ಬಳ್ಳಾರಿ,ಏ.07
ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಪಂ ನ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಒಂದು ಕುಟುಂಬಕ್ಕೆ 100 ದಿನಗಳ ನಿರಂತರ ಕೆಲಸ ನೀಡಲಾಗುತ್ತದೆ. ವಿಶೇಷ ಚೇತನರಿಗೂ ಸಹ ಮನರೇಗಾ ಯೋಜನೆಯಡಿ ಕೊಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಮಹಿಳೆಯರಿಗೆ ಕನಿಷ್ಠ ಶೇ.60 ರಷ್ಟು ಕಡ್ಡಾಯವಾಗಿ ಕೂಲಿ ಕೆಲಸ ನೀಡಲಾಗುವುದು ಹಾಗೂ ಕಡ್ಡಾಯವಾಗಿ ಎನ್ಎಂಎoಎಸ್ ಆಪ್ ಮೂಲಕವೇ ಎರಡು ಬಾರಿ ಹಾಜರಾತಿ ಹಾಕಬೇಕು ಎಂದು ಹೇಳಿದರು.
ಮುಖ್ಯವಾಗಿ ಅಳತೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಕೂಲಿ ಕಡಿಮೆಯಾಗಲಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ 60 ವಯಸ್ಸಿನ ವಯೋಮಾನದವರು ಕೆಲಸದಲ್ಲಿ ತೊಡಗಿಸಿಕೊಳ್ಳಬಾರದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ನರೇಗಾ ಕೆಲಸಗಾರರು ಕೂಸಿನ ಮನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮನರೇಗಾ ಯೋಜನೆಯಡಿ ಕೂಲಿ ಮೊತ್ತವು 370 ರೂ. ಹೆಚ್ಚಳ ಆಗಿರುವುದರ ಕುರಿತು ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ಕುರುಗೋಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ನಿರ್ಮಲ, ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ಬಾದನಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ತಾಲ್ಲೂಕು ನರೇಗಾ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯತ್, ತಾಂತ್ರಿಕ ಸಂಯೋಜಕರು, ಐ.ಇ.ಸಿ ಸಂಯೋಜಕರು, ಬಿಎಫ್ಟಿ, ಗ್ರಾ.ಪಂ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರರು ಹಾಗೂ ಕೂಲಿಕಾರರು ಹಾಜರಿದ್ದರು.