ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇಂದಿನಿಂದ ಅರ್ಜಿ ಸಲ್ಲಿಕೆಯೂ ಆರಂಭವಾಗಬೇಕಿತ್ತು. ಅದಕ್ಕೂ ಮುನ್ನವೇ ಶಾಕ್ ಎದುರಾಗಿದೆ.ಕಾಂಗ್ರೆಸ್ ಗ್ಯಾರಂಟಿಗಳ ಪೈಕಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಮಾಸಿಕ ಹಣ ನೀಡುವ ಗೃಹಲಕ್ಷ್ಮಿ ಯೋಜನೆಯೂ ಒಂದು. ಅತ್ತೆ ಅಥವಾ ಸೊಸೆ ಸೇರಿದಂತೆ ಮನೆಯ ಓರ್ವ ಯಜಮಾನಿಗೆ 2000 ರೂಪಾಯಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.ಅಂದುಕೊಂಡಂತೆ ಆಗಿದ್ದರೆ ಇಂದಿನಿಂದ ಅಂದರೆ ಜೂನ್ 27ರಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಬೇಕಿತ್ತು. ಮಹಿಳೆಯರೂ ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಜ್ಜಾಗಿದ್ದರು. ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕಾರ್ಯ ನಾಳೆಯಿಂದ ಆರಂಭವಾಗುವುದಿಲ್ಲ ಎನ್ನಲಾಗಿದೆ. ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಬಳಿಕ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ.
ಯೋಜನೆಗೆ ನಾಳೆಯಿಂದಲೇ ಅರ್ಜಿ ಸಲ್ಲಿಸಬಹುದು ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು. ಆದರೆ ಸರ್ಕಾರದ ನಿರ್ಧಾರದಂತೆ ಇಂದಿನಿಂದ ನೋಂದಣಿ ಪ್ರಾರಂಭವಾಗುವಿದಿಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದಿನಿಂದ ನೊಂದಣಿ ಕಾರ್ಯ ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಯಾವುದೇ ಸೂಚನೆ ಸಿಕ್ಕಿಲ್ಲ ಎನ್ನಲಾಗಿದೆ. ಜೂ. 28ರಂದು ಸಭೆ ನಡೆಸಿ, ಬಳಿಕ ಇಲಾಖಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡುವ ಸಾಧ್ಯತೆ ಇದೆ.
ಪ್ರತಿ ಮನೆಯ ಯಜಮಾನಿ ಗೃಹಲಕ್ಷ್ಮಿ ಯೋಜನೆ ಅಡಿ 2 ಸಾವಿರ ರೂಪಾಯಿ ಪಡೆಯಬಹುದಾಗಿದೆ. ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸ್ತ್ರೀಯರು ಅರ್ಜಿ ಸಲ್ಲಿಸಬಹುದು. ವಿವಾಹಿತ ಮಹಿಳೆಯರು, ವಿಚ್ಛೇದಿತ ಮಹಿಳೆಯರು ಹಾಗೂ ನಿರ್ಗತಿಕ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೆಲ್ಸ್ ನೀಡಬೇಕು.
ಅತ್ತೆಯಾದರೂ , ಸೊಸೆಯಾದರೂ ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮನೆಯ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅತ್ತೆ ಖಾತೆಗೆ ಹಣ ಸೇರಬೇಕೋ ಅಥವಾ ಸೊಸೆ ಖಾತೆಗೆ ಹಣ ಸೇರಬೇಕೋ ಎನ್ನುವುದನ್ನು ಆ ಕುಟುಂಬಸ್ಥರೇ ನಿರ್ಧಾರ ಮಾಡಿ, ಸರ್ಕಾರಕ್ಕೆ ಮಾಹಿತಿ ನೀಡಬೇಕು ಅಂತ ಹೇಳಿದೆ.
ಆನ್ ಲೈನ್ ಅಥವಾ ಆಫ್ ಲೈನ್ ಎರಡೂ ವಿಧಾನದಿಂದ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಬಹುದು. ಮನೆಯಲ್ಲಿ ಅತ್ತೆ ಅಥವಾ ಸೊಸೆ ಇಬ್ಬರಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮನೆ ಯಜಮಾನಿ ಕೆಲವು ಅಗತ್ಯ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಪಾಸ್ಬುಕ್ಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು. ಕುಟುಂಬದ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಅರ್ಜಿ ಜೊತೆ ಲಗತ್ತಿಸಬೇಕು.