ಮೈಸೂರು:ದರ್ಶನ್ ಧ್ರುವ ನಾರಾಯಣ್ ತಂದೆ ಆರ್.ಧ್ರುವನಾರಾಯಣ ಅಕಾಲಿಕ ಸಾವಿನಿಂದ ಕಂಗಾಲಾಗಿದ್ದ ದರ್ಶನ್ ಮತ್ತು ಧೀರನ್ ಅವರಿಗೆ ಈಗ ತಾಯಿ ನಿಧನ ಬರಸಿಡಿಲಿನಂತೆ ಬಡಿದಿದೆ. ತಂದೆ ಆರ್.ಧ್ರುವನಾರಾಯಣ ಸಾವಿನ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರು ಈಗ ತಾಯಿ ವೀಣಾರನ್ನು ಕಳೆದುಕೊಂಡಿದ್ದಾರೆ. ಹೌದು..ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ನಿಧನರಾಗಿ ತಿಂಗಳೊಳಗೆ ಪತ್ನಿ ವೀಣಾ ಧ್ರುವನಾರಾಯಣ್ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರು ಇಂದು (ಏಪ್ರಿಲ್ 07) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ದರ್ಶನ್ ಅವರು ತಂದೆ ಬೆನ್ನಲ್ಲೇ ಇದೀಗ ತಾಯಿಯನ್ನೂ ಕಳೆದುಕೊಂಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದು, ಸಾರಾ ಮಹೇಶ್ ಹಾಗೂ ಇತರೆ ನಾಯಕರು ಧ್ರುವನಾರಾಯಣ್ ಪುತ್ರರಿಗೆ ಧೈರ್ಯ ತುಂಬಿದ್ದಾರೆ. ರಾಜ್ಯ ನಾಯಕರು ಧ್ರುವ ನಾರಾಯಣ್ ಪುತ್ರ ದರ್ಶನ್ಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಮೈಸೂರಿನ ರೆಡಿಯಂಟ್ ಆಸ್ಪತ್ರೆಗೆ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ವಿವಿಧ ಪಕ್ಷಗಳ ನಾಯಕರು ದೌಡಯಿಸುತ್ತಿದ್ದು, ನಾಳೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಧ್ರುವನಾರಾಯಣ್ ಪುತ್ರ ದರ್ಶನ್ ಮಾಹಿತಿ ನೀಡಿದ್ದಾರೆ. ಸದ್ಯ ಇಂದು ಸಂಜೆ 4 ಗಂಟೆಯ ನಂತರ ಹೆಗ್ಗವಾಡಿ ಗ್ರಾಮಕ್ಕೆ ಪಾರ್ಥಿವ ಶರೀರ ರವಾನೆಯಾಗಲಿದೆ.
ಇನ್ನು ದಿವಂಗತ ಆರ್.ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಆರ್.ಧ್ರುವನಾರಾಯಣ ಅವರು ಮಾರ್ಚ್. 11 ರಂದು ತೀರ್ವ ರಕ್ತಸ್ರಾವದಿಂದ ನಿಧನರಾದರು. ಈ ಹಿನ್ನೆಲೆ ಇವರ ಟಿಕೆಟ್ ಅನ್ನು ಪುತ್ರ ದರ್ಶನ ಧ್ರುವನಾರಾಯಣ ಅವರಿಗೆ ನೀಡಲಾಗಿದೆ.