ಕೊಟ್ಟೂರು: ಪಟ್ಟಣ ಸೇರಿದಂತೆ ಸುತ್ತಮುತ್ತ ಭಾನುವಾರ ತಡರಾತ್ರಿ ಸುರಿದ ಮುಂಗಾರು ಮಳೆಗೆ ಸುತ್ತಮುತ್ತಲಿನ ಬಹುತೇಕ ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ.
ಪೂರ್ವ ಮುಂಗಾರು ಆರ್ಭಟಿಸಿದ ಬೆನ್ನಲ್ಲೇ ಮುಂಗಾರು ಆರಂಭಗೊಂಡು ಕೊಟ್ಟೂರು ಪಟ್ಟಣದಲ್ಲಿ ಸುಮಾರು ಮೂರುವರೆ ಗಂಟೆಗಳ ಕಾಲ ಸುರಿದ ಜಡಿಮಳೆಯು ಬಿತ್ತನೆಗೆ ಸಿದ್ಧವಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತು.
ಹಳ್ಳಕೊಳ್ಳ ಭರ್ತಿ:
ಕೊಟ್ಟೂರಲ್ಲಿ 136ಮಿ.ಮೀ ಹಾಗು ಕೋಗಳಿ ಹೋಬಳಿಯಲ್ಲಿ 16ಮಿ. ಮೀ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದ್ದು, ರಾಂಪುರ ಅಲಬುರು ಹಳ್ಳಗಳು ತುಂಬಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ನಾಲ್ಕು ಮನೆಗಳಿಗೆ ಭಾಗಶಃ ಹಾನಿ:
ತಾಲೂಕು ವ್ಯಾಪ್ತಿಯ ರಾಂಪುರ ಜೋಳದ ಕೂಡ್ಲಿಗಿ ಕಾಳಾಪುರ ಗ್ರಾಮಗಳಲ್ಲಿ ಮಳೆಗೆ ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿದೆ.
ಹೋಗಳಿ ಕನ್ನೆಹಳ್ಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಸಂಪರ್ಕ ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕ ಸಂಚಾರ ಕಡಿತಗೊಂಡಿತ್ತು.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಇಟ್ಟಗಿ ರಸ್ತೆಯ ಕೆಳ ಸೇತುವೆ ಮೇಲೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಂಡು ಸಾರ್ವಜನಿಕ ಸಂಚಾರ ಅಡಚಣೆ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ತಹಶೀಲ್ದಾರ್ ಅಮರೇಶ್ ಜಿಕೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮವಾಗಿ ಭಾರಿ ಮಳೆ ಬಂದ ಹಿನ್ನೆಲೆಯಲ್ಲಿ ಬೆಳಗಿನ ಜಾವದವರೆಗೂ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಪಟ್ಟಣದ ವಿವಿಧ ಬಡಾವಣೆಗಳ ತಗ್ಗು ಪ್ರದೇಶಗಳ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಉಂಟಾಗಿತ್ತು. ಒಟ್ಟಿನಲ್ಲಿ ಮೃಗಶಿರ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ರೈತರು ಬಿತ್ತನೆಯ ಸಿದ್ಧತೆಯಲ್ಲಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.