ಬಳ್ಳಾರಿ,ಜು.29
ಕೃಷಿ ಇಲಾಖೆಯಿಂದ 2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬಳ್ಳಾರಿ ಜಿಲ್ಲೆಯ 5401 ರೈತರ ಖಾತೆಗಳಿಗೆ ಒಟ್ಟು 9.12 ಕೋಟಿ ರೂ. ಮೊತ್ತದ ಬೆಳೆ ವಿಮೆ ಪರಿಹಾರ ವರ್ಗಾಯಿಸಲಾಗಿದ್ದು, ಪ್ರಸ್ತಕ ಸಾಲಿನಲ್ಲಿಯೂ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಣಿಯಾದ 5,401 ರೈತರಿಗೆ ಇಲ್ಲಿಯವರೆಗೆ ಒಟ್ಟು 9.12 ಕೋಟಿ ರೂ. ಬೆಳೆ ವಿಮೆ ಪರಿಹಾರ ಮೊತ್ತವನ್ನು ವಿಮಾ ಸಂಸ್ಥೆಯಿAದ ಇತ್ಯರ್ಥಪಡಿಸಲಾಗಿದೆ.
*ತಾಲ್ಲೂಕುವಾರು ಮಾಹಿತಿ:*
ಬಳ್ಳಾರಿ ತಾಲ್ಲೂಕು-1077 ರೈತರಿಗೆ ರೂ.2.52 ಕೋಟಿ, ಕುರುಗೋಡು ತಾಲ್ಲೂಕು-404 ರೈತರಿಗೆ ರೂ.0.62 ಕೋಟಿ, ಕಂಪ್ಲಿ ತಾಲ್ಲೂಕು-1854 ರೈತರಿಗೆ ರೂ.3.58 ಕೋಟಿ, ಸಂಡೂರು-689 ರೈತರಿಗೆ ರೂ.0.16 ಕೋಟಿ, ಸಿರುಗುಪ್ಪ ತಾಲ್ಲೂಕು-1377 ರೈತರಿಗೆ ರೂ.2.24 ಕೋಟಿ ಇತ್ಯರ್ಥ ಪಡಿಸಲಾಗಿದೆ. ಹಾಗಾಗಿ ರೈತರು 2025-26ನೇ ಸಾಲಿನ ಬೆಳೆಗಳಿಗೂ ಬೆಳೆ ವಿಮೆ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ಸೂರ್ಯಕಾಂತಿ, ತೊಗರಿ, ಹತ್ತಿ, ಈರುಳ್ಳಿ, ಕೆಂಪು ಮೆಣಿಸಿನಕಾಯಿ, ಜೋಳ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ಜುಲೈ 31 ಹಾಗೂ ಇನ್ನಿತರೆ ಬೆಳೆಗಳಾದ ನವಣೆ, ಶೇಂಗಾ, ಭತ್ತ, ರಾಗಿ, ಹುರಳಿ ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ.
ಜಿಲ್ಲೆಯ ಎಲ್ಲಾ ರೈತರು ಬೆಳೆ ವಿಮೆ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.