ಯಕ್ಷಗಾನ ಪುಸ್ತಕ ಬಹುಮಾನಕ್ಕೆ ಲೇಖಕರು / ಪ್ರಕಾಶಕರಿಂದ ಅರ್ಜಿ ಆಹ್ವಾನ

Vijayanagara Vani
ಯಕ್ಷಗಾನ ಪುಸ್ತಕ ಬಹುಮಾನಕ್ಕೆ ಲೇಖಕರು / ಪ್ರಕಾಶಕರಿಂದ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 02:-ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2022 ಹಾಗೂ 2023ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (2022ರ ಜುಲೈ 01 ರಿಂದ 2022ರ ಡಿಸೆಂಬರ್ 31 ಹಾಗೂ 2023ರ ಜನವರಿ 01 ರಿಂದ 2023ರ ಡಿಸೆಂಬರ್ 31ರ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ / ಪ್ರಕಾಶಕರಿಂದ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ಪುಸ್ತಕಕ್ಕೆ ರೂ.25,000/-ಗಳ ಬಹುಮಾನವನ್ನು ನೀಡಲಾಗುವುದು. ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹರ್ಯನ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಕೃತಿ ಅಥವಾ ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.
ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560 002, ಇವರಿಗೆ ಜುಲೈ 25 ರ ಒಳಗಾಗಿ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸುವುದು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿಯನ್ನು ಕಚೇರಿಯ ವೇಳೆಯಲ್ಲಿ ಅಕಾಡೆಮಿಯಿಂದ (ದೂ:080-22113146) ಪಡೆಯಬಹುದು ಹಾಗೂ ಅರ್ಜಿಗಳನ್ನು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!