ರಾಜ್ಯದ ಸರ್ಕಾರಿ ಶಾಲೆಗಳಿಗೆ ಮುಂದಿನ ಒಂದು ವರ್ಷದ ಅವಧಿ ಒಳಗಾಗಿ ಒಂದು ಸಾವಿರ ಕೋಟಿ ಆರ್ಥಿಕ ನೆರವು ಸಮುದಾಯದಿಂದ ಬರುವ ನಿರೀಕ್ಷೆ : ಸಚಿವ ಮಧು ಎಸ್ ಬಂಗಾರಪ್ಪ

Vijayanagara Vani
ರಾಜ್ಯದ ಸರ್ಕಾರಿ ಶಾಲೆಗಳಿಗೆ ಮುಂದಿನ ಒಂದು ವರ್ಷದ ಅವಧಿ ಒಳಗಾಗಿ ಒಂದು ಸಾವಿರ ಕೋಟಿ ಆರ್ಥಿಕ ನೆರವು ಸಮುದಾಯದಿಂದ ಬರುವ ನಿರೀಕ್ಷೆ : ಸಚಿವ ಮಧು ಎಸ್ ಬಂಗಾರಪ್ಪ
ಶಿವಮೊಗ್ಗ, ಆಗಸ್ಟ್ 16 ವರ್ಷದ ಅವಧಿ ಒಳಗಾಗಿ ಸಮುದಾಯದಿಂದ ಒಂದು ಸಾವಿರ ಕೋಟಿ ಆರ್ಥಿಕ ನೆರವು ಒದಗಿ ಬರುವ ನಿರೀಕ್ಷೆ ಇದೆ ಎಂದು ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಸೊರಬ ತಾಲ್ಲೂಕು ಕುಬಟೂರಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹತ್ತು ಲಕ್ಷ ರೂಪಾಯಿಗಳ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ ನಂತರ ಏರ್ಪಡಿಸಲಾಗಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಎಲ್ಲಾ ರೀತಿಯ ಅಗತ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೆಸೆಯಲ್ಲಿ ಸುಮಾರು 10 ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ನೀಡಿ ತಾವು ಓದಿದ ಶಾಲೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ವತಹ ತಾವುಗಳು ಕೂಡ ಅವರ ಹಾದಿಯಲ್ಲಿಯೇ ಮುನ್ನಡೆದು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್ ಬಂಗಾರಪ್ಪನವರು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶಾಲೆಯ ಸರ್ವಾಂಗಿಣ ವಿಕಾಸಕ್ಕೆ ತಾವು ಬದ್ಧರಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸುಮಾರು 46000 ಸರ್ಕಾರಿ ಶಾಲೆಗಳಿದ್ದು, ಆ ಎಲ್ಲಾ ಶಾಲೆಗಳನ್ನು ಸರ್ಕಾರದ ಅನುದಾನದಿಂದಲೇ ಅಭಿವೃದ್ಧಿಪಡಿಸಲು ಸಾಧ್ಯವಾಗದು. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದು, ಉತ್ತಮ ಜೀವನ ನಿರ್ವಹಣೆ ಮಾಡುತ್ತಿರುವ ಅನೇಕ ಜನರು ತಾವು ಓದಿದ ಹಾಗೂ ಇಂದು ತಮ್ಮ ಮಕ್ಕಳು ಮತ್ತು ತಮ್ಮ ಊರಿನ ಮಕ್ಕಳು ಓದುತ್ತಿರುವ ಶಾಲೆಗೆ ಋಣ ತೀರಿಸುವ ಭಾಗವಾಗಿ ಯಾವುದೇ ವಿಧದಲ್ಲಾದರೂ ನೆರವಾಗುವಂತೆ ಹಾಗೂ ಅಲ್ಲಿನ ಮಕ್ಕಳು ಜಗವಿಖ್ಯಾತರಾಗುವಂತೆ ಶ್ರಮಿಸಲು ಮನವಿ ಮಾಡಿದರು.
ಹಲವು ದಶಕಗಳ ಹಿಂದಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಹಾಗೂ ಅವುಗಳ ಭೌತಿಕ ಸ್ವರೂಪ ಸಮಗ್ರವಾಗಿ ಬದಲಾವಣೆಗೊಂಡಿದೆ. ಪ್ರತಿಭಾವಂತ ಶಿಕ್ಷಕರುಗಳ ನೇಮಕವಾಗಿದೆ. ಮಧ್ಯಾಹ್ನದ ಬಿಸಿ ಊಟ, ಪೌಷ್ಟಿಕ ಆಹಾರ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಸಮವಸ್ತ್ರ ಮತ್ತು ಪಠ್ಯಪುಸ್ತಕ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಾವಂತ ಶಿಕ್ಷಕರೇ ಹೊಂದಿರುವ ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುವAತೆ ಮನವಿ ಮಾಡಿದ ಅವರು, ಸರ್ಕಾರಿ ಶಾಲೆಯ ಸೊಗಡು ಮತ್ತು ಮಹತ್ವವನ್ನು ಅರಿಯುವಂತೆ ಅವರು ಮನವಿ ಮಾಡಿದರು.
ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 1700 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸುಮಾರು 38,000 ವಿದ್ಯಾರ್ಥಿಗಳು ದಾಖಲಾಗಿರುವುದು ವಿಶೇಷ ಎನಿಸಿದೆ ಎಂದವರು ನುಡಿದರು.
ರಾಜ್ಯದ 46,000 ಶಾಲೆಗಳಿಗೆ ಸರ್ಕಾರ ಪ್ರತಿ ವರ್ಷ 44,000 ಕೋಟಿ ರೂಪಾಯಿಗಳ ಹಣ ವೆಚ್ಚ ಮಾಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಸುಮಾರು 56 ಲಕ್ಷ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ ನೆರಕೇರ, ಶ್ರೀಮತಿ ಅನಿತಾ ಮಧು ಬಂಗಾರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ. ಡಿ. ಶೇಖರ್ ನಾಗರಾಜ್ ಗೌಡ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!