ಬಳ್ಳಾರಿ :ವಡ್ಡರ ಬಂಡೆ ಯಲ್ಲಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಛೇರಿಯಿಂದ ಪಕ್ಷದ ಬೆಂಬಲಿಗರು, ಕಾರ್ಯಕರ್ತರು, ಮೆರವಣಿಗೆಯಲ್ಲಿ ಬಂದು ಮಹಾನಗರ ಪಾಲಿಕೆಯಲ್ಲಿ ಆರ್. ಸೋಮಶೇಖರ್ ಗೌಡ ಅವರು ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ, ಪಕ್ಷದ ಕಛೇರಿಯ ಮುಂಬಾಗದಲ್ಲಿ, ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದ 104ನೇ ಸ್ಮರಣ ದಿನದ ಅಂಗವಾಗಿ, ಮಡಿದ ಹುತಾತ್ಮರಿಗೆ ಹೂ ಗುಚ್ಚ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಕೆ.ರಾಧಾಕೃಷ್ಣ ಉಪಾಧ್ಯ ರವರು ಮಾತನಾಡುತ್ತ “ಜಲಿಯಾನ್ ವಾಲಾಬಾಗ್ ಭಗತ್ ಸಿಂಗ್ ರವರ ಹೋರಾಟಕ್ಕೆ ಗಾಡ ಪ್ರಭಾವ ಬೀರಿದ ಘಟನೆ. ಭಗತ್ ಸಿಂಗ್, ನೇತಾಜಿ ರವರು ಮಾಡಿದ ಮಹಾನ್ ರಾಜಕೀಯ ಇಂದು ನಾವು ಮಾಡಬೇಕಿದೆ.
ದಮನಿತರ, ಶೋಷಿತರ, ಪರವಾಗಿ ಧ್ವನಿ ಎತ್ತುವ, ಜನಸಾಮಾನ್ಯರ ಬದುಕು ಕಟ್ಟುವ, ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಕೊನೆ ಗಾಣಿಸುವಂತಹ ಕ್ರಾಂತಿಕಾರಿ ರಾಜಕೀಯ ಅಗತ್ಯವಿದೆ.
ಸ್ವಾತಂತ್ರ್ಯ ಬಂದಾಗಿನಿಂದ ನಮ್ಮನಾಳಿದ ಎಲ್ಲಾ ಪಕ್ಷಗಳು ದೇಶವನ್ನು ಲೂಟಿ ಮಾಡುವ ನೀತಿಗಳನ್ನೇ ಜಾರಿಗೊಳಿಸುತ್ತಿದೆ. ಬಂಡವಾಳಿಗರ ಹಿತಕಾಯಲು ಕಟಿಬದ್ದರಾಗಿ ನಾ ಮುಂದು ತಾ ಮುಂದು ಎಂದು ಪೈಪೋಟಿಗಿಳಿದಿವೆ. ಜನ ಸಾಮಾನ್ಯರ ಅಗತ್ಯಗಳೇನು ಎಂಬುದು ಇವರಿಗೆ ಚುನಾವಣೆಯ ಮುಖ್ಯ ಅಂಶವೇ ಅಲ್ಲ. ಜಾತಿ ಧರ್ಮಗಳ ಹೆಸರಲ್ಲಿ ಜನರ ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಹಣ ಆಮಿಷಗಳನ್ನು ಒಡ್ಡಿ , ಹೇಗಾದರೂ ಮಾಡಿ ಅಧಿಕಾರ ಹಿಡಿದು ,ಲೂಟಿ ಹೊಡೆಯುವುದೇ ಇವರ ಚುನಾವಣೆಯ ಧ್ಯೇಯ ವಾಗಿದೆ.
ಈ ಹಿನ್ನೆಲೆಯಲ್ಲಿ ಹಣ ಅಂತಸ್ತುಕ್ಕಿಂತ, ಜನತೆಯ ಹೋರಾಟಕ್ಕೆ ಇರುವ ಬದ್ದತೆಯಿಂದ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿ ಕಾ.ಸೋಮಶೇಖರ ಗೌಡ ಅವರು. ನಮ್ಮ ಎಲ್ಲಾ ಅಭ್ಯರ್ಥಿಗಳು ಜನತೆಯ ಹೋರಾಟಗಳಿಂದ ಹೊರಹೊಮ್ಮಿದವರು. ಹಾಗಾಗಿ ಸತ್ಯದ ಪರ, ನ್ಯಾಯದ ಪರ, ಹೋರಾಟದ ಪರ ಮತ ನೀಡಿ, ಎಸ್.ಯು.ಸಿ.ಐ,(ಸಿ) ಪಕ್ಷವನ್ನು ಗೆಲ್ಲಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆರ್.ಸೋಮಶೇಖರ್ ಗೌಡ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್, ಜಿಲ್ಲಾ ಸಮಿತಿ ಸದಸ್ಯರಾದ ಎಮ್.ಎನ್.ಮಂಜುಳ, ಡಾ.ಪ್ರಮೋದ್, ಡಿ.ನಾಗಲಕ್ಷ್ಮೀ, ಎ.ಶಾಂತ, ಗೋವಿಂದ, ಸುರೇಶ, ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರೊಂದಿಗೆ ನಾಮಪತ್ರ ಸಲ್ಲಿಸಲು ಮಹಾನಗರ ಪಾಲಿಕೆಗೆ ಮೆರವಣಿಗೆ ಸಾಗಿತು.