Ad image

ಹಳಗನ್ನಡ ಓದು ಕಾರ್ಯಾಗಾರ ಡಾ.ಎಂ.ಎಂ.ಕಲಬುರ್ಗಿ ಅವರು ಸಮಗ್ರ ಸಂಶೋಧಕರಾಗಿದ್ದರು: ಡಾ.ಕೆ.ರವೀಂದ್ರನಾಥ

Vijayanagara Vani
ಹಳಗನ್ನಡ ಓದು ಕಾರ್ಯಾಗಾರ ಡಾ.ಎಂ.ಎಂ.ಕಲಬುರ್ಗಿ ಅವರು ಸಮಗ್ರ ಸಂಶೋಧಕರಾಗಿದ್ದರು: ಡಾ.ಕೆ.ರವೀಂದ್ರನಾಥ

 

ಧಾರವಾಡ  ಮಾ.18: ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ), ಧಾರವಾಡ ಹಾಗೂ ನಗರದ ಕೆ.ಎಲ್.ಇ. ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಿನ್ನೆ (ಮಾ.17) ರಂದು ಹಳಗನ್ನಡ ಓದು ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವು ಜರುಗಿತು.

ಕಾರ್ಯಾಗಾರದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಅವರು ಡಾ. ಎಂ. ಎಂ. ಕಲಬುರ್ಗಿಯವರ ಲೇಖನಗಳನ್ನು ಅನುಲಕ್ಷಿಸಿ ಹಳೆಗನ್ನಡ ಓದು ವಿಷಯದ ಕುರಿತು ಮಾತನಾಡುತ್ತಾ, ಎಂ. ಎಂ. ಕಲಬುರ್ಗಿಯವರು ಸಮಗ್ರ ಸಂಶೋಧಕರಾಗಿದ್ದರು. ಕನ್ನಡ ಪರಂಪರೆಗೆ ಅನೇಕರು ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ ಆ ಸಾಲಿನಲ್ಲಿ ಎಂ. ಎಂ. ಕಲಬುರ್ಗಿ ಅವರು ಸೇರುತ್ತಾರೆ. ಛಂದಸ್ಸು, ವ್ಯಾಕರಣ ಭಾಷಾ ನೆಲೆಯಲ್ಲಿ ಹಳಗನ್ನಡ ಅತಿ ಮಹತ್ವವನ್ನು ಪಡೆದುಕೊಂಡಿದೆ. ಅವರ ಲೇಖನದುದ್ದಕ್ಕೂ ಬಂಡಾಯದ ನೆಲೆಗಳು ಕಾಣುತ್ತೇವೆ. ಶ್ರೇಷ್ಠ ವಿದ್ವಾಂಸರಾದ ಡಿ. ಎಲ್. ನರಸಿಂಹಾಚಾರ್ಯರು ಸಂಪಾದಿಸಿದ ಶಬ್ದಮಣಿದರ್ಪಣದ ಮಿತಿಗಳ ಕುರಿತು ನರಸಿಂಹಾಚಾರ್ಯರಿಗೆ ಪತ್ರ ಬರೆದ ಎಂ. ಎಂ. ಕಲಬುರ್ಗಿಯವರ ಪಾಂಡಿತ್ಯ ಹೇಗಿತ್ತು ಹಾಗೆ ಕಲಬುರ್ಗಿಯವರ ಕನ್ನಡ ಛಂದಸ್ಸಿನ ಸ್ವರೂಪ ಲೇಖನವನ್ನು ಓದಿದರೆ ಸಾಕು ಹಳಗನ್ನಡ ಹೇಗೆ ಓದಬಹುದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿಯ ಕನ್ನಡ ಶಾಸನಗಳು ಎಂಬ ಲೇಖನದ ಕುರಿತು ಡಾ. ಎಂ. ಎಂ. ಕಲಬುರ್ಗಿಯವರು ಮಹಾರಾಷ್ಟ್ರದಲ್ಲಿನ ಕನ್ನಡ ಶಾಸನಗಳಿಗೆ ಕಿವಿಗೊಟ್ಟು ಕೇಳಿದರೆ ಕನ್ನಡ ಕೇಳುತ್ತದೆ, ದಿಟ್ಟಿಸಿ ನೋಡಿದರೆ ಪ್ರಾಚೀನ ಕರ್ನಾಟಕ ಕಾಣುತ್ತದೆ ಎಂಬ ಅವರ ಮಾತನ್ನು ಕೆ. ರವೀಂದ್ರನಾಥವರು ಪುನರುಚ್ಚರಿಸುತ್ತಾ ಡಾ. ಎಂ. ಎಂ. ಕಲಬುರ್ಗಿಯವರ ಮಾರ್ಗದ ಎಂಟು ಸಂಪುಟಗಳಲ್ಲಿ ಮೊದಲ ಎರಡು ಸಂಪುಟಗಳುದ್ದಕ್ಕೂ ಹಳಗನ್ನಡ ಪ್ರಾಮುಖ್ಯತೆಯನ್ನು ವಹಿಸಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯರು ಹಾಗೂ ಸವದತ್ತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ವಾಯ್. ಎಂ. ಯಾಕೊಳ್ಳಿ ಅವರು ಹಳೆಗನ್ನಡ ಸಾಹಿತ್ಯದ ಅವಲೋಕನ ಕುರಿತು ಸದ್ಯದ ಬದುಕನ್ನು ಮತ್ತೆ ಮತ್ತೆ ಸುಸಂಸ್ಕøತಗೊಳಿಸಲು, ಶ್ರೀಮಂತಗೊಳಿಸಲು ಹಳಗನ್ನಡ ಸಾಹಿತ್ಯ ನಮಗೆ ಬಹಳ ಅಗತ್ಯವಾಗಿದೆ. ಹಳಗನ್ನಡ ಕಾವ್ಯವನ್ನು ಯಾಕೆ ಓದಬೇಕು ಎನ್ನುವುದು ಕೇಶಿರಾಜನ ಕವಿರಾಜಮಾರ್ಗದಲ್ಲಿ ಕಂಡುಬರುತ್ತದೆ. ಪ್ರಾಚೀನ ಕನ್ನಡ ಹಾಗೂ ಹಳಗನ್ನಡ ನಮಗೆ ಏನು ಹೇಳಿಕೊಡುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳದೆ ಹೋದರೆ ಕಲಬುರ್ಗಿಯವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.

ಪಂಪನಿಂದ ಹಿಡಿದುಕೊಂಡು ಷಡಕ್ಷರದೇವನವರೆಗೂ ಹಿಡಿದುಕೊಂಡು 7-8 ಶತಮಾನದಲ್ಲಿ ಬಂದಿರುವ 500-600 ಹಳಗನ್ನಡ ಗ್ರಂಥಗಳನ್ನು, ಶಾಸ್ತ್ರಗ್ರಂಥಗಳನ್ನು ನಾವು ಅಧ್ಯಯನ ಮಾಡದೇ ಇದ್ದರೆ ನಮ್ಮ ಬದುಕು ಬಡವಾಗುತ್ತದೆ. ಯಾವುದು ದುಃಖ ಯಾವುದು ಸುಖ, ಯಾವುದು ಹಿತ ಯಾವುದು ಅಹಿತ, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಇದನ್ನು ಹೇಳಿಕೊಡುವ ಕೆಲಸವನ್ನು ಹಳಗನ್ನಡ ಮಹಾಪ್ರಧಾನ ಕಾಲವು ನಮಗೆ ತಿಳಿಸಿಕೊಡುತ್ತದೆ. 10ನೇ ಶತಮಾನದಿಂದ 17 ನೇ ಶತಮಾನದವರೆಗೂ ನಾವು ಹಳಗನ್ನಡವು ನಮಗೆ ಕಂಡುಬುರುತ್ತದೆ. ಪಂಪಭಾರತದ ಸಂಧರ್ಭವನ್ನು ವಿವರಿಸುತ್ತಾ ಇಂದಿನ ಬದುಕಿನಲ್ಲಿ ಹಳಗನ್ನಡ ಸಾಹಿತ್ಯವು ಅತಿಹೆಚ್ಚು ಪಾತ್ರವಹಿಸುತ್ತದೆ ಎಂದು ಹೇಳಿದರು.

ಕೆ.ಎಲ್.ಇ. ಸಂಸ್ಥೆ ಬೆಳಗಾವಿಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಡಾ. ವ್ಹಿ. ಆಯ್. ಪಾಟೀಲ ಉದ್ಘಾಟನಾಪರನುಡಿಗಳನ್ನಾಡಿ, ಡಾ. ಎಂ. ಎಂ. ಕಲಬುರ್ಗಿಯವರ ಬರಹ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ ಅವರು ಮಹಾನ್ ವಿದ್ವಾಂಸರಾಗಿದ್ದರು, ಇಂದಿನ ಪ್ರಾಧ್ಯಾಪಕರು ಪಠ್ಯಕ್ಕೆ ಸೀಮಿತವಾಗದೆ ಅವರು ನಿರಂತರ ಓದುವಿಕೆಯನ್ನು ಬೆಳಿಸಿಕೊಂಡು ಪಾಠದ ಆಶಯ, ಉದ್ದೇಶ ಏನು ಎಂದು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಹೇಳಿದರು.

ಪ್ರತಿಷ್ಠಾನದ ಸದಸ್ಯರಾದ ಡಾ. ಬಾಳಣ್ಣ ಶೀಗೀಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಳಗನ್ನಡ ಯಾಕೆ ನಮಗೆ ಬೇಕು, ಇಂದಿನ ವಿದ್ಯಾರ್ಥಿಗಳಲ್ಲಿ ಹಳಗನ್ನಡದ ಕುರಿತಾದ ಇರುವ ಭಯ, ಅಂಜಿಕೆಯ ಕುರಿತು ಹಲವು ಸಂದರ್ಭಗಳನ್ನು ಉದಾಹರಿಸುತ್ತಾ ಹಳಗನ್ನಡದ ಮಹತ್ವವನ್ನು ತಿಳಿಸಿದರು. ಹಾಗೂ ಅಧ್ಯಕ್ಷತೆಯನ್ನು ಶಂಕರಲಿಂಗ ಶಿವಳ್ಳಿಯವರು ವಹಿಸಿಕೊಂಡಿದ್ದರು. ಸ್ವಾಗತವನ್ನು ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ನೆರವೇರಿಸಿದರು. ಅತಿಥಿಗಳನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವೀಣಾ ಹೂಗಾರ ಪರಿಚಯಿಸಿದರು. ಪ್ರಾಚಾರ್ಯರಾದ ಡಾ. ನೀಲಕ್ಕ ಪಾಟೀಲ ಮತ್ತು ಐ.ಕ್ಯೂ.ಐ.ಸಿ. ಸಂಯೋಜಕರಾದ ಪ್ರೊ. ಶ್ರೀದೇವಿ ಸಂಗೊಳ್ಳಿ, ಪ್ರತಿಷ್ಠಾನದ ಸದಸ್ಯರಾದ ಶಶಿಧರ ತೋಡಕರ ಉಪಸ್ಥಿತಿಯನ್ನು ವಹಿಸಿದ್ದರು. ಡಾ. ಬಾಬು ಬೆಣ್ಣಿ ನಿರೂಪಿಸಿದರು, ಡಾ. ರೆಹಮಾನ್ ಗೊರಜನಾಳ ವಂದಿಸಿದರು.

ಕಾರ್ಯಗಾರಕ್ಕೆ ಜಿಲ್ಲೆಯ ಬೇರೆ ಬೇರೆ ಕಾಲೇಜುಗಳಿಂದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಆಗಮಿಸಿದ್ದರು ಹಾಗೂ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕರು ಹಾಗೂ ಸರ್ವ ಸಿಬ್ಬಂದಿ ಹಾಜರಿದ್ದರು.

***

Share This Article
error: Content is protected !!
";