ಹಾಸನ ಏ.28- ದೇಶ ಕಟ್ಟುವುದರಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಬದ್ಧತೆ, ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜೊತೆಗೆ ನೌಕರರು ಶಿಸ್ತನ್ನು ಮೈಗೂಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ 2025 ರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸರ್ಕಾರಿ ನೌಕರರು ಇದ್ದಾಗ ಮಾತ್ರ ಆಡಳಿತ ಸುಗಮವಾಗಿರುತ್ತದೆ ಹಾಗೆಯೇ ಜನರ ಸಮಸ್ಯೆಗಳನ್ನು ಕೂಡ ಶೀಘ್ರವಾಗಿ ಬಗೆಹರಿಸಬಹುದು ಹಾಗಾಗಿ ಎಲ್ಲಾ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿ ಎಂದು ಹೇಳಿದರು.
ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ಜವಾಬ್ದಾರಿ ಅರಿತು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ, ಆದ್ಯತೆಯ ಮೇರೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಎಂದರಲ್ಲದೆ ನಾವು ಹೇಳಿದಂತೆ ಮಾಡಿ ತೋರಿಸಬೇಕು ಈ ನಿಟ್ಟಿನಲ್ಲಿ ಮಾತನ್ನು ಕೃತಿ ರೂಪಕ್ಕೆ ತರಬೇಕು ಎಂದರು.
ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಪ್ರತಿಯೊಂದು ಕೆಲಸ ಕಾರ್ಯಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ವೃತ್ತಿ ಜೀವನದಲ್ಲಿ ಯಾರು ಬೆರಳು ತೋರಿಸದಂತೆ ನಡೆಯಬೇಕು ಎಂದರು.
ಇ-ಆಫೀಸ್ ಬಳಸುವುದರಿಂದ ಪಾರದರ್ಶಕತೆ ಕಾಪಾಡಬಹುದು, ಪೇಪರ್ ಉಳಿತಾಯ ಮಾಡುವುದರೊಂದಿಗೆ ಪರಿಸರ ಸಂರಕ್ಷಣೆಯನ್ನು ಕೂಡ ಮಾಡಬಹುದು ಎಂದು ಇ-ಆಡಳಿತದ ಕುರಿತಾದ ಅನುಕೂಲಗಳ ಬಗೆಗೆ ವಿವರಿಸಿದರು.
ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ತಮ್ಮ ನಡತೆಯನ್ನು ಉತ್ತಮಪಡಿಸಿಕೊಳ್ಳುವಂತೆ ತಿಳಿಸಿದರಲ್ಲದೆ, ನೌಕರರು ಕ್ರಿಯಾಶೀಲರಾಗಿ ಕೆಲಸ ಮಾಡಲು ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಜಿಲ್ಲಾ ನೌಕರರ ಸಂಘವು ಆಯೋಜಿಸಬೇಕು ಜೊತೆಗೆ ಎಲ್ಲ ನೌಕರರು ತಮ್ಮ ಬಿಡುವಿನ ಸಂದರ್ಭಗಳಲ್ಲಿ ತಮಗಿಷ್ಟವಾದ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಜ್ಞಾನವೃದ್ಧಿ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್ ಅವರು ಮಾತನಾಡಿ ಇಂದು ರಾಷ್ಟç, ರಾಜ್ಯದಲ್ಲಿ ಕಾರ್ಯಾಂಗ ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಎಂದರೆ ಅದಕ್ಕೆ ಸರ್ಕಾರಿ ನೌಕರರ ಸಹಕಾರ ಮತ್ತು ಕೊಡುಗೆ ಇದೆ ಎಂದ ಅವರು ಈಗಾಗಲೇ ಅತ್ಯುತ್ತಮವಾಗಿ ಎರಡು ದಿನಗಳ ಕ್ರೀಡಾ ದಿನಾಚರಣೆಯನ್ನು ಕೂಡ ಆಚರಿಸಿದ್ದೇವೆ. ಅದ್ಭುತವಾಗಿ ಆ ಕಾರ್ಯಕ್ರಮವು ಕೂಡ ಮೂಡಿ ಬಂದಿದೆ ಎಂದರು.
ಇ-ಆಡಳಿತ, ಸರ್ವೇ ಹೀಗೆ ಎಲ್ಲಾ ವಿಚಾರಗಳಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಹೊಸ ಹೊಸ ಬದಲಾವಣೆಗಳು ಆಡಳಿತದಲ್ಲಾಗುತ್ತಿವೆ ಆ ಎಲ್ಲಾ ಬದಲಾವಣೆಗಳಿಗೂ ನೌಕರರು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರುವುದರಿಂದ ಉತ್ತಮ ಕೆಲಸಗಳು ಜಿಲ್ಲೆಯಲ್ಲಿ, ರಾಜ್ಯದಲ್ಲಿಯೂ ಆಗುತ್ತಿವೆ ಎಂದು ಹೇಳಿದರು.
ಗಣಕೀಕರಣ, ಇ-ಆಫೀಸ್ನಿಂದ ಹಂತ ಹಂತವಾಗಿ ಲೋಪ ದೋಷಗಳು ಕಡಿಮೆಯಾಗುತ್ತಿವೆ. ಉತ್ತಮ ಸೇವೆ ಮಾಡಿರುವಂತಹ ನೌಕರರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಹಾಗಾಗಿ 2023ರಲ್ಲಿ ಉತ್ತಮ ಸೇವೆ ಸಲ್ಲಿಸಿರುವಂತಹವರನ್ನ ಗುರುತಿಸಿ ಇಂದು ಸನ್ಮಾನಿಸುತ್ತಿದ್ದೇವೆ. ಇನ್ನೂ ಹೆಚ್ಚಿನ ನೌಕರರು ಈ ಗೌರವಕ್ಕೆ ಪಾತ್ರರಾಗಲಿ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ ನಾವೆಲ್ಲರೂ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದರೆ ಅದೇ ಬಹುದೊಡ್ಡ ಉಡುಗೊರೆ ಹಾಗಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಯ ಕಡೆಗೂ ಹೆಚ್ಚಿನ ಗಮನಹರಿಸಿ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣೇಗೌಡ ಅವರು ಮಾತನಾಡಿ ಸರ್ಕಾರಿ ನೌಕರರೆಲ್ಲರೂ ಒಂದು ದಿನವನ್ನು ಮೀಸಲಿಟ್ಟು ಈ ದಿನಾಚರಣೆಯಲ್ಲಿ ಸಂಭ್ರಮಿಸಬೇಕು. ಇಂದು 2023ರಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವಂಥವರನ್ನ ಗುರುತಿಸಿ ಹತ್ತು ಜನರನ್ನು ಇಂದು ಸನ್ಮಾನಿಸುತ್ತಿದ್ದೇವೆ, ಇದು ನೌಕರರಿಗೆ ಕೊಡುವಂತಹ ಗೌರವವಾಗಿದೆ. ಹಾಗಾಗಿ ಇಂತಹ ದಿನಾಚರಣೆಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ 2023ರಲ್ಲಿ ಉತ್ತಮ ಸೇವೆ ಸಲ್ಲಿಸಿರುವಂತಹ ನೀರಾವರಿ ಇಲಾಖೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಮೂರ್ತಿ ಟಿ.ಎಮ್, ಅರಸೀಕೆರೆ ತಾಲ್ಲೂಕಿನ ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ತುರ್ತು ವಾಹನ ಚಾಲಕರಾದ ಕೃಷ್ಣಮೂರ್ತಿ ಎಮ್.ಆರ್, ಹೊಳೆನರಸೀಪುರ ತಾಲ್ಲೂಕಿನ ಮೂಡಲಹಿಪ್ಪ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಂಗಸ್ವಾಮಿ.ಎಸ್.ಎ, ಜಿಲ್ಲಾ ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಪ್ರದೀಪ್ ಕುಮಾರ್.ಎನ್.
ಕಂದಾಯ ಇಲಾಖೆಯ ಬೇಲೂರು ತಾಲ್ಲೂಕು ಕಚೇರಿಯ ಶಿರಸ್ತೇದಾರ್ ನೀಯೋಜನೆ ಮೇರೆ ಜಿಲ್ಲಾಧಿಕಾರಿಗಳ ಕಚೇರಿ ಕೋದಂಡರಾಮ ಶೆಟ್ಟಿ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ|| ಬಿ.ಸಿ.ರವಿಕುಮಾರ್, ಹಾಸನ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವಿಜಯ್.ಬಿ.ಎಂ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶರಾದ ಡಾ.ಎ.ಬಿ.ಸಂಜಯ್, ಹಾಸನ ಪೊಲೀಸ್ ಅಧಿಕ್ಷಕರ ಕಚೇರಿಯ ಶೀಘ್ರಲಿಪಿಗಾರರಾದ ಲಕ್ಷಿö್ಮ.ಬಿ.ಎಸ್, ಕೃಷಿ ಇಲಾಖೆಯ ಅರೇಹಳ್ಳಿ ಕೃಷಿ ಅಧಿಕಾರಿ ಪ್ರಕಾಶ್ ಕುಮಾರ್.ಯು.ಎಂ. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ ಚಂದ್ರಶೇಖರ್, ಹಿಮ್ಸ್ ನಿರ್ದೇಶಕರಾದ ರಾಜಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅನಿಲ್ ಹೆಚ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ರಾಜು.ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.