ಶಿವಮೊಗ್ಗ, ಮಾರ್ಚ್ 20: ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಕೈಗೊಂಡಲ್ಲಿ ಅಧಿಕ ಫಲ ಶ್ರುತಿಯನ್ನು ಕಾಣಲು ಸಾಧ್ಯ ಎಂದು ಕಾಡಾ ಅಧ್ಯಕ್ಷರಾದ ಡಾ. ಕೆ. ಪಿ. ಅಂಶುಮಂತ್ ರವರು ತಿಳಿಸಿದರು.
ಅವರು ಇತ್ತೀಚೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಚೇರಿಯ ಸಭಾಂಗಣದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗಾಗಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಶಶಿಧರ್ ರವರು ಮಾತನಡುತ್ತಾ, ಕೃಷಿಯಲ್ಲಿ ತಾಂತ್ರಿಕತೆಯನ್ನು ಸಮರ್ಥವಾಗಿ ಬಳಸುವಂತೆ ತಿಳಿಸಿದರು. ಸಂಪನ್ಮೂಲಗಳನ್ನು ಬಳಸುವ ಮುನ್ನ ತಮ್ಮ ಕೃಷಿ ಕ್ಷೇತ್ರದ ಕುರಿತು ಅಂದರೆ ಮಣ್ಣಿನ ಗುಣ ಮತ್ತು ಆರೋಗ್ಯ. ಬೆಳೆಗೆಬೇಕಾದ ನೀರಿನ ಅಗತ್ಯ ಇವುಗಳನ್ನು ಮೊದಲು ತಿಳಿದುಕೊಂಡು ತಂತ್ರಜ್ಞಾನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬಳಸಿಕೊಳ್ಳುವುದನ್ನು ಉದಾಹರಣೆ ಸಹಿತವಾಗಿ ವಿವರಿಸಿದರು.
ಸಹಾಯಕ ಕೃಷಿ ನಿರ್ದೇಶಕರು ಕಾಶಿನಾಥ್ ರವರು ಮಾತನಾಡುತ್ತಾ, ಇಲಾಖೆಯಿಂದ ನೀಡುವ ಸೌಲಭ್ಯಗಳಾದ ಬಿತ್ತನೆಬೀಜ, ಪೈಪ್ ಗಳು, ಕೃಷಿಯಂತ್ರೋಪಕರಣಗಳು, ಕೃಷಿ ಮತ್ತು ತೋಟಗಾರಿಕೆಗೆ ಸಂಬoಧಿಸಿದ ವಿವಿಧ ಯೋಜನೆಗಳು, ಪಶುಸಂಗೋಪನೆ ಯೋಜನೆಗಳ ಕುರಿತಾದ ಮಾಹಿತಿಯನ್ನು ತಿಳಿಸಿ ಇವುಗಳ ಸದುಪಯೋಗವನ್ನು ಸಂಘಗಳ ಮೂಲಕ ಪಡೆಯುವಂತೆ ತಿಳಿಸಿದರು.
ಈ ತರಬೇತಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಅಚ್ಚುಕಟ್ಟು ಭಾಗದ ರೈತರುಗಳು ಹಾಗೂ ಕಾಡಾ ಆಡಳಿತಾಧಿಕಾರಿಗಳು ಆರ್, ಸತೀಶ್ ಹಾಗೂ ಭೂ ಅಭಿವೃದ್ಧಿ ಅಧಿಕಾರಿಗಳು ಕೆ ಪ್ರಶಾಂತ್ (ತಾಂತ್ರಿಕ), ಶ್ರೀಮತಿ ರಾಜಸುಲೋಚನಾ (ಕೃಷಿ), ಹಾಗೂ ಡಾ. ನಾಗೇಶ್ ಎಸ್, ಡೋಂಗರೆ (ಸಹಕಾರ) ಮತ್ತು ಭದ್ರ ಕಾಡಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು