Ad image

ಬಳ್ಳಾರಿ: ಡಾ. ರಾಜ್‌ಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಡಾ.ರಾಜ್ ಕುಮಾರ್ ಮೇರು ವ್ಯಕ್ತಿತ್ವದ ಖ್ಯಾತ ನಟ: ಪಿ.ಪ್ರಮೋದ್

Vijayanagara Vani
ಬಳ್ಳಾರಿ,ಏ.24
ಡಾ.ರಾಜ್ ಕುಮಾರ್ ಅವರು ಮೇರು ವ್ಯಕ್ತಿತ್ವದ ಖ್ಯಾತ ನಟ. ಅವರ ಸಾಮಾಜಿಕ ಕಳಕಳಿ, ಕನ್ನಡದ ಅಪಾರ ಪಾಂಡಿತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮ0ದಿರದಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವರನಟ ಡಾ.ರಾಜ್ ಕುಮಾರ್ ಅವರಂತೆ ಆದರ್ಶಗುಣ ಹಾಗೂ ಆಚಾರ-ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಯುವಜನಾಂಗ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕನ್ನಡದ ಅಸ್ಮಿತೆ, ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಜನ್ಮದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಆಚರಿಸುವಂತೆ ಆದೇಶಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.
ಡಾ.ರಾಜ್ ಕುಮಾರ್ ಅವರ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯ, ಸಾಮಾಜಿಕ ಕಳಕಳಿಯ ಚಲನಚಿತ್ರಗಳು ಜನರನ್ನು ಪ್ರಭಾವಿತಗೊಳಿಸಿದ್ದವು. ಅವರ ಎಲ್ಲಾ ಚಲನಚಿತ್ರಗಳನ್ನು ಕುಟುಂಬ ಸಮೇತರಾಗಿ ನೋಡುವಂತಹದ್ದಾಗಿದ್ದವು. ಬೀದರ್ ನಿಂದ ಚಾಮರಾಜನಗರ ದವರೆಗೆ ಕನ್ನಡಾಭಿಮಾನಿಯಾಗಿ ಸಮಾನ ಕನ್ನಡ ಭಾಷೆ ಮಾತನಾಡುವಂತೆ ಪ್ರೇರೇಪಿಸಿದವರು ಎಂದರು.
ಅಂದಿನ ಕಾಲದಲ್ಲಿ ಕುವೆಂಪು ಅವರ ಸಾಹಿತ್ಯ ಪುಸ್ತಕಗಳನ್ನು ಕೇವಲ ಅಕ್ಷರಸ್ಥರು ಮಾತ್ರ ಓದುತ್ತಿದ್ದರು. ಆದರೆ ಅವುಗಳ ಸಂದೇಶಗಳನ್ನು ತಮ್ಮದೇ ಆದ ನಟನಾ ಶೈಲಿಯ ಮೂಲಕ ಬೆಳ್ಳಿ ಪರದೆಯ ಮೂಲಕ ಬಿಂಬಿಸುತ್ತಿದ್ದವರು ಡಾ.ರಾಜ್ ಕುಮಾರ್ ಎಂದು ತಿಳಿಸಿದರು.
*ಬಳ್ಳಾರಿಗೆ ಅವಿನಾಭಾವ ಸಂಬಂಧ:*
ಡಾ.ರಾಜ್ ಕುಮಾರ್ ಅವರು ಸರಳ ಜೀವನ ಹೊಂದಿದ್ದವರು. ಅದೇರೀತಿಯಲ್ಲೂ ಗಣಿನಾಡು ಬಳ್ಳಾರಿ ಜೊತೆಗೆ ಅವಿನಾಭಾವ ಸಂಬಂಧವಿತ್ತು. ‘ನಾ ನಿನ್ನ ಮರೆಯಲಾರೆ’ ಚಿತ್ರದ ಕೊನೆಯಲ್ಲಿ ಚಲಿಸುವ ರೈಲ್ವೆಯಲ್ಲಿ ಭೇಟಿ ಮಾಡುವ ಸೀನ್ ನಗರದ ಹೊರವಲಯದ ಓಬಳಾಪುರ ಬಳಿ ಚಿತ್ರೀಕರಿಸಲಾಗಿತ್ತು. ಮಯೂರ ಹೋಟೆಲ್ ಗೆ ಆಗಮಿಸಿದ್ದರು. ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ನಿರ್ಮಾಣದ ದೇಣಿಗೆಗೆ ಡಾ.ರಾಜ್ ಕುಮಾರ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಗೌರಿ ಎಸ್.ತ್ರಿವೇದಿ ಇದ್ದರು. ಗೋಕಾಕ ಚಳುವಳಿಗಳಂತಹ ಕನ್ನಡ ಭಾಷೆ ರಕ್ಷಣೆಯ ಹೋರಾಟಕ್ಕೆ ಡಾ.ರಾಜ್ ಕುಮಾರ್ ಅವರು ಬಳ್ಳಾರಿಗೆ ಆಗಮಿಸಿದ್ದರು ಎಂದು ಎಲ್ಲಾ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ಈ ಹಿಂದೆ ಮಕ್ಕಳು ಮನೆಯಲ್ಲಿ ತಂದೆ-ತಾಯಿಯರ ಮಾತು ಕೇಳದಿದ್ದಾಗ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ತೋರಿಸುತ್ತಿದ್ದರು. ಅಷ್ಟೊಂದು ಅರ್ಥಗರ್ಭಿತವಾಗಿರುತ್ತಿದ್ದವು. ಮಕ್ಕಳಿಗೆ ಕನ್ನಡದ ಅಕ್ಷರಗಳನ್ನು ಕಳಿಸೋಣ ಎಂದ ಅವರು, ಬರುವ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಕನ್ನಡದ ನಾಡು-ನುಡಿ, ಭಾಷಾಭಿಮಾನ, ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸಿದ್ಧರಾಗೋಣ. ತಮ್ಮ ನೆರೆ-ಹೊರೆಯವರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಬೇಕು. ಇದು ಕನ್ನಡದ ಜಾತ್ರೆ, ನಾವೆಲ್ಲರೂ ಕನ್ನಡದ ಸೇವಕರಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಮಸ್ತಾನ್ ಸೌಂಡ್ಸ್ ನ ಪ್ರತಿಭಾ ಆರ್ಕೆಷ್ಟ್ರಾ ವತಿಯಿಂದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ತಂಡದ ರಘುಪತಿ, ಸರಸ್ವತಿ ಮತ್ತು ಉಮೇಶ್ ಅವರು ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಮನ ಸೆಳೆದರು.
ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.
*ಮೌನಾಚರಣೆ:*
ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಂ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನಪ್ಪಿದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಕರ್ನಾಟಕ ಯುವ ಸಂಘದ ಅಧ್ಯಕ್ಷ ಬಿ.ಬಸವರಾಜ, ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಗಳಾದ ಮಲ್ಲನಗೌಡ, ವಲಿಸಾಬ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಡಾ.ರಾಜ್ ಕುಮಾರ್ ಅಭಿಮಾನಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share This Article
error: Content is protected !!
";