ಹೊಸಕೋಟೆ– ಜೂನ್-೩೦.
ಸುಖ ಶಾಂತಿ ಬಯಸುವ ಮನುಷ್ಯ ಜೀವನದಲ್ಲಿ ಕೆಲವು ಆದರ್ಶ ಮೌಲ್ಯಗಳನ್ನು ಬೆಳೆಸಿಕೊಂಡು ಬರಬೇಕಾಗುತ್ತದೆ. ಬಾಳಿನ ವಿಕಾಸಕ್ಕೆ ಗುರಿ ಮತ್ತು ಗುರು ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ಹೆಚ್.ಜೆ.ಎಸ್.ಎಸ್.ಕನ್ವೆನ್ಷನ್ ಹಾಲ್ನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಇಷ್ಟಲಿಂಗ ಮಹಾಪೂಜಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಹಣ ಗಳಿಕೆಯಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನ ಮತ್ತು ಗುರು ಕಾರುಣ್ಯ ಪಡೆಯಲು ಶ್ರಮಿಸಬೇಕಾಗಿದೆ. ಭೌತಿಕ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಸಂಪತ್ತು ಬಾಳಿನ ನಿಜವಾದ ಸಂಪತ್ತೆAಬುದನ್ನು ಮರೆಯಬಾರದು. ಪ್ರಾಣ ಯೌವನ ಕಾಲ ಒಮ್ಮೆ ಕಳೆದು ಹೋದರೆ ಮತ್ತೆಂದೂ ತಿರುಗಿ ಬರಲಾರವು. ಸದ್ವಿದ್ಯೆ, ಉತ್ತಮ ಸಂಬAಧ ಮತ್ತು ಆದರ್ಶ ಸ್ನೇಹ ಜೀವನ ಶ್ರೇಯಸ್ಸಿಗೆ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ಮೌಲ್ಯದ ಸಚ್ಚಿಂತನೆಗಳು ಬದುಕಿ ಬಾಳುವ ಜನಸಮುದಾಯಕ್ಕೆ ಬೆಳಕು ತೋರುತ್ತವೆ. ಅವರು ಬೋಧಿಸಿದ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಹೊಸಕೋಟೆ ನಗರ ಇತಿಹಾಸದಲ್ಲಿ ಹಿಂದೆAದೂ ಮಾಡದಿರುವ ಮಹತ್ಕಾರ್ಯವನ್ನು ತಾವೆಲ್ಲ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದೀರೆಂದು ತಮ್ಮ ಹರುಷ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಶಾಸಕ ಬಿ.ಶರತ್ ಬಚ್ಚೇಗೌಡ ಮಾತನಾಡಿ ಅಶಾಂತಿಯ ಬದುಕಿನಲ್ಲಿ ಸಮಾಧಾನ ಶಾಂತಿ ಕಾಣಬೇಕಾದರೆ ಧರ್ಮದ ಪರಿಪಾಲನೆಯನ್ನು ಮಾಡಬೇಕಾಗುತ್ತದೆ. ಆಚಾರ್ಯರು ಶರಣರು ಮತ್ತು ಮಹಾನುಭಾವರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ಆಶಾಕಿರಣವಾಗಿವೆ ಎಂದರು. ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್ ಮಾತನಾಡಿ ಪ್ರತಿಯೊಬ್ಬ ಮನುಷ್ಯ ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಗೆ ಇಟ್ಟು ಬಾಳಬೇಕು. ನಂಬಿ ನಡೆದರೆ ಏನೆಲ್ಲ ಸೌಭಾಗ್ಯ ಪ್ರಾಪ್ತಿ. ನಂಬಿಗೆ ವಿಶ್ವಾಸ ಕಳೆದುಕೊಂಡರೆ ಬದುಕು ಬರಡಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳು ನಮ್ಮೆಲ್ಲರಿಗೂ ದಾರಿದೀಪವೆಂದರು.
ನೇತೃತ್ವ ವಹಿಸಿದ ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಭಾಗದ ಭಕ್ತರ ಬಹು ದಿನಗಳ ಕನಸು ನನಸಾದ ಸುದಿನ. ಶ್ರೀ ರಂಭಾಪುರಿ ಜಗದ್ಗುರುಗಳವರ ಶುಭಾಗಮನ ಈ ಭಾಗದ ಭಕ್ತರ ಸೌಭಾಗ್ಯವೆಂದರೆ ತಪ್ಪಾಗದು. ವಿವಿಧ ಸಂಘ ಸಂಸ್ಥೆಗಳ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು ಸಂತೋಷ ಉಂಟು ಮಾಡಿದೆ ಎಂದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಗುಮ್ಮಳಾಪುರದ ಶಿವಾನಂದ ಶಿವಾಚಾರ್ಯರು, ರಾಜಾಪುರ ಡಾ|| ರಾಜೇಶ್ವರ ಶಿವಾಚಾರ್ಯರು ಹಾಗೂ ಬೆಳ್ಳಾವಿ ಮಹಾಂತ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಹೊಸಕೋಟೆ ನಗರದ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಎಂ.ಮಹೇಶ್ ಸ್ವಾಗತಿಸಿದರು. ಪ್ರಶಾಂತ ರಿಪ್ಪನ್ಪೇಟೆ ನಿರೂಪಿಸಿದರು.
ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಬೆಳಿಗ್ಗೆ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ೨೫ ವೀರಮಾಹೇಶ್ವರ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ ನೀಡಲಾಯಿತು.
ಸಂಜೆ ನಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದು ಪುನೀತರಾದರು.
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು
ಬಾಳಿನ ವಿಕಾಸಕ್ಕೆ ಗುರಿ ಗುರು ಮುಖ್ಯ : ಶ್ರೀ ರಂಭಾಪುರಿ ಜಗದ್ಗುರುಗಳು
