ಶಿವಮೊಗ್ಗ,ಜು.2: ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಗಳಡಿ ಪರಿಶಿಷ್ಟ ಜಾತಿ/ಪಂಗಡದ ಕಲಾವಿದರು ಮತ್ತು ಸಂಸ್ಥೆಗಳಿಗೆ ಕಲೆ-ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮತ್ತು ಆರ್ಥಿಕ ನೆರವನ್ನು ಒದಗಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಭದ್ರಾವತಿ ನಗರದ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಆಯೋಜಿಸಿದ್ದ ಮಹಿಳಾ ಡೊಳ್ಳು ಕುಣಿತ ಹಾಗೂ ಜನಪದ/ರಂಗಗೀತೆಗಳ ಕಲಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಗಳಡಿ ವಾರದಲ್ಲಿ ಮೂರು ದಿನ, 6 ತಿಂಗಳ ಕಾಲ 25 ಜನ ಪರಿಶಿಷ್ಟ ಜಾತಿಯ ಕಲಾವಿದರಿಗೆ ಡೊಳ್ಳು ಕುಣಿತ ತರಬೇತಿ ನೀಡಲಾಗುತ್ತಿದೆ. ಗಂಡು ಕಲೆಯೆಂದೇ ಹೆಸರಾಗಿರುವ ಡೊಳ್ಳು ಕುಣಿತದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರು ಆಸಕ್ತಿ ತೋರಿ ಕಲಿಯುತ್ತಿರುವುದು ವಿಶೇಷವಾಗಿದೆ. ಹಾಗೂ 15 ಜನರಿಗೆ ಜಾನಪದ ಗೀತೆ ಮತ್ತು ರಂಗಗೀತೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಸ್ವಾಗತ ಭಾಷಣ ಮಾಡಿದರು.
ಡೊಳ್ಳು ಕಲೆಯ ಬಗ್ಗೆ ಹಿರಿಯ ಡೊಳ್ಳು ಕಲಾವಿದರಾದ ಹೆಗ್ಗೋಡಿನ ಪಣಿಯಮ್ಮ ಹಾಗೂ ಮಂಜು ರಂಗಾಯಣ ಇವರು ರಂಗಗೀತೆ/ ಜಾನಪದ ಗೀತೆಗಳ ಬಗ್ಗೆ ಮಾಹಿತಿಯನ್ನು ಮಾಹಿತಿ ನೀಡಿದರು. ನಿಲಯ ಪಾಲಕರಾದ ಶೀಲಾ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ಇಲಾಖೆ ಸಿಬ್ಬಂದಿಗಳು, ಪೋಷಕರು ಹಾಜರಿದ್ದರು.