧ್ಯಕ್ಷ ಪಿ.ರವಿಕುಮಾರ, ಸದಸ್ಯರಾದ ಎಚ್.ಎಂ.ಮಂಜುನಾಥ, ಎಂ.ಡಿ.ರವಿ ನೇತ್ರತ್ವದಲ್ಲಿ ದರ ಪರಿಷ್ಕರಣೆ ಬಗ್ಗೆ ಸಾರ್ವಜನಿಕ ವಿಚಾರಣೆ ಜರುಗಿತು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಹೆಸ್ಕಾಂ ದಿಂದ ವಿದ್ಯುತ್ ಖರೀದಿ ಮತ್ತು ಮಾರಾಟ ಹಾಗೂ ಲಾಭ, ನಷ್ಟದ ಕುರಿತು ವಿವರಿಸಿದರು. ವೆಚ್ಚ ಹೆಚ್ಚಳವಾಗಿರುವದರಿಂದ ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿದರು.
ಸಭೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲಟ್ಟಿ, ಹಣಕಾಸು ವಿಭಾಗ ನಿರ್ದೇಶಕ ಪ್ರಕಾಶ ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಯ ಕೈಗಾರಿಕೋದ್ಯಮಿಗಳು, ವಿವಿಧ ಗ್ರಾಹಕ ಸಂಘಗಳು, ವಿದ್ಯುತ್ ಬಳಕೆದಾರರ ಸಂಘಗಳು, ರೈತರು, ಸಾರ್ವಜನಿಕರು ಭಾಗವಹಿಸಿ, ದರ ಹೆಚ್ಚಳಕ್ಕೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದರು.