ಬಳ್ಳಾರಿ,ಜ.21
ಯಾವುದೇ ಸಮುದಾಯದ ವ್ಯಕ್ತಿಗಳು ಆಕಸ್ಮಿಕವಾಗಿ ಅಥವಾ ಬೇರೆ ಯಾವುದೇ ರೂಪದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಪಟ್ಟು ಮಾನಸಿಕವಾಗಿ ಅಶಕ್ತರಾದರೆ ಅಂತಹವರಿಗೆ ವೈದ್ಯಕೀಯ ಸೌಲಭ್ಯಗಳು ಒಳಗೊಂಡು ಆರೈಕೆ ಮಾಡಲು ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಸದುಪಯೋಗ ಅರ್ಹ ನಾಗರಿಕರು ಪಡೆದುಕೊಳ್ಳಬಹುದು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿದ್ಯಾಧರ್ ಶಿರಹಟ್ಟಿ ಅವರು ಹೇಳಿದರು.
ಮಂಗಳವಾರ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ರಚನೆ ಹಾಗೂ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ 2017 ರಡಿ ಅಧ್ಯಾಯ 11 ಸೆಕ್ಷನ್ 73 ಮತ್ತು 74 ರ ಅಡಿ ಜಿಲ್ಲಾ ಕೇಂದ್ರದಲ್ಲಿ ಮಂಡಳಿಯ ರಚನೆ ಹಿನ್ನಲೆಯಲ್ಲಿ ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿಯು ಸಹ ಮಂಡಳಿಯ ರಚನೆಯನ್ನು ಮಾಡಲಾಗಿದೆ ಎಂದರು.
ಜಿಲ್ಲೆಯ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯಿಂದ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತಿನಿಧಿಗಳನ್ನು ಸೂಚಿಸುವ ಮೂಲಕ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯ ಇತರೆ ಸದಸ್ಯರಾಗಿ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋರೋಗ ತಜ್ಞರು, ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಹಾಗೂ ಮನೋ ಸಾಮಾಜಿಕ ಕಾರ್ಯಕರ್ತರು (ಆರೈಕೆದಾರರು) ಸಮಿತಿ ಸದಸ್ಯರಿರುತ್ತಾರೆ ಎಂದು ಅವರು ತಿಳಿಸಿದರು.
ಇನ್ನು ಮುಂದೆ ಪ್ರತಿ ತಿಂಗಳು ಸಭೆ ಕೈಗೊಳ್ಳುವ ಜೊತೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯನ್ನೊಳಗೊಂಡoತೆ ಮಂಡಳಿ ಮುಂದೆ ನಿವೇದನೆ ಕೈಗೊಳ್ಳುವ ಮಾನಸಿಕ ಅಶಕ್ತರ ಕುಂದು ಕೊರತೆಗಳನ್ನು ಪರಿಶೀಲಿಸಿ ನಿಯಮಾನುಸಾರ ಸೌಲಭ್ಯ, ಸಲಹೆ, ಅಗತ್ಯ ನೆರವು ಒದಗಿಸುವ ಕಾರ್ಯವನ್ನು ಮಂಡಳಿಯು ಕೈಗೊಳ್ಳುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್ ಹೊಸಮನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕರಾದ ಲತಾ.ಆರ್., ತಹಶೀಲ್ದಾರರಾದ ಗೌಸೀಯ ಬೇಗಮ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ.ವೀರೇಂದ್ರ ಕುಮಾರ್, ಮನೋರೋಗ ತಜ್ಞ ಡಾ.ರೋಹನ್ ವನಗುಂದಿ, ಕಾರಾಗೃಹ ಸಹಾಯಕ ಅಧೀಕ್ಷಕರಾದ ಉಮ್ಮೆ ತಸ್ಮಿಯ.ಜಿ., ವೈದ್ಯಾಧಿಕಾರಿ ಡಾ.ಸೌಜನ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಮನೋಶಾಸ್ತçಜ್ಞರಾದ ಶರ್ಮಾಸ್ ವಲಿ, ಮನೋ ಸಾಮಾಜಿಕ ಕಾರ್ಯಕರ್ತೆರು ಶಾಂತಪ್ಪ.ಹೆಚ್., ಮಾನಸಿಕ ಸಮಾಲೋಚಕರಾದ ಮಂಜುನಾಥ ಸೇರಿದಂತೆ ಇತರರು ಹಾಜರಿದ್ದರು.