ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಸಲಹೆ ಮಾದಕ ವಸ್ತುಗಳ ಬಗ್ಗೆ ಜಾಗೃತಿವಹಿಸಿ

Vijayanagara Vani
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಸಲಹೆ ಮಾದಕ ವಸ್ತುಗಳ ಬಗ್ಗೆ ಜಾಗೃತಿವಹಿಸಿ
ಚಿತ್ರದುರ್ಗ:
ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದವರು ಮನುಷ್ಯತ್ವ ಮರೆತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಮತ್ತು ಆತ್ಮಹತ್ಯೆ ಅಂತಹ ಕೃತ್ಯಗಳು ನಡೆಯುತ್ತವೆ ಇದರಿಂದ ಮಾದಕ ವಸ್ತುಗಳ ಬಗ್ಗೆ ಜಾಗೃತವಹಿಸಿ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಕಾರಾಗೃಹ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಜಾಗೃತಿ ಹಾಗೂ ಮಾನಸಿಕ ಆರೋಗ್ಯ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷವೂ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಆಚರಿಸಲಾಗುತ್ತದೆ. “ಸಾಕ್ಷವು ಸ್ಪಷ್ಟವಾಗಿದೆ ತಡೆಗಟ್ಟುವಲ್ಲಿ ಹೂಡಿಕೆ ಮಾಡಿ” ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ. ಮಾದಕ ವಸ್ತುಗಳಲ್ಲಿ ಗಾಂಜಾ, ಅಫೀಮ ಮೊದಲಾದವುಗಳು ಮಾತ್ರೆ, ಫೌಡರ್, ಇಂಜೆಕ್ಷನ್ ಹಲವಾರು ರೂಪಗಳಲ್ಲಿ ತೆಗೆದುಕೊಳ್ಳುತ್ತಾರೆ. ಮಾದಕ ವಸ್ತುಗಳನ್ನು ತೆಗೆದುಕೊಳ್ಳುವವರು ಮಾದಕ ವಸ್ತುಗಳ ವ್ಯಸನಿಗಳಾಗಿ ಮಾದಕ ವಸ್ತುಗಳ ದಾಸರಾಗುತ್ತಾರೆ. ಕೋಟ್ಯಾಂತರ ಯುವಕರು ವ್ಯಸನಕ್ಕೆ ಒಳಗಾಗಿ ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಇಲಾಖೆಗಳ ಸಹಕಾರದೊಂದಿಗೆ ವ್ಯಸನದಿಂದ ಮುಕ್ತವಾಗಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು. ವ್ಯಸನದಿಂದ ಮುಕ್ತರಾಗಲು ಮನೋಚೈತನ್ಯ ಶಿಬಿರಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್ ಅವರನ್ನು ಸಂಪರ್ಕಿಸಿ ಚಿಕಿತ್ಸೆ, ಸಲಹೆ ಮತ್ತು ಸಮಲೋಚನೆ ಪಡೆಯಬಹುದು ಹಾಗೂ ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ 14416 ಗೆ ಕರೆಮಾಡಿ ಸಲಹೆ ಸಮಾಲೋಚನೆ ಪಡೆಯಬೇಕು ಎಂದು ತಿಳಿಸಿದರು.
ಮನೋವೈದ್ಯ ಡಾ.ಆರ್.ಮಂಜುನಾಥ್ ಉಪನ್ಯಾಸ ನೀಡಿ, ಬಿಡಿ, ಸಿಗರೇಟ್ ಮತ್ತು ಮಾದಕ ವಸ್ತುಗಳ ಮೇಲೆ ಎಚ್ಚರಿಕೆ ಸಂದೇಶ ಇದ್ದರೂ ನಾವು ಅದನ್ನು ಉಪಯೋಗಿಸುತ್ತೇವೆ. ಯಾಕೆಂದರೆ ಆಹ್ಲಾದ ಅಥವಾ ಕಿಕ್ಗಾಗಿ ಸ್ವಲ್ಪದಿಂದ ಶುರು ಮಾಡಿ ಜಾಸ್ತಿ ಮಾದಕ ವಸ್ತುಗಳನ್ನು ತೆಗೆದುಕೊಂಡು ದಿನದಿನಕ್ಕೆ ನರಗಳ ಸವೆತದಿಂದ, ಪ್ರಜ್ಞಾಹೀನ ಸ್ಥಿತಿ ತಲುಪಿ ಸರಿ ತಪ್ಪುಗಳ ಅರಿವು ಇರುವುದಿಲ್ಲ ತಪ್ಪುಗಳ ನಡೆಯುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಮಾದಕ ವಸ್ತು ಅಥವಾ ದ್ರವ್ಯಗಳು ಕಾರಣವಾಗಿರುತ್ತವೆ. ವ್ಯಸನಿಯಾದಾಗ ಮನುಷ್ಯನು ನಿಯಂತ್ರಣದಲ್ಲಿರುವುದಿಲ್ಲ ವಿವೇಕ ಕಳೆದುಕೊಳ್ಳುತ್ತಾನೆ ಎಂದು ತಿಳಿಸಿದರು.
ಬೇಸಿಕ್ ಡ್ರಗ್ಸ್ ಬಿಡಿ, ಸಿಗರೇಟ್. ಇವುಗಳನ್ನು ಗೇಟ್ ವೇ ಡ್ರಗ್ಸ್ ಅಂತ ಕರೆಯುತ್ತೇವೆ. ವ್ಯಸನದಿಂದ ದೂರವಿದ್ದರೆ ಅಪರಾಧ ಕೃತ್ಯಗಳಿಂದ ದೂರವಿರಬಹುದು. ಮಾದಕ ವಸ್ತುಗಳಿಗೆ ವ್ಯಸನಿಗಳಾಗಬಾರದು. ಚಿಕಿತ್ಸೆಗಾಗಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗವನ್ನು ಸಂಪರ್ಕಿಸಿ ಸಲಹೆ ಸಮಾಲೋಚನೆ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಮಾತನಾಡಿ, ನಮ್ಮ ಕುಟುಂಬಗಳು ಸುಖವಾಗಿ ಇರಲು ಜೀವನದಲ್ಲಿ ನೀತಿ ನಿಯಮ ಅಳವಡಿಸಿಕೊಂಡು ಬಾಳಬೇಕು. ನಮ್ಮ ಮಟ್ಟಕ್ಕೆ ತಕ್ಕಂತೆ ಸತ್ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಮನುಷ್ಯನು ತನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಮನಸ್ಸು ಹಿಡಿತದಲ್ಲಿ ಇಲ್ಲದಿದ್ದರೆ ಮಾದಕ ವಸ್ತುಗಳಿಗೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತೇವೆ, ಇನ್ನೂ ಕೂಡ ಕಾಲ ಮಿಂಚಿಲ್ಲ ಇಂದಿನಿಂದಲೇ ದುಶ್ಚಟಗಳಿಂದ ದೂರವಾಗಿ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಮಹದೇವಿ ಎಂ ಮರಕಟ್ಟಿ ಮಾತನಾಡಿ, ಬಿಡಿ ಸಿಗರೇಟ್, ಮದ್ಯ, ಹೆಂಡ ಇವುಗಳನ್ನು ದುಶ್ಚಟಗಳಿಗೆ ಬಳಸುವುದಕ್ಕೆ ಮಾದಕ ವಸ್ತುಗಳೆಂದು ಕರೆಯುತ್ತೇವೆ. ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಒಳಗಾಗಿ ಅದರ ದುಷ್ಪರಿಣಾಮದಿಂದ ತಪ್ಪುಗಳು ನಡೆದು ಹೋಗುತ್ತವೆ. ಈ ವರ್ಷದ ಘೋಷವಾಕ್ಯದಂತೆ ಸಾಕ್ಷ್ಯಗಳು ಸ್ಪಷ್ಟವಾಗಿವೆ ತಡೆಗಟ್ಟುವಲ್ಲಿ ತೊಡಗಿಸಿಕೊಳ್ಳಿ ಎಂಬಂತೆ ಮನ ಪರಿವರ್ತನೆಯಿಂದ ಬಹಳಷ್ಟು ಜನ ವ್ಯಸನದಿಂದ ಮುಕ್ತರಾಗಿದ್ದಾರೆ. ನೀವು ಮಾದಕ ವಸ್ತುಗಳನ್ನು ತಿಂದರೆ ಮಾದಕ ವಸ್ತುಗಳು ನಿಮ್ಮನ್ನು ತಿನ್ನುತ್ತವೆ. ಯೋಗ ಮತ್ತು ಪಾಣಾಯಾಮದ ಮೂಲಕ ವ್ಯಸನ ಮುಕ್ತರಾಗಬಹುದು. ಅಪರಾಧ ಕೃತ್ಯಗಳಿಂದ ದೂರ ಉಳಿಯಬಹುದು. ಸಮಾಜದಲ್ಲಿ ಸತ್ಪ್ರಜೆಯಾಗಿ ಕುಟುಂಬಕ್ಕೆ ಆದರ್ಶ ವ್ಯಕ್ತಿಯಾಗಿ ದುರಾಭ್ಯಾಸ ಚಟಗಳಿಂದ ದೂರ ಉಳಿಯಬೇಕು ಎಂದು ಪ್ರತಿಜ್ಞಾವಿಧಿಯನ್ನು ಕಾರಾಗೃಹ ನಿವಾಸಿಗಳಿಗೆ ಬೋಧಿಸಿದರು.
ಈ ಸಂದರ್ಭದಲ್ಲಿ ಕಾರಾಗೃಹ ಶಿಕ್ಷಕ ಆರ್.ಎ.ಶ್ರೀರಾಮರೆಡ್ಡಿ, ಸಹಾಯಕ ಜೈಲರ್ ರಾಮಣ್ ಕೆ.ಹೆರ್ಕಲ್, ಹೆಚ್ಐಒ ವೈ.ತಿಪ್ಪೇಶ್, ಕ್ಲಿನಿಕಲ್ ಸೈಕಲಾಜಿಸ್ಟ್ ಟಿ.ಶ್ರೀಧರ, ಸೋಶಿಯಲ್ ವರ್ಕರ್ ಎನ್.ಸುನೀತಾ, ಶುಶ್ರೂಷಕಾಧಿಕಾರಿ ಕೆ.ಎಂ.ರಶ್ಮಿ, ಕಾರಾಗೃಹ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಕಾರಾಗೃಹ ನಿವಾಸಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article
error: Content is protected !!