ಬೆಂಗಳೂರು, ಸೆ.06: ಬೆಂಗಳೂರಿನಲ್ಲಿರುವ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಚಾರಿಟಬಲ್ ವಿಭಾಗವಾದ ಸ್ಪರ್ಶ್ ಫೌಂಡೇಶನ್ ಗುರು ನಮನ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಭಾಗದ ಸುಮಾರು 100 ನಿವೃತ್ತ ಶಿಕ್ಷಕರಿಗೆ ಉಚಿತ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಆಯೋಜಿಸಿದೆ. 2010 ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 800 ಶಿಕ್ಷಕರು ಈ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ. ಗುರು ನಮನ ಕಾರ್ಯಕ್ರಮದ ಅಡಿಯಲ್ಲಿ, ಬೆಂಗಳೂರು, ರಾಯಚೂರು, ಕಲಬುರ್ಗಿ, ಹಾಸನ ಮತ್ತು ದಾವಣಗೆರೆಯಲ್ಲಿ ಸ್ಕ್ರೀನಿಂಗ್ ಶಿಬಿರಗಳನ್ನು ನಡೆಸಲಾಗಿದ್ದು, ಇದರಲ್ಲಿ ಅರ್ಹ ನಿವೃತ್ತ ಶಿಕ್ಷಕರಿಗೆ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿಯನ್ನು ಉಚಿತವಾಗಿ ಮಾಡಲಾಗುತ್ತಿದೆ.
ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷ ಮತ್ತು ಮುಖ್ಯ ಮೂಳೆ ಶಸ್ತ್ರಚಿಕಿತ್ಸಕ ಶರಣ್ ಪಾಟೀಲ್ ಮಾತನಾಡಿ, ಅನೇಕ ನಿವೃತ್ತ ಶಿಕ್ಷಕರು ಕಡಿಮೆ ಸಂಭಾವನೆ ಪಡೆಯುತ್ತಾರೆ. ಅವರಿಗೆ ಈ ಸರ್ಜರಿ ಮಾಡಿಸಿಕೊಳ್ಳುವಷ್ಟು ಹಣ ಇರುವುದಿಲ್ಲ. ಈ ಕಾರಣದಿಂದಾಗಿ ತೀರ ಅನಿವಾರ್ಯವಿರುವ ನಿವೃತ್ತ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಗುರು ನಮನ ಕಾರ್ಯಕ್ರಮದಡಿ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿಯನ್ನು ಉಚಿತವಾಗಿ ಮಾಡಿಸಲಾಗುತ್ತದೆ. ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯ ಗೌರವ ಮತ್ತು ಆಚರಣೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಡಾ. ಶರಣ್ ಪಾಟೀಲ್ ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಶಿಕ್ಷಕರು ಬೀರಿರುವ ಆಳವಾದ ಪ್ರಭಾವವನ್ನು ಗುರುತಿಸಿ, ಸ್ಪರ್ಶ ಗುರು-ನಮನವು ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ಈ ಶ್ರೇಷ್ಠ ವೃತ್ತಿಗೆ ಕೃತಜ್ಞತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದೆ. ಅಸ್ಥಿಸಂಧಿವಾತ ಸಂಧಿವಾತದ ಅತ್ಯಂತ ಸಾಮಾನ್ಯ ವಿಧವಾಗಿದೆ ಮತ್ತು ಇದು ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳಲ್ಲಿ ದೀರ್ಘಕಾಲದ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಪ್ರಪಂಚದಾದ್ಯಂತದ ಅಂದಾಜಿನ ಪ್ರಕಾರ 60% ರಷ್ಟು 65 ವರ್ಷಕ್ಕಿಂತ ಮೇಲ್ಪಟ್ಟವರು ರೋಗಲಕ್ಷಣದ ಅಸ್ಥಿಸಂಧಿವಾತವನ್ನು ಹೊಂದಿದ್ದಾರೆ. ಭಾರತದಲ್ಲಿ 18 ಕೋಟಿಗೂ ಹೆಚ್ಚು ಜನರು ಅಸ್ಥಿಸಂಧಿವಾತದಿಂದ ಬಳಲುತ್ತಿದ್ದಾರೆ ಮತ್ತು ಭಾರತದಲ್ಲಿ ಪ್ರತಿ ವರ್ಷ 20% ರಷ್ಟು ಜಾಯಿಂಟ್ ರಿಪ್ಲೇಸ್ಮೆಂಟ್ ಹೆಚ್ಚುತ್ತಿದೆ ಎಂದು ಡಾ. ಶರಣ್ ಹೇಳಿದರು.