Ad image

*ವಂದೇ ಮಾತರಂ ದೇಶಭಕ್ತಿ ಗೀತೆ ಮೂಲಕ ಭಾರತೀಯರನ್ನು ಒಗ್ಗೂಡಿಸಿದ ‘ಬಂಕಿಮ್ ಚಂದ್ರ ಚಟರ್ಜಿ’*

Vijayanagara Vani
*ವಂದೇ ಮಾತರಂ ದೇಶಭಕ್ತಿ ಗೀತೆ ಮೂಲಕ ಭಾರತೀಯರನ್ನು ಒಗ್ಗೂಡಿಸಿದ ‘ಬಂಕಿಮ್ ಚಂದ್ರ ಚಟರ್ಜಿ’*

ಭಾರತದ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಹೋರಾಟಗಾರರು, ಮಹಾನ್ ನಾಯಕರ ಕುರಿತು ನಾವು ಓದಿದ್ದೇವೆ. ಅನೇಕ ನಾಯಕರು ಬ್ರಿಟಿಷರ ವಿರುದ್ಧದ ಭಾಷಣಗಳ ಮೂಲಕ ಜನರನ್ನು ಒಂದುಗೂಡಿಸುತ್ತಿದ್ದರು. ಇನ್ನೂ ಕೆಲವರು ಕ್ರಾಂತಿಕಾರಿ ಹೋರಾಟಗಳ ಮೂಲಕ, ಶಾಂತಿ ಸಭೆಗಳ ಮೂಲಕ ಹೀಗೆ ಭಿನ್ನ ವಿಭಿನ್ನ ರೀತಿಯಲ್ಲಿ ಹೋರಾಟಕ್ಕೆ ಜನರನ್ನು ಪ್ರೇರೆಪಿಸುವ ಸಂಗತಿಗಳನ್ನು ನಾವು ಕಾಣಬಹುದು.

ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸಿ, ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮೂಡಿಸುವುದು ಅನಿವಾರ್ಯವಾಗಿದ ಸಂದರ್ಭದಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ. ಬ್ರಿಟಿಷರು ಅವರನ್ನು ಚಟರ್ಜಿ ಎಂದು ಕರೆಯುತ್ತಿದ್ದರು.

ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು 1838ರ ಜೂನ್ 27ರಂದು ನೈಹತಿಯಲ್ಲಿರುವ ಕಂಥಾಲಪಾರ ಎಂಬ ಗ್ರಾಮದಲ್ಲಿ ಜನಿಸಿದರು. 1857ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು. 1869ರಲ್ಲಿ ಒಂದು ಕಾನೂನು ಪದವಿಯನ್ನೂ ಗಳಿಸಿದರು. ಮುಂದೆ ತಮ್ಮ ತಂದೆಯ ರೀತಿಯಲ್ಲಿಯೇ ಜೆಸ್ಸೋರ್‍ನ ಉಪ-ಜಿಲ್ಲಾಧಿಕಾರಿಯಾಗಿ ನೇಮಿಸಲ್ಪಟ್ಟರು ಓರ್ವ ಉಪ-ನ್ಯಾಯಾಧಿಪತಿಯ ಹುದ್ದೆಗೇರಿದ ಚಟರ್ಜಿಯವರು 1891ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. ಆಡಳಿತ ನಡೆಸುತ್ತಿದ್ದ ಬ್ರಿಟಿಷರೊಂದಿಗೆ ಘರ್ಷಣೆಗೆ ಇಳಿಯಲು ಕಾರಣವಾಗುವಂಥ ಘಟನೆಗಳು ಅವರ ಈ ಸೇವೆಯ ವರ್ಷಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು.

ರಾಮಕೃಷ್ಣ ಪರಹಂಸರ ಸಂಪರ್ಕ:

ಶ್ರೀರಾಮಕೃಷ್ಣರು ಮತ್ತು ಬಂಕಿಮಚಂದ್ರರು ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು ಮತ್ತು ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಯಿಂದ ಗೌರವಿಸುತ್ತಿದ್ದರು. ಒಂದು ದಿನ ಶ್ರೀ ರಾಮಕೃಷ್ಣರು ಬಂಕಿಮರಿಗೆ ಬಂಕಿಮ್ ಎಂದರೇ ಬಾಗಿದ ಎಂದು ಅರ್ಥ ಬರುತ್ತದೆ. ನಿನ್ನನ್ನು ಬಗ್ಗಿಸಿದ್ದು ಯಾವುದು? ಎಂದು ಕೇಳುಯತ್ತಾರೆ. ಅಯ್ಯೋ, ಠಾಕೂರ್, ನನ್ನನ್ನು ಏನು ಬಗ್ಗಿಸಿದೆ ಎಂದು ನಿಮಗೆ ತಿಳಿದಿಲ್ಲವೇ? ಬ್ರಿಟಿಷರ ಬೂಟ್ ನನ್ನನು ಬಾಗಿಸಿದೆ ಎಂದು ಬಂಕಿಮರು ಉತ್ತರಿಸಿದರು. ಶ್ರೀ ರಾಮಕೃಷ್ಣ ಪರಮಹಂಸ ಅವರು ಆಧ್ಯಾತ್ಮಿಕ ಮೇರು ಶಿಖರವಾಗಿದ್ದರು, ಮಹಾನ್ ದಾರ್ಶನಿಕರಾಗಿದ್ದರು. ಅವರು ಮತ್ತು ಬಂಕಿಮರು ಹಲವಾರು ವಿಷಯಗಳನ್ನು ಚೆರ್ಚಿಸುತ್ತಿದ್ದರು.

ಸ್ವಾಭಿಮಾನದ ಕಿಚ್ಚುಹಚ್ಚಿದ ವಂದೇ ಮಾತರಂ:

ಆನಂದಮಠ ಕಾದಂಬರಿಯಲ್ಲಿ ಬರೆದ ಓ ತಾಯಿ, ಭಾರತಿಯೇ, ನಿನಗೆ ನಮನ’ ಎಂದು ಸಾರುವ ವಂದೇ ಮಾತರಂ ಭಾರತೀಯರಿಗೆ ಪವಿತ್ರ ಗೀತೆಯಂತಿದೆ. ಈ ಗೀತೆಗೆ ರವೀಂದ್ರನಾಥ ಠಾಗೂರರು ಸಂಗೀತ ಸಂಯೋಜಿಸಿರು. ವಂದೇ ಮಾತರಂ ಭಾರತಮಾತೆಯ ಮಾಂತ್ರಿಕ ಮಂತ್ರ-ಅಗ್ನಿಯಾಗಿತ್ತು. ಇದು ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಕೂಗು. ಈ ಹಾಡನ್ನು ಹಾಡುತ್ತಾ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದರು. ಅವರಿಗೆ, ಇದು ಕೇವಲ ಶಬ್ದವಲ್ಲ, ಜೀವಂತ ಶಕ್ತಿ. ಪದಗಳಲ್ಲ ಉರಿಯುತ್ತಿರುವ ಸ್ಫೂರ್ತಿ, ದೇಶಭಕ್ತಿಯ ಈ ಮೂಲದಿಂದ ಸಾವಿರಾರು ಜನರು ಸ್ಫೂರ್ತಿ ಪಡೆದರು.

ಈ ಹಾಡನ್ನು ಹಾಡಿದ್ದಕ್ಕಾಗಿ ಅನೇಕ ಜನರು ಜೈಲಿಗೆ ಹೋಗಬೇಕಾಯಿತು ಮತ್ತು ಅವರೆಲ್ಲರೂ ಸಂತೋಷದಿಂದ ಮತ್ತು ಲವಲವಿಕೆಯಿಂದ ಹೋದರು. ಇದು ಸಾಮಾನ್ಯ ಹಾಡಲ್ಲ. ಬದಲಾಗಿ ಮಂತ್ರಗಳ ಮಂತ್ರ, ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿದ ಬೀಜ ಮಂತ್ರ. ಮಾತೃಭೂಮಿಯನ್ನು ಮಾತೃ-ದೇವತೆಯೊಂದಿಗೆ ಗುರುತಿಸುವ ಮೂಲಕ ರಾಷ್ಟ್ರೀಯತೆಯನ್ನು ಧರ್ಮದ ಮಟ್ಟಕ್ಕೆ ಏರಿಸಿದರು.

ಬಂಕಿಮ್ ಅವರ ಸಾಹಿತ್ಯವನ್ನು 1882 ರಲ್ಲಿ ರಾಷ್ಟ್ರೀಯತೆ ಸ್ವತಃ ಅಭಿವೃದ್ಧಿಯ ಅತ್ಯಂತ ಆರಂಭಿಕ ಹಂತದಲ್ಲಿದ್ದಾಗ ಬರೆಯಲಾಯಿತು. ವಂದೇ ಮಾತರಂ 1937 ರಿಂದ ಭಾರತದ ರಾಷ್ಟ್ರೀಯ ಗೀತೆಯಾಗಿದೆ.

ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ನೀಡಿದೆ.

ಕಾದಂಬರಿಗಳು:

ದುರ್ಗೇಶ್‍ನಂದಿನಿ, ಕಪಾಲಕುಂಡಲ, ಮೃಣಾಲಿನಿ, ವಿಷಬೃಕ್ಷ , ಇಂದಿರಾ, ಜುಗಲನ್‍ಗುರಿಯಾ, ರಾಧಾರಾಣಿ, ಚಂದ್ರಶೇಖರ್, ಕಮಲಾಕಾಂತೆರ್ ದಪ್ತರ್ , ರಜನಿ, ಕೃಷ್ಣಕಾಂತೆರ್ ಉಯಿಲ್, ರಾಜಸಿಂಹ, ಆನಂದಮಠ, ದೇವಿ ಚೌಧುರಾನ, ಕಮಲಾಕಾಂ, ಸೀತಾರಾಮ್, ಮೂಚಿರಾಮ್ ಗುರೆರ್ ಜೀವನ್‍ಚರಿತಾ ಮುಂತಾದವು ಬಂಕಿಮ ಚಂದ್ರರ ಕಾದಂಬರಿಗಳು.

ಬಂಕಿಮ ಚಂದ್ರ ಧಾರ್ಮಿಕ ವ್ಯಾಖ್ಯಾನಗಳಲ್ಲಿ ಕೃಷ್ಣ ಚರಿತ್ರ, ಧರ್ಮತತ್ವ, ದೇವತತ್ತ್ವ, ಶ್ರೀಮದ್ಭಗವದ್ ಗೀತಾ ಭಗವದ್ಗೀತಾದ ಮೇಲಿನ ಒಂದು ವ್ಯಾಖ್ಯಾನ ಪ್ರಸಿದ್ಧವೆನಿಸಿವೆ. ಲಲಿತಾ ಓ ಮಾನಸ್ ಅವರ ಕವನ ಸಂಗ್ರಹ. ಲೋಕ್ ರಹಸ್ಯ, ಬಿಜ್ಞಾನ್ ರಹಸ್ಯ, ಬಿಚಿತ್ರ ಪ್ರಬಂಧ , ಸಮ್ಯಾ ಮುಂತಾದವು ಪ್ರಬಂಧ ಸಂಗ್ರಹಗಳು. ಬಂಕಿಮ ಚಂದ್ರರ ಈ ಎಲ್ಲ ಕೃತಿಗಳೂ ಇಂಗ್ಲಿಷ್ ಭಾಗಸೇರಿದಂತೆ ಇತರ ಭಾಗಗಳಲ್ಲಿ ಮೂಡಿಬಂದಿವೆ. ಬಂಕಿಮ ಚಂದ್ರರು 1894ರ ಏಪ್ರಿಲ್ 8 ರಂದು ವಿಧಿವಶರಾದರು.

ರಘು ಆರ್

Share This Article
error: Content is protected !!
";