ವ್ಯಸನ ಮುಕ್ತ ದಿನಾಚರಣೆ    ಜೋಳಿಗೆ ಮೂಲಕ ‘ದುಶ್ಚಟಗಳ ಭಿಕ್ಷೆ ಪಡೆದ ಡಾ.ಮಹಾಂತ ಶಿವಯೋಗಿಗಳು

Vijayanagara Vani
ವ್ಯಸನ ಮುಕ್ತ ದಿನಾಚರಣೆ    ಜೋಳಿಗೆ ಮೂಲಕ ‘ದುಶ್ಚಟಗಳ ಭಿಕ್ಷೆ ಪಡೆದ ಡಾ.ಮಹಾಂತ ಶಿವಯೋಗಿಗಳು

ಬಾಗಲಕೋಟೆಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯದಲ್ಲಿ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು.

ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆಗಸ್ಟ್ 1 ರಂದು ಜನಿಸಿದ ಅವರು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು.

ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ವ್ಯಸನ ಮುಕ್ತ ಸಮಾಜ’ ನಿರ್ಮಾಣಕ್ಕೆ 1975 ರಿಂದ ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದರು. ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನ ಹೊಂದಿದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.

ಮದ್ಯಪಾನ ಸ್ಮಶಾನಕ್ಕೆ ಆಹ್ವಾನ:

ವಿಶ್ವಾದ್ಯಂತ ಮದ್ಯ ಸೇವನೆಯಿಂದ 2.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ 2 ಮಿಲಿಯನ್ ಪುರುಷರು ಮತ್ತು 0.6 ಮಿಲಿಯನ್ ಮಹಿಳೆಯರು. ಅತಿ ಹೆಚ್ಚು ಆಲ್ಕೊಹಾಲ್ ಸೇವನೆಯಿಂದ ಸಾವು ಸಂಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ 52.2 ಸಾವುಗಳು 2019 ವರದಿ ಪ್ರಕಾರ ಕಂಡು ಬಂದಿದೆ ಎಂದು ತಿಳಿಸಿದೆ. ಕಿರಿಯ ವಯಸ್ಸಿನ (20-39 ವರ್ಷಗಳು) ಜನರು ಆಲ್ಕೋಹಾಲ್ ಸೇವನೆಯಿಂದ ಗುಲಾಮರಾಗಿದ್ದು ಈ ವಯೋಮಾನದಲ್ಲಿ ಆಲ್ಕೋಹಾಲ್‌ನಿಂದ (13%) ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ಕಂಡು ಬಂದಿದೆ.

ವ್ಯಸನ ಮರಣ ಶಾಸನ:

ಇಂದು ವಿಶ್ವಾದ್ಯಂತ ಮಾದಕವಸ್ತು ಸೇವನೆಯಿಂದ 2019ರ ವರದಿ ಪ್ರಕಾರ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಾಪ್ಪಿದ್ದಾರೆ. ಈ ಸಾವುಗಳಲ್ಲಿ ಸುಮಾರು 80% ನಷ್ಟು ಅಫೀಮು ಸಂಬ0ಧಿಸಿದೆ. ಅದರಲ್ಲಿ ಸುಮಾರು 25% ನಷ್ಟು ಅಫೀಮು ಮಿತಿ ಮೀರಿದ ಸೇವನೆಯಿಂದ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, 2019 ರಲ್ಲಿ ಅಫೀಮು ಮಿತಿ ಮೀರಿದ ಸೇವನೆಯಿಂದ ಸುಮಾರು 1.5 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಬದುಕನ್ನು ಸುಡುವ ತಂಬಾಕು:

ತ0ಬಾಕು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ಪ್ರಪಂಚದಾದ್ಯ0ತ ವರ್ಷಕ್ಕೆ 8 ಮಿಲಿಯನ್ ಜನರು ಸಾವನ್ನುಪ್ಪುತ್ತಿದ್ದಾರೆ. ಇದರಲ್ಲಿ ನೇರ ತಂಬಾಕು ಸೇವನೆಯ 7 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾಯುತ್ತಿದ್ದಾರೆ. ಸುಮಾರು 1.3 ಮಿಲಿಯನ್ ವ್ಯಕ್ತಿಗಳು ನೇರವಾಗಿ ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆೆ.

ತಂಬಾಕು ಸೇವನೆಯಲ್ಲಿ ಭಾರತವು ಜಾಗತಿಕವಾಗಿ 2 ನೇ ಸ್ಥಾನದಲ್ಲಿದ್ದು ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಸಾಯುತ್ತಾರೆ. ಒಟ್ಟಾರೆ 9.5% ರಷ್ಟು ಸಾವುಗಳು ಭಾರತವು ಧೂಮಪಾನ ಮತ್ತು ನೇರ ತಂಬಾಕು ಬಳಕೆಯಿಂದ ಸಾಯುತ್ತಿದ್ದಾರೆ ಎಂದು ವರದಿಯಾಗಿದ್ದು 253 ಮಿಲಿಯನ್ ಜನರು ಭಾರತದಲ್ಲಿ ತಂಬಾಕು ಬಳಕೆ ಮಾಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಎಸ್‌ಇಎಆರ್) ತಿಳಿಸಿದೆ.

ವಿಶ್ವದಲ್ಲಿ ದೂಪಪಾನ, ಮದ್ಯಪಾನ ಮಾತ್ರವಲ್ಲದೇ ಅನೇಕ ರೀತಿಯ ವ್ಯಸನಗಳಿಂದ ಇಂದಿನ ಯುವ ಜನತೆ ದಾರಿ ತಪ್ಪುತ್ತಿದ್ದು ತಮ್ಮ ಜೀವನವನ್ನು ನಶೆಯಲ್ಲಿ ನಾಶ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ 70 ರ ದಶದಲ್ಲಿಯೇ ಮಹಾಂತ ಸ್ವಾಮಿಜಿ ಅವರು ಮಾಡಿದ ಸಾಮಾಜಿಕ ಕ್ರಾಂತಿ ಅತ್ಯಂತ ವಿಶೇಷವಾದದ್ದು.

ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ:

ಡಾ.ಮಹಾಂತ ಶಿವಯೋಗಿ ಸ್ವಾಮಿಜಿ ಜಾತಿ, ಮತ, ಪಂಗಡ, ಧರ್ಮ, ಭಾಷೆ ಗಳನ್ನು ಮೀರಿ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆ0ಡ್ ಸೇರಿದಂತೆ ವಿದೇಶದಲ್ಲೂ ಮಹಾಂತರು ತಮ್ಮ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

ವ್ಯಸನವು ದೇಹಕ್ಕೆ ಮತ್ತು ದೇಶಕ್ಕೆ ಮಾರಕವಾಗಿದೆ ಎಂದು ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ ನಿರ್ಮಾಣ, ಕುಟುಂಬ, ಸಮಾಜ, ಗ್ರಾಮಗಳ ಕಲ್ಯಾಣದ ಪರಿಕಲ್ಪನೆ ಇಟ್ಟುಕೊಂಡು ಜೋಳಿಗೆ ಕಾರ್ಯಕ್ರಮದ ಮೂಲಕ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು,ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಜಾಗೃತಿ ಮೂಡಿಸುವ ಮೂಲಕ ವ್ಯಸನಗಳಿಂದ ಮನಪರಿವರ್ತನೆ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುವಂತೆ ಮಾಡಿದ್ದರು.

ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನ ಆಗಸ್ಟ್ 1 ರಂದು ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದ್ದು ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.

– ರಘು ಆರ್ .ಶಿವಮೊಗ್ಗ.

WhatsApp Group Join Now
Telegram Group Join Now
Share This Article
error: Content is protected !!