Ad image

ಮದರಸಗಳಿಗೆ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣಕ್ಕೆ ಅನುದಾನ ಪಡೆಯಲು ಪ್ರಸ್ತಾವನೆ ಆಹ್ವಾನ

Vijayanagara Vani
ಮದರಸಗಳಿಗೆ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣಕ್ಕೆ ಅನುದಾನ ಪಡೆಯಲು ಪ್ರಸ್ತಾವನೆ ಆಹ್ವಾನ
ಶಿವಮೊಗ್ಗ, ಜುಲೈ 24; : 2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯು ರಾಜ್ಯದಲ್ಲಿ ನಡೆಸಲಾಗುತ್ತಿರುವ ಮುಸ್ಲಿಂ ಸಮುದಾಯದ ನೊಂದಾಯಿತ ಮದರಸಗಳ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 2 ಮದರಸಗಳನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾ ಅಧಿಕಾರಿಗಳ ಅನುಮೋದನೆಯೊಂದಿಗೆ ಅಯ್ಕೆ ಮಾಡಲಾಗುತ್ತಿದ್ದು, ಅರ್ಹ ಮದರಸಗಳಿಂದ ಪ್ರಸ್ತಾವನೆ ಆಹ್ವಾನಿಸಿದೆ.
ಸ್ವಂತ ಕಟ್ಟಡವನ್ನು ಹೊಂದಿರುವ ವಕ್ಫ್ ಮದರಸದಲ್ಲಿ ಕನಿಷ್ಠ 10 ಮಕ್ಕಳ ದಾಖಲಾತಿ ಸಂಖ್ಯೆಯಿರಬೇಕು. ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಹಾಗೂ ಮೂಲಭೂತ ಸೌಕರ್ಯಗಳ ಅತಿ ಅಗತ್ಯವಿರುವ ಮದರಸಗಳನ್ನು ಆಯ್ಕೆ ಮಾಡಲಾಗುವುದು. ಈಗಾಗಲೇ ಇದೇ ಉದ್ದೇಶಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ ಪಡೆದ ಮದರಸಗಳನ್ನು ಪರಿಗಣಿಸುವುದಿಲ್ಲ. ಅರ್ಹ ಮದರಸಗಳಿಗೆ ಒಂದು ಬಾರಿಗೆ ಗರಿಷ್ಠ ರೂ. 5.00 ಲಕ್ಷಗಳ ಅನುದಾನ ಮಂಜೂರು ಮಾಡಲಾಗುವುದು.
ಆಸಕ್ತ ಮದರಸ ಸಂಸ್ಥೆಗಳು ಅರ್ಜಿ ನಮೂನೆಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜುಲೈ 30ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220206 ನ್ನು ಸಂಪರ್ಕಿಸುವುದು.

Share This Article
error: Content is protected !!
";