ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕ ಸಹಕಾರ ಅತ್ಯಗತ್ಯ

Vijayanagara Vani
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕ ಸಹಕಾರ ಅತ್ಯಗತ್ಯ
ಚಿತ್ರದುರ್ಗಜುಲೈ19:
ಸೊಳ್ಳಗಳ ಉತ್ಪತ್ತಿ ತಾಣಗಳ ನಾಶ ಮಾಡಲು ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಸಜ್ಜನಕೆರೆ ಗ್ರಾಮದಲ್ಲಿ ಮೂರು ಡೆಂಗ್ಯೂ ಪ್ರಕರಣಗಳು ಕಂಡು ಬಂದ ಪ್ರಯುಕ್ತ ಹಾಟ್ಸ್ಪಾಟ್ ಎಂದು ಗುರುತಿಸಿ, ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಜ್ವರ ಚಿಕಿತ್ಸಾ ಕೇಂದ್ರ ತೆರೆದು, ಮನೆ ಮನೆ ಭೇಟಿ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಲಾರ್ವಾ ಸಮೀಕ್ಷೆ ಕಾರ್ಯ ನಡೆಸಿ, ದೇವಸ್ಥಾನದ ಆವರಣದಲ್ಲಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡೆಂಗ್ಯೂ ಈಡೀಸ್ ಈಜಿಪ್ಟೈ ಎನ್ನುವ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುವ ರೋಗವಾಗಿದೆ. ಮುಂಗಾರು ಮಳೆ ಕಾರಣ ಮನೆಯ ಮುಂದೆ ಹಿಂದೆ ಅನುಪಯುಕ್ತ ವಸ್ತುಗಳಾದ ತೆಂಗಿನಕಾಯಿ ಚಿಪ್ಪು, ಎಳನೀರ ಬುರುಡೆ, ಪ್ಲಾಸ್ಟಿಕ್ ಕಪ್, ಒಡೆದ ಮಡಕೆ, ಹಂಚು ಟೈರ್ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾಗಿವೆ. ಇವುಗಳ ಸೂಕ್ತ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಮನೆ ಮನೆ ಸಮೀಕ್ಷೆಯಲ್ಲಿ ಲಾರ್ವಾ ಸಾಂದ್ರತೆ 100ಕ್ಕೆ 7 ಮನೆಗಳಲ್ಲಿ ಲಾರ್ವಾ ಕಂಡು ಬಂದಿದೆ. ಹಾಗಾಗಿ ಸಾರ್ವಜನಿಕರು ಸರ್ಕಾರದ ಮಾರ್ಗದರ್ಶನದಂತೆ ಪ್ರತಿ ಶುಕ್ರವಾರ ಒಣದಿನ ಆಚರಿಸಿ. ಅಂದರೆ ನಿಮ್ಮ ನಿಮ್ಮ ಮನೆಯ ನೀರು ಸಂಗ್ರಹಿಸುವ ಪರಿಕರಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಿ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯೆ ಶಕುಂತಲಮ್ಮ ಮಾತನಾಡಿ, ಎಲ್ಲರೂ ಒಟ್ಟಾಗಿ ಪರಿಸರ ಸ್ವಚ್ಛತೆ ಕಾಪಾಡೋಣ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ, ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿ. ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಜ್ವರ ಚಿಕಿತ್ಸಾ ಕೇಂದ್ರಕ್ಕೆ ಕರೆ ತನ್ನಿ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಭಾಗೇಶ್, ಮಾರುತಿ, ಸಮುದಾಯ ಆರೋಗ್ಯಾಧಿಕಾರಿ ರಮೇಶ್, ಮುಖ್ಯಶಿಕ್ಷಕ ವೆಂಕಟೇಶ್, ಸಹ ಶಿಕ್ಷಕರಾದ ಸತೀಶಪ್ಪ, ರವಿ, ಲಕ್ಷ್ಮೀ, ನಿರ್ಮಲಮ್ಮ, ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article
error: Content is protected !!