Ad image

ಪೋಲಿಸ್ ಹುತಾತ್ಮ ದಿನಚಾರಣೆ.. ಹುತಾತ್ಮರಿಗೆ ನಮ್ಮ ನಮನ..

Vijayanagara Vani
ಪೋಲಿಸ್ ಹುತಾತ್ಮ ದಿನಚಾರಣೆ.. ಹುತಾತ್ಮರಿಗೆ ನಮ್ಮ ನಮನ..

ಪೋಲಿಸ್ ಅಂದರೆ ನಂಬಿಕೆ ವಿಶ್ವಾಸ್ ದೈರ್ಯ ಸಾರ್ವಜನಿಕ ಜಿವನದಲ್ಲಿ ಅವರದ್ದೆ ಆದ ಗೌರವ … ಪ್ರತಿನಿತ್ಯ ಯಾರಿಗೆನೆಆದರು ಪ್ರತಿಯೊಬ್ಬರಿಗು ತಟ್ಟನೆ ನೆನಪು ಬರೊದೆ ಪೋಲಿಸ್,
ಪೊಲೀಸ್ ಹುತಾತ್ಮ ದಿನಾಚರಣೆ (ಅಕ್ಟೋಬರ್ 21)
ಅದೊಂದು ದೊಡ್ಡ ರಾಜಕೀಯ ಕಾರ್ಯಕ್ರಮ. ಅಲ್ಲಿ ಬಂದೋಬಸ್ತಿಗಾಗಿ ಬಂದಿರುವ ನೂರಾರು ಸಾವಿರಾರು ಪೊಲೀಸರು ಮಂತ್ರಿ ಮಹೊದಯರಿಗೆ ಎಸ್ಕಾರ್ಟ್ ಆಗಿ, ಜನರನ್ನು ನಿಯಂತ್ರಿಸಲು, ವಾಹನಗಳನ್ನು ಒಂದೆಡೆ ನಿಲ್ಲಿಸಲು, ಯಾವುದೇ ಅವಘಡಗಳಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ದರಾಗಿ ನಿಂತಿರುತ್ತಾರೆ. ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದರೆ ಪೊಲೀಸ್ ಇಲಾಖೆಯವರು ಆರು ಗಂಟೆಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ ತಿಂಡಿ ತಿಂದು ಸ್ಥಳಕ್ಕೆ ಬಂದೋಬಸ್ತಿಗಾಗಿ ಬಂದು ನಿಂತರೆ ಕಾರ್ಯಕ್ರಮ ಮುಗಿದು ಅತಿಥಿಗಳೆಲ್ಲ ತಮ್ಮ ಮನೆ ಸೇರಿದರೂ ಇವರ ಡ್ಯೂಟಿ ಮುಗಿದಿರುವುದಿಲ್ಲ. ಬಂದೋಬಸ್ತಿನ ಗಡಿಬಿಡಿಯಲ್ಲಿ ಎಷ್ಟೋ ಬಾರಿ ಊಟ ತಿಂಡಿಗಳ ಕಡೆ ಇವರ ಗಮನ ಹರಿಯೊದೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇವರ ನಿಸರ್ಗ ಕರೆಗಳಿಗೆ ಯಾವುದೇ ರೀತಿಯಾದ ವ್ಯವಸ್ಥೆಗಳು ಇರುವುದಿಲ್ಲ.

ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಹರತಾಳ, ಗಲಾಟೆ, ಹಿಂಸಾಚಾರ, ದೊಂಬಿಯಂತಹ
ಘಟನೆಗಳು ಜರುಗಿದರೂ ಅಲ್ಲಿ ಇವರ ಹಾಜರಿ ಅತ್ಯವಶ್ಯಕ. ಆತ್ಮಹತ್ಯೆಗಳು, ಸಂಶಯಾಸ್ಪದ ಸಾವುಗಳು, ಆಕಸ್ಮಿಕ ಅಪಘಾತಗಳು, ಕೊಲೆ ಸುಲಿಗೆ, ಕಳ್ಳತನ, ದರೋಡೆ ದೊಂಬಿಗಳು ನಡೆದರೂ
ಇವರು ಸ್ಥಳದಲ್ಲಿ ಹಾಜರಾಗಲೇಬೇಕು. ಗೊತ್ತಿರಲಿ ಪೊಲೀಸ್ ಕಾರ್ಯಪಡೆ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧಿಗಳನ್ನು ಸೆರೆ ಹಿಡಿಯುವಲ್ಲಿ, ನೈಸರ್ಗಿಕ ದುರಂತ ಆಕಸ್ಮಿಕ ಅಪಘಾತಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಹರ್ನಿಶಿ ಪ್ರಯತ್ನಿಸುತ್ತದೆ. ರೌಡಿಗಳನ್ನು ಮಟ್ಟ ಹಾಕಲು, ಕಳ್ಳ ಕಾಕರನ್ನು ಹಿಡಿಯುವ, ಕಳ್ಳ ಸಾಗಾಣಿಕದಾರರನ್ನು ತಡೆಯುವ ಸಂದರ್ಭಗಳಲ್ಲಿ ಎಷ್ಟೋ ಬಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಾಗ ಅವರು ಹತ್ಯೆಗೊಳಗಾಗಬಹುದು, ಮರಣಕ್ಕೀಡಾಗಬಹುದು.
ಪೊಲೀಸರ ಇಂತಹ ತ್ಯಾಗ ಮತ್ತು ಬಲಿದಾನಗಳ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಹಿನ್ನೆಲೆ :1959ರ ಅಕ್ಟೋಬರ್ 21ರ ದಿನ ಲಡಾಖ್ ನ ಹಾಟ್ ಸ್ಪ್ರಿಂಗ್ ನಲ್ಲಿ ಬಲವಾದ ಶಸ್ತ್ರಗಳನ್ನು ಹೊಂದಿದ ಚೀನಿ ಪಡೆಯು ಪೊಲೀಸರ ಮೇಲೆ ಅನಿರೀಕ್ಷಿತ ದಾಳಿಯನ್ನು ಮಾಡಿದಾಗ ಉಂಟಾದ ಘರ್ಷಣೆಯಲ್ಲಿ ಸುಮಾರು 10 ಜನ ಪೊಲೀಸ್ ಸಿಬ್ಬಂದಿಗಳು ಹುತಾತ್ಮರಾದರು.. ಈ ದಿನದ ಸ್ಮರಣಾರ್ಥವಾಗಿ ಮತ್ತು ಪೊಲೀಸ ಸಿಬ್ಬಂದಿಗಳ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ ಪ್ರತಿ ವರ್ಷ ಅಕ್ಟೋಬರ್ 21ರ ದಿನವನ್ನು ‘ಪೊಲೀಸ್ ಹುತಾತ್ಮ ದಿನಾಚರಣೆ’ ಎಂದು ಆಚರಿಸಲಾರಭಿಸಿದರು.

2018 ರಲ್ಲಿ ನವದೆಹಲಿಯ ಚಾಣಕ್ಯಪುರಿಯಲ್ಲಿ ನಿರ್ಮಿಸಿದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.
ದೇಶದ ಆರಕ್ಷಕ ಪಡೆಗಳಿಗೆ ಈ ರಾಷ್ಟ್ರೀಯ ಗುರುತನ್ನು,ಹೆಮ್ಮೆಯ ಉದ್ದೇಶದ ಏಕತೆ, ಸಾಮಾನ್ಯ ಇತಿಹಾಸ ಮತ್ತು ಹಣೆಬರಹವನ್ನು ನೀಡುವ ಪೊಲೀಸ್ ಸ್ಮಾರಕವು ಜೀವದ ಹಂಗನ್ನು ತೊರೆದು ರಾಷ್ಟ್ರವನ್ನು ಸಂರಕ್ಷಿಸುವ ಅವರ ಬದ್ಧತೆಯನ್ನು ಬಲಪಡಿಸುತ್ತದೆ
ಸ್ಮಾರಕದಲ್ಲಿ ಕೇಂದ್ರ ಶಿಲ್ಪವು ಸುಮಾರು 30 ಅಡಿ ಎತ್ತರದ ಗ್ರನೈಟ್ ಏಕಶಿಲೆಯ ಸಮಾಧಿಯಾಗಿದ್ದು ಪೊಲೀಸ್ ಸಿಬ್ಬಂದಿಯ ಶಕ್ತಿ, ಸ್ಥಿತಿ ಸ್ಥಾಪಕತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತದೆ. ಈ ಶೌರ್ಯದ ಗೂಡುಗಳಲ್ಲಿ ಹುತಾತ್ಮರಾದ ಆರಕ್ಷಕ ಸಿಬ್ಬಂದಿಗಳ ಹೆಸರುಗಳನ್ನು ಕೆತ್ತಲಾಗಿದೆ. ವಸ್ತು ಸಂಗ್ರಹಾಲಯದಲ್ಲಿ ಯುದ್ಧದ ಸ್ಮಾರಕಗಳು ಇದ್ದು ಭಾರತದಲ್ಲಿ ಆರಕ್ಷಕ ಪಡೆಯು ಕಾರ್ಯ ನಿರ್ವಹಿಸುತ್ತಿರುವ ದಿನಗಳಿಂದ ಹಿಡಿದು ಇಂದಿನವರೆಗಿನ ಐತಿಹಾಸಿಕ ಮಹತ್ವಪೂರ್ಣ ವಿಷಯಗಳನ್ನು ಕಾಯ್ದಿರಿಸಲಾಗಿದೆ. ಈ ಪೊಲೀಸ್ ಐತಿಹಾಸಿಕ ಸ್ಮಾರಕವು ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಸೂರ್ಯಾಸ್ತದ ಒಂದು ಗಂಟೆ ಮೊದಲು ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿ.ಎ.ಪಿ.ಎಫ್) ಗಳು ಬ್ಯಾಂಡ್ ಪ್ರದರ್ಶನ, ಮೆರವಣಿಗೆ ಮತ್ತು ವೈರಿಗಳನ್ನು ಹಿಮ್ಮೆಟ್ಟುವಿಕೆಯ ಪ್ರಾತ್ಯಕ್ಷಿಕೆಯನ್ನು ಆಯೋಜಿಸುತ್ತಿದೆ.

ಪ್ರತಿ ವರ್ಷವೂ ಪೊಲೀಸ್ ಸ್ಮಾರಕ ಭವನದಲ್ಲಿ ಕೇಂದ್ರದ ಗ್ರಹ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ನಡೆಸಿ ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ರಾಜ್ಯ ಸಚಿವರು ಮತ್ತು ಕೇಂದ್ರ ಸಚಿವರು ಹುತಾತ್ಮರಿಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಗೌರವ ನಮನ ಸಲ್ಲಿಸುತ್ತಾರೆ ಕೇಂದ್ರ ಗೃಹ ಸಚಿವರು ಸಮಾರಂಭವನ್ನು ಉದ್ದೇಶಿಸಿ ಹುತಾತ್ಮರನ್ನು ಸ್ಮರಿಸುವ ಜೊತೆಗೆ ಆರಕ್ಷಕ ಪಡೆಗಳು ಎದುರಿಸುವ ನಿಜವಾದ ಸವಾಲುಗಳನ್ನು ವಿವರಿಸುತ್ತಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಹುದ್ದೆಗಳ ಅಧಿಕಾರಿಗಳು ಹಾಜರಾಗಿ ಹಾಟ್ ಸ್ಪ್ರಿಂಗ್ನ ಮೂಲ ಶಿಲಾಫಲಕಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ. ಅಕ್ಟೋಬರ್ 22 ರಿಂದ 30ರವರೆಗೆ ಪೊಲೀಸ್ ಹುತಾತ್ಮ ಕುಟುಂಬ ಸದಸ್ಯರ ಭೇಟಿ ಪೊಲೀಸ್ ಬ್ಯಾಂಡ್ ಪ್ರದರ್ಶನ ಮೋಟಾರ್ ಸೈಕಲ್ ಪಥಸಂಚಲನಗಳು ಇಲ್ಲಿ ನಡೆಯುತ್ತವೆ.

ಇನ್ನು ದೇಶದ ಪ್ರತಿ ಜಿಲ್ಲೆಗಳ ಕ್ರೀಡಾಂಗಣಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳು, ಆಟೋಟಗಳು ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ ಪೊಲೀಸ್ ಸಿಬ್ಬಂದಿಯ ಶೌರ್ಯ, ತ್ಯಾಗ ಮತ್ತು ಬಲಿದಾನಗಳ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅತ್ಯಮೋಘ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳನ್ನು ಗೌರವಿಸಲಾಗುತ್ತದೆ.

ನಮ್ಮ ದೇಶದ ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗಗಳ ಜೊತೆ ಜೊತೆಗೆ ಕಾರ್ಯನಿರ್ವಹಿಸುವ ಪೊಲೀಸ್ ವ್ಯವಸ್ಥೆಯು ಭಾರತ ದೇಶದ ಸಮಗ್ರ ರಕ್ಷಣೆಗೆ ಕಂಕಣಬದ್ದವಾಗಿ ನಿಂತಿದ್ದು, ತಾಯಿ ಭಾರತಿಯ ಸೇವೆಯಲ್ಲಿ ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ.

ಆದರೆ ಪೊಲೀಸರು ಎದುರಿಸುತ್ತಿರುವ ಮನೋದೈಹಿಕ ಸಮಸ್ಯೆಗಳು ಹಲವು. ಆನಿಯಮಿತ ಕೆಲಸದ ಅವಧಿ, ನಿಗದಿತವಲ್ಲದ ಊಟೋಪಚಾರ, ಅತ್ಯಂತ ಕಡಿಮೆ ರಜೆಗಳು ಅವರಿಗೆ ಕುಟುಂಬದೊಂದಿಗೆ ಒಡನಾಡಲು ಸಾಧ್ಯವಿಲ್ಲದಷ್ಟು
ಕೆಲಸದ ಒತ್ತಡದಿಂದಾಗಿ ಬಹಳಷ್ಟು ಬಾರಿ ಪೊಲೀಸರು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿಯುತ್ತಾರೆ. ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಇನ್ನು ಮಹಿಳಾ ಸಿಬ್ಬಂದಿಗಳ ಪರಿಸ್ಥಿತಿ ಮತ್ತಷ್ಟು ಗಂಭೀರ. ಕರ್ತವ್ಯದ ಸಮಯದಲ್ಲಿ ಸ್ತ್ರೀ ಸಹಜವಾದ ಋತುಸ್ರಾವಗಳು, ಗರ್ಬಾವ್ಯಸ್ಥೆ ಬಾಣಂತನಗಳ ಸಮಯದಲ್ಲಿನ ಸೂಕ್ಷ್ಮ ದೈಹಿಕ ಅವಸ್ಥೆಗಳು ಅವರನ್ನು ಇನ್ನಿಲ್ಲದಂತೆ ಕಂಗೆಡಿಸುತ್ತವೆ. ಕರ್ತವ್ಯದ ಕರೆಯ ಮೇರೆಗೆ ಬಂದೋಬಸ್ತಗಾಗಿ ವಿವಿಧೆಡೆ ತೆರಳುವ ಮಹಿಳೆಯರಿಗೆ ಶೌಚಾಲಯಗಳು ಇಲ್ಲದೆ ಇರುವುದು, ವಿಶ್ರಾಂತಿ ಕೋಣೆಗಳು ಇಲ್ಲದೆ ಇರುವುದು ಸಮಸ್ಯೆಯ ಗಂಭೀರತೆಯನ್ನು ಸೂಚಿಸಿದರೆ ಅವರಿಗೆ ಊಟ ತಿಂಡಿಯ ವ್ಯವಸ್ಥೆ ಇಲ್ಲದಿರುವುದು ಅವರ ಕುರಿತಾದ ಅಸಡ್ಡೆಯನ್ನು ತೋರುತ್ತದೆ.

ನಮ್ಮೆಲ್ಲರ ಒಳಿತಿಗಾಗಿ ತಮ್ಮಕುಟುಂಬದವರಿಗು ಸಮಯಕೊಡದೆ ಸಾರ್ವಜನಿಕರಿಗಾಗಿಯೆ ತಮ್ಮ ಬದುಕಿನ ಬಹುಪಾಲು ಸಮಯವನ್ನು ಕಳೆಯುವ ಪೊಲೀಸ್ ಸಿಬ್ಬಂದಿಗಳನ್ನು ವಿನಾಕಾರಣ ಆಡಿಕೊಳ್ಳುವ ಜನರಿಗೆ ಅವರ ಅಂತರ್ಯದ ನೋವು ಅರಿವಾಗದು. ಅವರ ಮೇಲೆ ಕರುಣೆ ತೋರದಿದ್ದರೆ ಬೇಡ ಸಹಾನುಭೂತಿ ಇರಲಿ.
ಪರ ವಿರೋಧಗಳೇನೆ ಇರಲಿ, ಪೊಲೀಸರು ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಮತ್ತು ಸಮಗ್ರ ರಕ್ಷಣೆಯನ್ನು ಮಾಡುವವರು. ಅವರ ಕರ್ತವ್ಯ ಪ್ರಜ್ಞೆಗೆ ಮತ್ತು ವೈಯುಕ್ತಿಕ ಘನತೆಗೆ ಯಾವುದೇ ಕುಂದು ಬರದಂತೆ ವರ್ತಿಸೋಣ ಎಂಬ ಆಶಯದೊಂದಿಗೆ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೊಣ


ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್

Share This Article
error: Content is protected !!
";