ತೆರೆದ ಪರಿಕರಗಳಲ್ಲಿ ನೀರು ಸಂಗ್ರಹಿಸಿಬೇಡಿ -ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗೀರೀಶ್

Vijayanagara Vani
ತೆರೆದ ಪರಿಕರಗಳಲ್ಲಿ ನೀರು ಸಂಗ್ರಹಿಸಿಬೇಡಿ -ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗೀರೀಶ್
ಚಿತ್ರದುರ್ಗಜುಲೈ29:
ತೆರೆದ ಪರಿಕರಗಳಲ್ಲಿ ನೀರು ಸಂಗ್ರಹಿಸಬೇಡಿ. ಸೊಳ್ಳೆಗಳ ತಾಣವಾಗದಂತೆ ಕ್ರಮವಹಿಸುವ ಮೂಲಕ ಡೆಂಗ್ಯೂ ನಿಯಂತ್ರಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗೀರೀಶ್ ಹೇಳಿದರು.
ಚಿತ್ರದುರ್ಗ ನಗರದ ಎಲ್ಲಾ ವಾರ್ಡ್ಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ವಿಶೇಷ ಲಾರ್ವಾ ಸಮೀಕ್ಷೆ ನಡೆಯುತ್ತಿದ್ದು, ಸೋಮವಾರ ತಾಲ್ಲೂಕು ಆರೋಗ್ಯಾಧಿಕಾರಿ ತಂಡ ಮೇಲ್ವಿಚಾರಣಾ ನಡೆಸಿ, ಭೋವಿ ಕಾಲೋನಿ, ಚನ್ನಕ್ಕಿ ಹೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ ಸೊಳ್ಳೆಗಳ ತಾಣ ನಾಶಪಡಿಸಿ, ನಂತರ ಅವರು ಮಾತನಾಡಿದರು.
ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತವೆ. ನಿಮ್ಮ ಕುಟುಂಬಕ್ಕೆ ಬಾಧೆ ಕೊಡುವುದರೊಂದಿಗೆ ಅಕ್ಕ ಪಕ್ಕದ ಕುಟುಂಬಗಳಿಗೆ ತೊಂದರೆ ಉಂಟಗುತ್ತದೆ. ಡೆಂಗ್ಯೂ ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಪರಿಸರ ಸ್ವಚ್ಛತೆ ಕಾಪಾಡೋಣ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಡೆಂಗ್ಯೂ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು. ಸ್ವಚ್ಛತೆ ಕಾಪಾಡಿ. ಸೊಳ್ಳೆಗಳ ಉತ್ಪತ್ತಿ ತಾಣನಾಶ ಮಾಡದಿದ್ದರೆ ಕೀಟಗಳು ನಮನ್ನಾಳುತ್ತವೆ. ಜಾಗೃತರಾಗಿ, ಬುದ್ದಿವಂತರಾಗಿ ಮನೆ ಒಳಗೆ ಹೊರಗೆ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೀರು ಸಂಗ್ರಹಿಸುವ ಪರಿಕರಗಳನ್ನು ವಾರಕೊಮ್ಮೆಯಾದರೂ ಚನ್ನಾಗಿ ತಿಕ್ಕಿ ತಿಕ್ಕಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಎಂದರು.
ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ, 1 ಭಾಗ ಬೇವಿನ ಎಣ್ಣೆ, 3 ಭಾಗ ಕೊಬ್ಬರಿ ಎಣ್ಣೆ ಈ ಪ್ರಮಾಣದಲ್ಲಿ ಮಿಶ್ರಣ ಮಾಡಿ ಲೇಪನ ಮಾಡಿಕೊಳ್ಳಿ. ಸೊಳ್ಳೆ ಪರದೆ ಬಳಕೆ ಮಾಡಿ ಮುಸ್ಸಂಜೆ, ಮುಂಜಾವಿನ ಸಮಯದಲ್ಲಿ ಸೊಳ್ಳೆ ಬತ್ತಿ, ಬೇವಿನ ಸೊಪ್ಪಿನ ಹೊಗೆಯ ಧೂಪವನ್ನು ಬೆಳಗಿಸಿ. ಯಾವುದೇ ಜ್ವರವಿರಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ತಪಾಸಣೆ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ತೆರೆದು ಸಂಗ್ರಹಿಸಿದ, ಲಾರ್ವಾ ಕಂಡು ಬಂದ 20 ಟಬ್‌ಗಳ ನೀರು ಚಲ್ಲಿಸಿ, ಅಬೇಟ್ ದ್ರಾವಣ ಹಾಕಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕರ್ ನಾಯ್ಕ್, ಆಶಾ ಕಾರ್ಯಕರ್ತೆ ಶೋಭ, ನಾಗರೀಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!